ಸಿಂದಗಿ: ಮಹಾಶಿವರಾತ್ರಿಯ ನೈಜ ಸಂದೇಶ ಲೋಕಕಲ್ಯಾಣಕ್ಕಾಗಿಯೇ ನಮ್ಮ ಜೀವನ ಮುಡುಪಾಗಿರಬೇಕೆಂಬುದು ಕ್ಷಣಕ್ಷಣವೂ ಭಗವಂತನ ಪ್ರಜ್ಞೆಯಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ರಾಜಯೋಗಿನಿ ಪವಿತ್ರಾ ಅಕ್ಕನವರು ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ 87ನೇ ತ್ರಿಮೂರ್ತಿ ಶಿವಜಯಂತಿ ಪ್ರಯುಕ್ತ ಕೇಕ್ ಕತ್ತರಿಸಿ ಮತ್ತು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈಶಾವಾಸ್ಯಂ ಇದಂ ಸರ್ವಂ. ಎಲ್ಲವೂ ಶಿವಮಯ. ಎಲ್ಲವೂ ಶಿವನಿಂದ ದೊರೆತಿದೆ. ಶಿವನು ಎಲ್ಲವನ್ನು ನೀಡಿದ್ದಾನೆ. ಸರಳ, ಸುಂದರ, ನಿರಾಡಂಬರ, ತ್ಯಾಗಮಯ ಜೀವನದ ಸಂದೇಶ ಆ ಶಿವನದು ಮಹಾದೇವನ ಇರುವಿಕೆಯೇ ಮಾನವರಿಗೆ ಮಾರ್ಗದರ್ಶನ, ಹಾಗಾಗಿ ಸ್ವಯಂ ಭಗವಂತ ಧರೆಗೆ ಬಂದು 87 ವಸಂತಗಳಾಗಿವೆ. ಶಿವರಾತ್ರಿ ದಿನದಂದು ಪರಮಪಿತ ಶಿವನನ್ನು ಪೂಜಿಸುವುದರಿಂದ ಆ ವ್ಯಕ್ತಿಯು ಅಪೇಕ್ಷಿತ ವರವನ್ನು, ಸುಖ – ಶಾಂತಿಯನ್ನು ಸಂಪತ್ತು – ಸಮೃದ್ಧಿಯನ್ನು, ಯಶಸ್ಸು – ಪ್ರಗತಿಯನ್ನು ಮತ್ತು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಎಂದರು. ಶಿವನ ಯತಾರ್ಥ ಪರಿಚಯವಿಲ್ಲದ ಕಾರಣ ನಾವು ಗುಡಿ ಗುಂಡಾರಗಳನ್ನು ಸುತ್ತುತ್ತಿದ್ದೇವೆ. ಕಲಿಯುಗ ಮತ್ತು ಸತಿಯುಗದ ಮಧ್ಯದಲ್ಲಿರುವ ಸಂಗಮ ಯುಗದಲ್ಲಿರುವ ನಾವುಗಳು ಶಿವನನ್ನು ಆರಾಧಿಸಿ ಅವನ ಗುಣಗಳನ್ನು ಧಾರಣೆ ಮಾಡಿಕೊಂಡು, ಅವರ ಶ್ರೀಮತದಂತೆ ನಡೆದು ಪಾವನರಾಗೋಣ ಎಂದರು.
ಈ ಸಂದರ್ಭದಲ್ಲಿ ಸಿ ಎಂ ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ. ಬಿ ಜಿ ಪಾಟೀಲ ಮಾತನಾಡಿ, ಪರಸ್ಪರ ವೈರುಧ್ಯಗಳಿಂದ ಕೂಡಿದ ಸಂಸಾರವನ್ನು ಪ್ರಕೃತಿ ಪ್ರೇಮದೊಂದಿಗೆ ಮೇಲು- ಕೀಳು ಎಂಬ ವ್ಯತ್ಯಾಸವಿಲ್ಲದ ಭೂತ ದಯೆಯೊಂದಿಗೆ ಕೇವಲ ಲೋಕ ಹಿತಕ್ಕಾಗಿ ಮಹಾದೇವನ ವಿಶೇಷತೆಗೆ ಮುಕುಟಪ್ರಾಯವಾಗಿ ಆಚರಿಸುತ್ತಿರುವುದು ಮಹಾಶಿವರಾತ್ರಿ ಹಬ್ಬವಾಗಿದೆ ಎಂದು ತಿಳಿಸಿದರು.
ಕುಮಾರಿ ಕಾವ್ಯ ನಾಯಕ ಪ್ರಾರ್ಥಿಸಿದರು. ಕುಮಾರಿ ಪ್ರಿಯಾಂಕ ಶಿವಸ್ಮೃತಿ ನಾಟ್ಯಗೈದರು. ಎಸ್ ಎಸ್ ಬುಳ್ಳಾ, ಕೆ.ಎಸ್.ಮೇತ್ರಿ, ತಾನಾಜಿ, ವಿಜಯಕುಮಾರ ತೇಲಿ, ಎಸ್. ಎಸ್.ಪಾಟೀಲ, ಎಸ್.ವೈ.ಬಿರಾದಾರ, ಎಂ.ಎಂ.ದೊಡಮನಿ, ಎಸ್.ಎಲ್.ಕೊರವಾರ, ಇಂದುಮತಿ ವಾರದ, ಮಲ್ಲಮ್ಮ ವಾಣಿಕಿಹಾಳ, ವರ್ಷಾ ಪಾಟೀಲ, ಶಿವನಗೌಡ ಬಿರಾದಾರ, ಸಿದ್ಧಲಿಂಗ ಚೌಧರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.