Homeಸುದ್ದಿಗಳುಎಲ್ಲ ದುಃಖಗಳಿಂದ ಬಿಡುಗಡೆ ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುತ್ತಾರೆ - ಸದ್ಗುರು ಶ್ರೀ ಸಿದ್ಧಶಿವಯೋಗಿಗಳು

ಎಲ್ಲ ದುಃಖಗಳಿಂದ ಬಿಡುಗಡೆ ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುತ್ತಾರೆ – ಸದ್ಗುರು ಶ್ರೀ ಸಿದ್ಧಶಿವಯೋಗಿಗಳು


ಮುನವಳ್ಳಿಃ ಮಾನವನು ಎಲ್ಲ ದುಃಖಗಳಿಂದ ಬಿಡುಗಡೆಯನ್ನು ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುವರು. ಇದನ್ನು ಪಡೆಯಲು ಸಾಗುವ ಸಾಧನಾ ಮಾರ್ಗವೇ ಕೈವಲ್ಯ ಪದ್ಧತಿ.ಇದು ಪರಮಾತ್ಮನ ಕೃಪೆಯಿಂದ ಹಾಗೂ ಗುರುವಿನ ಮಾರ್ಗದರ್ಶನದಿಂದ ಆಗಬೇಕಾಗುತ್ತದೆ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಲಿಂ.ಪೂಜ್ಯ ಶ್ರೀ ವಿಜಯಾನಂದ ಮಹಾಸ್ವಾಮಿಗಳಿಂದ ಬಹಳ ಸರಳ ಸುಂದರವಾಗಿ ಸತ್ಸಂಗ ಸಂದರ್ಭದಲ್ಲಿ ತಿಳಿಸಿದ ವಿಚಾರಗಳನ್ನು ಸತ್ಸಂಗಿಗಳಾದ ಯಶವಂತ ಗೌಡರ ಅವರು ನಿರೂಪಿಸಿರುವ ಕೈವಲ್ಯ ಪದ್ಧತಿ ಮತ್ತು ಅವರ ಅನುಭವದ ವಿಚಾರಧಾರೆಗಳನ್ನು ಒಳಗೊಂಡ ಸ್ಪೂರ್ತಿ ಎರಡೂ ಗ್ರಂಥಗಳು ಅಮೂಲ್ಯವಾದವುಗಳು ಇಂಥಹ ಗ್ರಂಥಗಳನ್ನು ನಾವು ನಮಗೆ ಬಿಡುವಾದಾಗ ಓದುವುದಲ್ಲ. ಈ ಗ್ರಂಥಗಳನ್ನು ನಾವೇ ಬಿಡುವು ಮಾಡಿಕೊಂಡು ಓದುವಂಥವುಗಳು”ಎಂದು ದೇವರ ಹುಬ್ಬಳ್ಳಿಯ ಸಿದ್ದಾಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಸಿದ್ಧಶಿವಯೋಗಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಅವರು ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ಶಿಂದೋಗಿ ಮುನವಳ್ಳಿಯಲ್ಲಿ ಜರುಗಿದ ‘ಕೈವಲ್ಯ ಪದ್ಧತಿ’ ಹಾಗೂ ‘ಸ್ಪೂರ್ತಿ’ ಗ್ರಂಥಗಳ ಬಿಡುಗಡೆ ಸಮಾರಂಭ ದಲ್ಲಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಬೇವಿನಕೊಪ್ಪದ ಶ್ರೀ ನಿತ್ಯಾನಂದ ಧ್ಯಾನ ಮಂದಿರದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ವಿಜಯಾನಂದ ಮಹಾಸ್ವಾಮಿಗಳು “”ಬದುಕಿನ ಮೌಲ್ಯ ತಿಳಿಸುವುದು ಕೈವಲ್ಯಪದ್ಧತಿ. ಬಾಳಿನಲ್ಲಿ ಬರುವ ಕಷ್ಟ ನಷ್ಟಗಳಿಗೆ ಪರಿಹಾರ ಸೂಚಿಸುವುದು ಸ್ಪೂರ್ತಿ ಈ ಎರಡು ಗ್ರಂಥಗಳ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದು ನನಗೂ ಸಂತಸ ತಂದಿದೆ. ಲಿಂಗೈಕ್ಯ ವಿಜಯಾನಂದರು ಮತ್ತು ನಾನು ಪರಮ ಪೂಜ್ಯ ನಿತ್ಯಾನಂದರ ಶಿಷ್ಯರು. ನೀವೆಲ್ಲ ಪುಣ್ಯವಂತರು ವಿಜಯಾನಂದರ ಆಗಮನದಿಂದ ಇಲ್ಲಿ ಸತ್ಸಂಗದ ಮೂಲಕ ಸತ್ಕಾರ್ಯ ಜರುಗುವಂತಹ ಸ್ಥಳ ಇದಾಗಿದೆ.ಅದನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವಿರಿ. ಮುಕ್ತಾನಂದ ಪೂಜ್ಯರ ಮೂಲಕ ಅದು ಸಾಕಾರವಾಗುತ್ತಿದೆ.” ಎಂದು ಸಿದ್ದಾರೂಢರ ಮತ್ತು ನಿತ್ಯಾನಂದರ ಘಟನೆಗಳ ದೃಷ್ಟಾಂತದ ವಿವರಣೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಮಾತನಾಡಿ “ಗುರುಕರುಣೆಯ ಫಲದಿಂದ ಎರಡು ಗ್ರಂಥಗಳ ಲೋಕಾರ್ಪಣೆ ಸಾರ್ಥಕಗೊಂಡಿದೆ.ಕಳೆದ ಮೂರು ವರ್ಷಗಳಿಂದ ಎರಡು ಗ್ರಂಥಗಳು ರೂಪುಗೊಳ್ಳುತ್ತ ಸಾಗಿಬಂದು ಇಂದು ಲೋಕಾರ್ಪಣೆಗೊಳ್ಳುವ ಕುರಿತು ಜರುಗಿದ ಸಂದರ್ಭಗಳ ಕುರಿತು.”ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸತ್ಸಂಗಿಗಳಾದ ಯಶವಂತ ಗೌಡರ ಗ್ರಂಥ ರಚನೆಯಾಗಲು ಹಿಂದಿನ ಪೂಜ್ಯರಾದ ವಿಜಯಾನಂದರ ಕೃಪೆ ಹಾಗೂ ದೇವರ ಹುಬ್ಬಳ್ಳಿಯ ಪೂಜ್ಯರು ಮತ್ತು ಮುಕ್ತಾನಂದರ ಆಶೀರ್ವಾದ ಮೂಡಿ ಬಂದ ಬಗೆಯನ್ನು ಪ್ರಾಸ್ತಾವಿಕವಾಗಿ ಮಾತನಾಡುತ್ತ ತಿಳಿಸಿದರು.

