Homeಸುದ್ದಿಗಳುಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ ಕಾಲ ಜರುಗಲಿದೆ. ಕಾರಂಜಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯುವವು.

ದಿನಾಂಕ ೨೫-೧೦-೨೦೨೧ರಂದು ಸೋಮವಾರ ಸಾಯಂಕಾಲ ೬ ಗಂಟೆಗೆ ಉದ್ಘಾಟನಾ ಸಮಾರಂಭ ಜರುಗುವುದು. ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ-ಬೆಳಗಾವಿ ಅವರು ಸಾನ್ನಿಧ್ಯ ವಹಿಸುವರು.

ಮೋಟಗಿಮಠದ ಶ್ರೀ ಮ.ನಿ.ಪ್ರ. ಪ್ರಭುಚನ್ನಬಸವ ಸ್ವಾಮಿಗಳಿಗೆ ಗೌರವ ಸನ್ಮಾನ ಜರುಗುವುದು. ಶೇಗುಣಸಿಯ ಶ್ರೀ ಮಹಾಂತದೇವರು ಮತ್ತು ಶ್ರೀ ಶಿವಯೋಗಿ ದೇವರು ಸಮ್ಮುಖ ವಹಿಸುವರು. ಶಾಸಕರಾದ ಅನಿಲ ಬೆನಕೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.

ಇದೇ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಅವರ ಅನುದಾನದಡಿಯಲ್ಲಿ ನವೀಕೃತಗೊಂಡ ಶ್ರೀ ಕಾರಂಜಿಮಠದ ಪ್ರಾಂಗಣದ ಲೋಕಾರ್ಪಣೆಯು ಜರುಗುವುದು. ಗದುಗಿನ ಪಂ. ಶ್ರೀ ಕಲ್ಲಿನಾಥ ಶಾಸ್ತ್ರಿಗಳವರಿಂದ ಐದು ದಿನಗಳ ಕಾಲ ‘ಜೀವನ ದರ್ಶನ ಪ್ರವಚನ’ ಜರುಗುವುದು.

ದಿನಾಂಕ ೨೯ ರಂದು ಶುಕ್ರವಾರ ಸಾಯಂಕಾಲ ೬ ಗಂಟೆಗೆ ಪ್ರವಚನ ಮಂಗಲ ಮತ್ತು ಸಮಾರೋಪ ಸಮಾರಂಭವು ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಜರುಗುವುದು. ಹುಕ್ಕೇರಿ ಹಿರೇಮಠದ ಪೂಜ್ಯ ಶ್ರೀ ಷ.ಬ್ರ.. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸುವರು.

ನಿಲಜಿ ಅಲೌಕಿಕ ಧ್ಯಾನಮಂದಿರದ ಪೂಜ್ಯ ಶ್ರೀ ಶಿವಾನಂದ ಗುರೂಜಿಯವರು ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿಗಳಾದ ಎಂ. ಜಿ. ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಚಿತ್ರಕಲಾವಿದೆ ಶ್ರೀಮತಿ ಶಿಲ್ಪಾ ಹೆಚ್. ಖಡಕಭಾವಿ ಅವರಿಗೆ ಗೌರವ ಸಮ್ಮಾನ ನಡೆಯುವುದು. ಪ್ರತಿದಿನ ಎಸ್.ಎನ್. ಮುತಾಲಿಕ ದೇಸಾಯಿ ಹಾಗೂ ಕಾರಂಜಿಮಠದ ಮಾತೃಮಂಡಳಿ ತಾಯಂದಿರಿಂದ ಸಾಮೂಹಿಕ ಪ್ರಾರ್ಥನೆ ನಡೆಯುವುದು ಎಂಬುದಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.

ಸಂಪರ್ಕ ನಂ: ೯೪೪೮೧೪೦೪೭೬

RELATED ARTICLES

Most Popular

error: Content is protected !!
Join WhatsApp Group