ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿಯ ವಿದ್ಯಾಚೇತನ ಪ್ರಕಾಶನವು ರಾಜ್ಯ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಕೃತಿಗಳಿಗೆ ಕೊಡಮಾಡುವ ವಿದ್ಯಾಚೇತನ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಮಕ್ಕಳ ಸಾಹಿತಿಗಳಾದ ಬೆಳಗಾವಿಯ ಬಸವರಾಜ ಗಾರ್ಗಿ ಮತ್ತು ಸಿಂದಗಿಯ ಎಸ್.ಎಸ್. ಸಾತಿಹಾಳ ಆಯ್ಕೆಯಾಗಿದ್ದಾರೆ.
ಪ್ರಸಕ್ತ ವರ್ಷದ ಪ್ರಶಸ್ತಿಗೆ 2022ರಲ್ಲಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆವ್ಹಾನಿಸಿತ್ತು. ಬಂದ ಕೃತಿಗಳಲ್ಲಿ ಗದ್ಯವಿಭಾಗದಲ್ಲಿ ಬೆಳಗಾವಿಯ ಮಕ್ಕಳ ಸಾಹಿತಿ ಬಸವರಾಜ ಗಾರ್ಗಿ ಅವರ ಹಾಸ್ಟೇಲ್ ಮಕ್ಕಳ ಕಥೆಗಳು ಎಂಬ ಕಥಾ ಸಂಕಲನ, ಕವನ ವಿಭಾಗದಲ್ಲಿ ಸಿಂದಗಿಯ ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಕವನ ಸಂಕಲನ ಪ್ರಶಸ್ತಿಗಾಗಿ ಆಯ್ಕೆ ಆಗಿರುತ್ತವೆ.
ಜು. 16 ರಂದು ಸಿಂದಗಿ ಪಟ್ಟಣದಲ್ಲಿ ಜರಗುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಐದು ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಒಳಗೊಂಡಿರುತ್ತದೆ ಎಂದು ಪ್ರಕಾಶಕ ಹ.ಮ. ಪೂಜಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.