ಇದೇ ಸಂದರ್ಭದಲ್ಲಿ ಸತ್ಸಂಗಿಗಳಾದ ಹಿರಿಯರಾದ ಮಲ್ಲಿಕಾರ್ಜುನ ಹೊನ್ನಳ್ಳಿ ದಂಪತಿಗಳನ್ನು ಮತ್ತು ಯಶವಂತ ಗೌಡರ ದಂಪತಿಗಳನ್ನು ಗೌರವಿಸುವ ಮೂಲಕ ಸನ್ಮಾನಿಸಲಾಯಿತು.

ಮುನವಳ್ಳಿ ಸಿಂದೋಗಿ ಹಾಗೂ ಸುತ್ತ ಮುತ್ತಲಿನ ಸತ್ಸಂಗದ ಭಕ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಾಯತ್ರಿ ಹೊನ್ನಳ್ಳಿ ಇವಳಿಂದ ಗೀತಗಾಯನ ಜರುಗಿತು. ವಿಜಯಲಕ್ಷ್ಮಿ ಅಜವಾನರಿಂದ ಪ್ರಾರ್ಥನೆ ಜರುಗಿತು. ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಶಿಕ್ಷಕರಾದ ಬಿ.ಬಿ.ಹುಲಿಗೊಪ್ಪ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಗೆ ಮಹಾಮಂಗಳಾರತಿ ಹಾಗೂ ಪ್ರಸಾದದೊಂದಿಗೆ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಸಂಪನ್ನಗೊಂಡಿತು.

RELATED ARTICLES

Most Popular

error: Content is protected !!
Join WhatsApp Group