ಬೀದರ್ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ನರೇಂದ್ರ ಮೋದಿಯಿಂದ ವರ್ಚುವಲ್ ಮೂಲಕ ಚಾಲನೆ

Must Read

ಬೀದರ: ಗಡಿ ಜಿಲ್ಲೆ ಬೀದರ್ ರೈಲ್ವೆ ನಿಲ್ದಾಣ ಕುತೂಹಲದಿಂದ ಕಾಯುತ್ತಿದೆ ಪ್ರಧಾನಿ ನರೇಂದ್ರ ಮೋದಿಯವರಿಂದ ನಿಲ್ದಾಣದಲ್ಲಿ ಅಮೃತ ಭಾರತ ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಲು. ರವಿವಾರ ನಡೆಯಲಿರುವ ಸಮಾರಂಭಕ್ಕಾಗಿ ಮದುವೆ ಮಂಟಪದ ಹಾಗೆಯೇ ಸಿಂಗಾರಗೊಂಡಿದೆ ಬೀದರ್ ರೈಲ್ವೆ ನಿಲ್ದಾಣ.

ರೈಲ್ವೆ ಇಲಾಖೆಯ ಅಮೃತ ಭಾರತ ನಿಲ್ದಾಣ ಯೋಜನೆಯಡಿ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಒಟ್ಟು 27 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಲ್ಲಿ ಬೀದರ್‌ ರೈಲು ನಿಲ್ದಾಣ ಕೂಡ ಸೇರಿರುವುದು ವಿಶೇಷ.

‘ಅಮೃತ ಭಾರತ ರೈಲು  ನಿಲ್ದಾಣ  ಯೋಜನೆಯಡಿ ಬೀದರ್‌ ರೈಲು ನಿಲ್ದಾಣದಲ್ಲಿ ಅತ್ಯುತ್ತಮ ಸಕಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹24.40 ಕೋಟಿ  ಅನುದಾನ ಮಂಜೂರು ಮಾಡಲಾಗಿದ್ದು ನಿಲ್ದಾಣದ ಅಭಿವೃದ್ಧಿ ಕಾರ್ಯ ಕಾಮಗಾರಿಗಳಿಗೆ  ಆಗಸ್ಟ್‌ 6ರಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ಆಗಸ್ಟ್‌  6 ರಂದು ಬೆಳಿಗ್ಗೆ 9.30ಕ್ಕೆ ಬೀದರ್‌ ರೈಲು ನಿಲ್ದಾಣದ ಮುಂಭಾಗದಲ್ಲಿ ನಡೆಯಲಿದೆ. ಅದಾದ ನಂತರ ಕೆಲಸ ತ್ವರಿತ ಗತಿಯಲ್ಲಿ ಆರಂಭಗೊಂಡು 2024ರ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘ನಾನು ಸಂಸದನಾದ ಬಳಿಕ ಬೀದರ್‌ನಿಂದ 13 ಹೊಸ ರೈಲುಗಳನ್ನು ಪ್ರಾರಂಭಿಸಿದ್ದೇನೆ. ತೆಲಂಗಾಣದ ವಿಕಾರಾಬಾದ್‌ನಿಂದ ಮಹಾರಾಷ್ಟ್ರದ ಪರಳಿವರೆಗೆ ₹262.12 ಕೋಟಿಯಲ್ಲಿ 269 ಕಿ.ಮೀ ಮಾರ್ಗದ ವಿದ್ಯುದೀಕರಣ ಕಾಮಗಾರಿ ಮಂಜೂರುಗೊಳಿಸಿ ಪೂರ್ಣಗೊಳಿಸಿದ್ದೇನೆ ಎಂದು ಹೇಳಿದರು.

 ಬೀದರ್‌-ಯಶವಂತಪುರ ಲಾತೂರ್‌-ಯಶವಂತಪುರ ಬೀದರ್‌-ಮುಂಬೈ ಹೈದರಾಬಾದ್‌-ಬೀದರ್‌ ಬೀದರ್‌-ಮಚಲಿಪಟ್ಟಣ ರೈಲುಗಳು ವಿದ್ಯುತ್‌ ಮಾರ್ಗದಲ್ಲಿ ಸಂಚರಿಸುತ್ತಿವೆ.

