Dharwad: ಸಾಮಾಜಿಕ ಕಳಕಳಿ, ಜಾಗೃತಿ‌ ಮೂಡಿಸುವ ಕಿರುಚಿತ್ರ ‘ಸರು’

0
322

ಧಾರವಾಡ: ಇಂದಿನ ಆಧುನಿಕ‌ ಯುಗದಲ್ಲೂ ಪೋಷಕರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹ ಮಾಡುತ್ತಿದ್ದಾರೆ.‌ ಇದರಿಂದ ಮಕ್ಕಳ‌ ಶೈಕ್ಷಣಿಕ ‌ಬದುಕು ಹಾಳಾಗುತ್ತಿದೆ.‌  ಇಂಥ ಕಥಾವಸ್ತುವನ್ನು ಇಟ್ಟುಕೊಂಡು ಮೂಡಿಬಂದಿರುವ ‘ಸರು’ ಕಿರುಚಿತ್ರ, ಸಾಮಾಜಿಕ‌ ಕಳಕಳಿ ಹಾಗೂ ಸಮಾಜವನ್ನು ಜಾಗೃತಿಗೊಳಿಸುವ‌ ಕಿರುಚಿತ್ರ ಎಂದು ಧಾರವಾಡ‌ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹೇಳಿದರು.

ಅವರು ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಶಿಕ್ಷಣ-ಬಾಲ್ಯ ವಿವಾಹ ಜಾಗೃತಿ ಸಂದೇಶವುಳ್ಳ ‘ಸರು’ ಕಿರುಚಿತ್ರ ಬಿಡುಗಡೆಗೊಳಿಸಿ‌ ಮಾತನಾಡಿದರು.

‘ಮಕ್ಕಳು ದೇಶದ ಆಸ್ತಿ ಇದ್ದಂತೆ. ಅವರಿಗೆ ಒಳ್ಳೆಯ ಶಿಕ್ಷಣ ‌ಕೊಟ್ಟು ವಿದ್ಯಾವಂತರನ್ನಾಗಿ ಮಾಡಬೇಕು. ಪ್ರತಿಯೊಬ್ಬ ಮಕ್ಕಳು ಒಂದೊಂದು ಮುತ್ತುಗಳು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದರು.

‘ಶಿಕ್ಷಣ ಹಾಗೂ ಬಾಲ್ಯ ವಿವಾಹ ಜಾಗೃತಿ ಮೂಡಿಸುವ‌ ಉದ್ದೇಶ  ಇಟ್ಟುಕೊಂಡು ‘ಸರು’ ಕಿರುಚಿತ್ರ ಹೊರತಂದಿರುವ ಮಿಡಿಯಾ ಮೈಂಡ್ ಕ್ರಿಯೇಷನ್ಸ್ ತಂಡಕ್ಕೆ ಅಭಿನಂದನೆಗಳು. ಸ್ಥಳಿಯ ಕಲಾವಿದರು, ಅದರಲ್ಲೂ ಶಿಕ್ಷಕರನ್ನು ಬಳಸಿಕೊಂಡು ಚಿತ್ರೀಕರಣ ‌ಮಾಡಿರುವುದು ಶ್ಲಾಘನೀಯ’ ಎಂದರು.

‘ಮಿಡಿಯಾ‌ ಮೈಂಡ್ ಕ್ರಿಯೇಷನ್ಸ್ ತಂಡದ ಮುಂದಿನ ಎಲ್ಲ ಕಿರುಚಿತ್ರಗಳಿಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ’ ಎಂದರು.

ಧಾರವಾಡದ ಡಯಟ್ ಉಪನ್ಯಾಸಕಿ ಡಾ. ರೇಣುಕಾ ಅಮಲಝರಿ ಮಾತನಾಡಿ, ‘ಮಿಡಿಯಾ ಮೈಂಡ್ ಕ್ರಿಯೇಷನ್ಸ್ ಅವರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸರು ಕಿರುಚಿತ್ರ ಹೊರತಂದಿದ್ದಾರೆ. ಈ ತಂಡ ಇನ್ನೂ ಹೆಚ್ಚಿನ ಚಿತ್ರಗಳನ್ನು ನಿರ್ಮಿಸಲಿ. ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಸಹ ಕಿರುಚಿತ್ರಕ್ಕೆ ಕೈ ಜೋಡಿಸಿರುವುದಕ್ಕೆ ಅಭಿನಂದನೆಗಳು’ ಎಂದು ಕರೆ ನೀಡಿದರು.

