Homeಸುದ್ದಿಗಳುಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಪರಿಷತ್ತಿನಿಂದ ಗ್ರಾಮಸ್ಥರಿಗೆ ಅಭಿನಂದನೆ

ಬೈಲಹೊಂಗಲ: ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬೈಲಹೊಂಗಲ ತಾಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಗ್ರಾಮದ ಸಮಸ್ತ ಗುರು ಹಿರಿಯರಿಗೆ, ಸ್ವಾಗತ ಹಾಗೂ ಉಪಸಮಿತಿಗಳ ಪದಾಧಿಕಾರಿಗಳಿಗೆ, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರಿಗೆ, ಶಾಲಾ ಕಾಲೇಜುಗಳ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಎಸ್.ಡಿ.ಎಂ.ಸಿ ಪದಾಧಿಕಾರಿಗಳಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ, ಊರಿನ ಗಣ್ಯ ಮಾನ್ಯರಿಗೆ, ಸಹಕಾರಿ ಹಾಗೂ ಕನ್ನಡಪರ ಸಂಘ ಸಂಸ್ಥೆಗಳಿಗೆ ಸಮ್ಮೇಳನ ವ್ಯವಸ್ಥಿತ ರೀತಿಯಲ್ಲಿ ನಡೆಯಲು ಸಹಕರಿಸಿದ ಗ್ರಾಮದ ಎಲ್ಲರಿಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದಿಂದ ಅಭಿನಂದನೆ ಸಲ್ಲಿಸುವುದರ ಮೂಲಕ ಧನ್ಯವಾದ ತಿಳಿಸಲಾಯಿತು.

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ವರಿಗೂ ಕೃತಜ್ಞತೆ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಅತ್ಯಂತ ಕಡಿಮೆ ಸಮಯವಿದ್ದರೂ ಸಕಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ತನುಮನಧನದಿಂದ ಶ್ರಮಿಸಿದ ಗ್ರಾಮದ ಪ್ರತಿಯೊಬ್ಬರೂ ಸಮ್ಮೇಳನದ ಯಶಸ್ಸಿಗೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡದ ಅಕ್ಷರ ಜಾತ್ರೆಯನ್ನು ಊರ ಹಬ್ಬವೆಂದು ಭಾವಿಸಿ ಅದ್ದೂರಿಯಾಗಿ ಆಚರಿಸಿದ್ದು ಖುಷಿ ನೀಡಿದೆ ಎಂದು ಅವರು ಹೇಳಿದರು. ಪರಿಷತ್ತಿನ ಮಾರ್ಗದರ್ಶಿ ಮಂಡಳಿಯ ಸದಸ್ಯರಾದ ಎಂ.ಡಿ.ನಂದೆನ್ನವರ ಮಾತನಾಡಿ ಸಂಘಟನೆಯಲ್ಲಿ ಅದ್ಭುತ ಶಕ್ತಿಯಿದೆ ಎಂಬುದನ್ನು ದೇವಲಾಪೂರದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. 

ಸ್ವಾಗತ ಸಮಿತಿ ಅಧ್ಯಕ್ಷರಾದ ಈಶ್ವರ ಉಳ್ಳೇಗಡ್ಡಿ ಮಾತನಾಡಿ ಉಪಸಮಿತಿಗಳಿಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿದ್ದು ಗ್ರಾಮದ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮದವರೆಲ್ಲ ಒಗ್ಗಟ್ಟಾಗಿ ಸೇವಾ ಮನೋಭಾವದಿಂದ ಕೆಲಸ ಮಾಡಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು. ಸಹ ಕಾರ್ಯದರ್ಶಿಗಳಾದ ಗುರುದೇವ ಮೂಲಿಮನಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಡೆದ ಸಮ್ಮೇಳನದಲ್ಲಿ ದೂರದ ಊರುಗಳಲ್ಲಿದ್ದರೂ ಸಮ್ಮೇಳನಕ್ಕೆ ಎಲ್ಲರೂ ಆಗಮಿಸಿ ಸಕ್ರಿಯವಾಗಿ ಭಾಗಿಯಾಗಿದ್ದು ಶ್ಲಾಘನೀಯ ಎಂದು ಹೇಳಿದರು. ನಿವೃತ್ತ ಶಿಕ್ಷಕರಾದ ಎಚ್.ಬಿ. ಸುಂಕದ ಮಾತನಾಡಿ ಸಮ್ಮೇಳನದ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು. ಪರಿಷತ್ತಿನ ಪದಾಧಿಕಾರಿಗಳ ಸಹಕಾರ ಹಾಗೂ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು. 

ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ ಅವರು ಎಲ್ಲರಿಗೂ ವಚನ ಸುಧೆ ಗ್ರಂಥ ಸಮರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಮಾರ್ಗದರ್ಶಿ ಮಂಡಳಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಬಿ.ಎನ್. ಕಸಾಳೆ, ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಬಿ.ಎಸ್.ಪಾಟೀಲ, ಉಪಾಧ್ಯಕ್ಷರಾದ ಉದಯ ಬೆಳಗಾವಿ, ರಾಮಲಿಂಗ ಯರಗಟ್ಟಿ, ಜಿ.ಬಿ. ಕೇಂದ್ರಿ, ವಿಜಯಕುಮಾರ ಉಪಾಧ್ಯೆ,  ಶೇಖನಗೌಡ ಪಾಟೀಲ, ಸೋಮನಗೌಡ ಪಾಟೀಲ, ಶಶಿಧರ ಬಂದಕ್ಕನವರ, ಶಂಭು ರುದ್ರಾಪೂರ, ಬಾಳೇಶ ಉಪ್ಪಾರ, ಶಾಂತಿನಾಥ ಉಪಾಧ್ಯೆ, ಮಂಜುನಾಥ ಗೋಡಿ, ಯಲ್ಲಪ್ಪ ಭೈರನ್ನವರ,  ಫಕ್ರುಸಾಬ ನದಾಫ್, ಅಶೋಕ ಮೂಲಿಮನಿ, ಮಂಜುಳಾ ಉಪಾಧ್ಯೆ, ಜಯಶ್ರೀ ಪಾಟೀಲ, ದೀಪಾ ಸಾಧುನವರ, ಡಿ.ಜಿ.ಜಿಡ್ಡಿಮನಿ ಮತ್ತಿತರರು ಉಪಸ್ಥಿತರಿದ್ದರು. ಅಂಬರಶೆಟ್ಟಿ ಪ್ರಾರ್ಥಿಸಿದರು. ಗಂಗನಗೌಡ ಪಾಟೀಲ ಸ್ವಾಗತಿಸಿದರು. ಅನಂತ ಮರೆಣ್ಣವರ ನಿರೂಪಿಸಿದರು. ರಾಜು ಹಕ್ಕಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group