ಬೀದರ್‌-ಕಲಬುರಗಿ ರೈಲ್ವೆ ಮಾರ್ಗ 1998-99ರಲ್ಲಿ ಪ್ರಾರಂಭಗೊಂಡು 2013-14ರ ವರೆಗೆ ₹150 ಕೋಟಿ ಅನುದಾನದಲ್ಲಿ 37 ಕಿ.ಮೀ ಪೂರ್ಣಗೊಂಡಿತ್ತು. 2014ರಲ್ಲಿ ನಾನು ಸಂಸದನಾದ ನಂತರ ಮೂರು ವರ್ಷದಲ್ಲಿ ₹1392 ಕೋಟಿ ಅನುದಾನ ತಂದು 73.193 ಕಿ.ಮೀ ಕೆಲಸ ಪೂರ್ಣಗೊಳಿಸಿ 2017ರ ಅಕ್ಟೋಬರ್‌ 29ರಂದು ಪ್ರಧಾನಿಯವರಿಂದ ಉದ್ಘಾಟಿಸಲಾಗಿತ್ತು’ ಎಂದು ಅವರು ಹೇಳಿದರು. 

ಬೀದರ್ ರೈಲು ನಿಲ್ದಾಣದಿಂದ ನಿತ್ಯ ಎಷ್ಟು ರೈಲು ಸಂಚಾರ?

ಬೀದರ್‌ ರೈಲು ನಿಲ್ದಾಣದ ಮೂಲಕ ನಿತ್ಯ 10 ರಿಂದ 12 ರೈಲುಗಳು ಸಂಚರಿಸುತ್ತವೆ. ಕೆಲವು ರೈಲುಗಳು ವಾರಕ್ಕೊಮ್ಮೆ ಸಂಚರಿಸುತ್ತವೆ. ಹೈದರಾಬಾದ್‌ ಇಂಟರ್‌ಸಿಟಿ, ಕಲಬುರಗಿ-ಬೀದರ್‌ ಡೆಮೋ, ಮಚಲಿಪಟ್ಟಣ, ಬೆಂಗಳೂರು, ಮುಂಬೈ (ವಾರದಲ್ಲಿ ಮೂರು ದಿನ ಸಂಚಾರ), ಕೊಲ್ಲಾಪುರ (ವಾರಕ್ಕೆ ಒಂದು ದಿನ ಸಂಚಾರ) ಈ ರೈಲುಗಳು ನಿತ್ಯ ಬೀದರ್‌ನಿಂದಲೇ ಸಂಚರಿಸುತ್ತವೆ.

ಇನ್ನು, ಶಿರಡಿ, ಔರಾಂಗಾಬಾದ್‌, ಬೆಂಗಳೂರು, ಪೂರ್ಣಾ, ಪುಣೆ, ನಾಂದೇಡ್‌, ಲಾತೂರ್‌ ಸೇರಿದಂತೆ ಇತರೆ ಭಾಗಗಳಿಗೂ ರೈಲುಗಳು ಹಾದು ಹೋಗುತ್ತವೆ. ಬೀದರ್‌ ರೈಲು ನಿಲ್ದಾಣದ ಮೂಲಕ ನಿತ್ಯ ಸರಾಸರಿ 8ರಿಂದ 10 ಸಾವಿರ ಜನ ವಿವಿಧ ನಗರಗಳಿಗೆ ಹೋಗಿ ಬರುತ್ತಾರೆ. ಏಕಾದಶಿ, ದಸರಾ, ದೀಪಾವಳಿ, ಗುರುನಾನಕ ಜಯಂತಿ, ಕ್ರೈಸ್ತರ ಧಾರೂರ ಜಾತ್ರೆ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ವಾರಾಂತ್ಯ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group