ಬೆಳಗಾವಿ: ಕನ್ನಡ ಸಾಹಿತ್ಯದಲ್ಲಿ ಚಂಪೂ ಸಾಹಿತ್ಯದ ಲಕ್ಷಣ ಒಳಗೊಂಡ ವಚನಗಳು ಜನಪದ ಮತ್ತು ಶಿಷ್ಟಭಾಷೆ ಎರಡನ್ನೂ ಹದವಾಗಿ ಬಳಸಿದ ಕಲಾತ್ಮಕತೆಯ ಅನುಭಾವದ ನುಡಿಗಳು ಎಂದು ಶರಣೆ ಶ್ರೀಮತಿ ಕಮಲಾ ಗಣಾಚಾರಿ ಹೇಳಿದರು
ದಿನಾಂಕ 27-08-2023 ರಂದು ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಸಂದರ್ಭದಲ್ಲಿ “ವಚನಗಳಲ್ಲಿ ಗಾದೆಮಾತುಗಳು” ಕುರಿತಾಗಿ ಮಾತನಾಡಿ ಅವರು ತಮ್ಮ ಅನುಭಾವ ಹಂಚಿಕೊಂಡರು.
“ಮಾತೆಂಬುದು ಜೋತಿರ್ಲಿಂಗ, ಕಾಯಕವೇ ಕೈಲಾಸ, ನುಡಿದರೆ ಮುತ್ತಿನ ಹಾರದಂತಿರಬೇಕು, ಅಂಧಕನ ಕೈಯಲ್ಲಿ ದರ್ಪನವಿದ್ದು ಫಲವೇನು? ಹೀಗೆ ಹಲವಾರು ವಚನದ ಸಾಲುಗಳು ತನ್ನದೇಯಾದ ಆಯಾ ಕಾಲಮಾನದ ಗಾದೆಗಳೊಂದಿಗೆ ಬೆರೆತು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿರುವದನ್ನು ನೋಡಬಹುದು.
ಅಕ್ಕಮಹಾದೇವಿ, ಅಲ್ಲಮಪ್ರಭು, ಅಮುಗೆ ರಾಯಮ್ಮ ಹೀಗೆ ಹಲವರು ಶರಣರ ವಚನಗಳ ಭಾವ, ಸಂದೇಶ, ಅರ್ಥಗಳಲ್ಲಿ ಗಾದೆ ಮಾತುಗಳಿಗೆ ಬಹಳಷ್ಟು ಸಾಮ್ಯತೆ ಹಾಗೂ ಸಾದೃಶ್ಯ ಕಾಣಬಹುದು ಎಂಬುದನ್ನು ಶರಣರ ವಚನಗಳನ್ನು ಗಾದೆ ಮಾತುಗಳೊಂದಿಗೆ ಉದಾಹರಣೆ ಸಹಿತ ವಿಶ್ಲೇಷಿಸಿದರು.
ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ಉಪನ್ಯಾಸದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಶರಣರಾದ ಬಾಳಪ್ಪ ಕಾಡನ್ನವರ ಅವರಿಂದ ಪ್ರಸಾದ ದಾಸೋಹ ನೆರವೇರಿತು. ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಪ್ರಾರಂಭದಲ್ಲಿ ವಾರದ ರೂಡಿಯಂತೆ ವಚನ ಗಾಯನ ನೆರವೇರಿತು. ಸಂಘಟನೆ ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.
ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ, ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ್, ಶಂಕರ ಗುಡಸ, ಸಂಘಟನೆಯ ಖಜಾಂಚಿಗಳಾದ ಶರಣ ಸತೀಶ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ದಶಿ೯ಗಳಾದ M.Y. ಮೆಣಸಿನಕಾಯಿ, ವಿ. ಕೆ. ಪಾಟೀಲ,ಆನಂದ್ ಕರ್ಕಿ, ಸುರೇಶ್ ಹಂಜಿ, ಎ.ಬಿ. ಜೇವನಿ, ವಿದ್ಯಾ ತಿಗಡಿ, ಮಹಾದೇವಿ ಘಾಟಿ, ಶಿವಾನಂದ ತಲ್ಲೂರ, ಹೀಗೆ ಸಂಘಟನೆಯ ಕಾರ್ಯಕರ್ತರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.