ಇದೇ  ಸಂದರ್ಭದಲ್ಲಿ ಸರು ಕಿರುಚಿತ್ರ ಪ್ರದರ್ಶಿಸಲಾಯಿತು. 

ಶಿಕ್ಷಕ ಎಲ್.ಐ. ಲಕ್ಕಮ್ಮನವರ, ಮಲ್ಲಿಕಾರ್ಜುನ ಚರಂತಿಮಠ, ಸರಸ್ವತಿ ಸುಣಗಾರ, ನಿವೃತ್ತ ಶಿಕ್ಷಕಿ ಲೂಸಿ ಕೆ. ಸಾಲ್ಡಾನ, ಶಿಕ್ಷಕ ಸಂಜೀವ ಕುಂದಗೋಳ, ಪ್ರಭು ಹಂಚಿನಾಳ, ಮಲ್ಲಪ್ಪ ಹೊಂಗಲ, ಮಂಜುಳಾ ಕಲ್ಯಾಣಿ, ರೇಖಾ ಮೊರಬ, ಯಲ್ಲಪ್ಪ ಸಾಲಿ, ಶೆರೆವಾಡ ಗ್ರಾಮ ಪಂಚಾಯತಿ ಅದ್ಯಕ್ಷ ಶಿವಾನಂದ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಇದ್ದರು‌. 

ಛಾಯಾಗ್ರಾಹಕ‌ ಬಸವರಾಜ ಗೋಕಾವಿ ಸ್ವಾಗತಿಸಿದರು. ಶಿಕ್ಷಕ ವಾಯ್.ಬಿ.ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಿರಿಜಾ ಪಲ್ಲೇದ ನಿರೂಪಿಸಿದರು, ವೀಣಾ ಹೊಸಮನಿ ವಂದಿಸಿದರು.

Media Mind 24×7 ಯೂಟ್ಯೂಬ್ ‌ಚಾನೆಲ್‌ನಲ್ಲಿ‌ ಕಿರುಚಿತ್ರ ವೀಕ್ಷಿಸಿ

ಮಿಡಿಯಾ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಕಿರುಚಿತ್ರವನ್ನು ‘Media Mind 24×7 (https://www.youtube.com/@mediamind24x7) ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ಪಶ್ಚಾತಾಪ, ಬೆತ್ತಲೆ, ರೈತ ಇನ್ನಿಲ್ಲ, ಶಾಂತಗಂಗಾ ಕಿರುಚಿತ್ರಗಳನ್ನು ನಿರ್ಮಿಸಿದ್ದ ಮಿಡಿಯಾ ಮೈಂಡ್ ಕ್ರಿಯೆಷನ್ಸ್, ಈ ಬಾರಿ ‘ಸರು, ಶೈಕ್ಷಣಿಕ ಕಳಕಳಿಯ’ ಕಿರುಚಿತ್ರ ನಿರ್ಮಿಸಿದೆ. 

ಸಂತೋಷ್ ಎಫ್.ಜೆ. ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರಕ್ಕೆ  ಬಸವರಾಜ ಗೋಕಾವಿ ಛಾಯಾಗ್ರಹಣವಿದೆ. ಜಾನಪದ ತಜ್ಞ ಡಾ. ರಾಮೂ‌ ಮೂಲಗಿ, ಬಾಲಕಿ ರಿಯಾ ಹಣ್ಣಿಕೇರಿ, ಟಿಕ್‌ಟಾಕ್ ಕಾಕಾ ಸಿದ್ದಣ್ಣ ಕುಂಬಾರ,  ಶಿಕ್ಷಕರಾದ ಎಲ್.ಐ. ಲಕ್ಕಮ್ಮನವರ, ಗಿರಿಜಾ ಪಲ್ಲೇದ್, ವೈ.ಬಿ. ಕಡಕೋಳ, ವೀಣಾ ಹೊಸಮನಿ, ರೇಖಾ ಮೊರಬ, ಮಲ್ಲಪ್ಪ ಹೊಸ್ಕೇರಿ ಮುಂತಾದವರು ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.