ಬೀದರ: ನನ್ನ ಯೋಗ್ಯತೆ ನೈತಿಕತೆಯ ಬಗ್ಗೆ ಮಾತನಾಡುವ ಸಚಿವ ಈಶ್ವರ ಖಂಡ್ರೆಯವರು ತಮಗೆ ಯೋಗ್ಯತೆ ಇದ್ದರೆ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಸೀರೆ ಹಂಚಿದ್ದು ಯಾಕೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಈಶ್ವರ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದರು.
ಈಶ್ವರ ಖಂಡ್ರೆ ಸುಳ್ಳಿನ ಬಾಜಾರದಲ್ಲಿ ಧೋಕಾ ದುಕಾನ ತೆಗೆದುಕೊಂಡು ಕುಳಿತಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.
ನ್ಯಾಷನಲ್ ಹೈವೇ ರಸ್ತೆಯ ಗುತ್ತಿಗೆದಾರರಿಗೆ ಖಂಡ್ರೆಯವರು ಯಾಕೆ ಪದೇ ಪದೇ ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು ಎಂಬುದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದ ಖೂಬಾ, ವೀರಶೈವ ಲಿಂಗಾಯತ ಧರ್ಮ ಪ್ರಧಾನ ಕಾರ್ಯದರ್ಶಿ ಎಂದು ಪದೇ ಪದೇ ಹೇಳಿಕೊಳ್ಳುವ ಅವರು ಅನುಭವ ಮಂಟಪದ ಬಗ್ಗೆ ಏಕೆ ಸದನದಲ್ಲಿ ಮಾತನಾಡಿಲ್ಲ ಎಂದು ಪ್ರಶ್ನೆ ಮಾಡಿದರಲ್ಲದೆ, ರಾಜ್ಯ ಬಜೆಟ್ ನಲ್ಲಿ ಅನುಭವ ಮಂಟಪ ವಿಷಯದ ಬಗ್ಗೆ ನೀವು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾತನಾಡಿಲ್ಲ ಮತ್ತು ಅನುದಾನವನ್ನೂ ಕೊಡಿಸಿಲ್ಲ ಇದು ನಿಮ್ಮ ಯೋಗ್ಯತೆ ಖಂಡ್ರೆಯವರೇ ಎಂದರು.
ಔರಾದ ತಾಲೂಕಿನ ಮಾಳೆಗಾಂವ ಸರ್ಕಲ್ ನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದ್ದು, ರೈತರು ಭೂಮಿ ಕೊಡಲು ಮುಂದಾಗುತ್ತಿದ್ದಾರೆ.ರೈತರಿಗೆ ನೀವು ಏನಾದರೂ ಹೇಳಿ ಭೂಮಿ ಕಿತ್ತು ಕೊಳ್ಳುವುದು ಮಾಡಿದರೆ ನಾವು ಸುಮ್ಮನೆ ಕೂಡುವುದಿಲ್ಲ. ಬೀದರ್ ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡುವುದು ಅವರ ಕುಟುಂಬದವರು ಕಾಂಪೌಂಡ್ ಗೋಡೆ ಕಟ್ಟುವಷ್ಟು ಸುಲಭ ಅಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದರು.
ಸಚಿವ ಈಶ್ವರ ಖಂಡ್ರೆ ಯೋಗ್ಯತೆಯೇ ಹೇಳುತ್ತದೆ ಭಾಲ್ಕಿಯಲ್ಲಿ ಅರವತ್ತು ವರ್ಷಗಳ ಕಾಲ ರಾಜಕೀಯ ಮಾಡುತ್ತಾ ಬಂದಿದ್ದಾರೆ ಅವರ ಕ್ಷೇತ್ರದಲ್ಲಿ ಇನ್ನೂ ಕ್ರೀಡಾಂಗಣ ಇಲ್ಲ, ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಬೀದರ್ ಜಿಲ್ಲೆಗೆ ಏನು ಅನುದಾನ ನೀಡಿಲ್ಲ ಇದು ನಿಮ್ಮ ಯೋಗ್ಯತೇನಾ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಂದ್ರ ಸಚಿವರ ಪ್ರಶ್ನೆ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