ಸಿಂದಗಿ: ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮದೇಯಾದ ಕಾರ್ಯವೈಖರಿ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿ ಹಾಗೂ ಪ್ರಧಾನಿಗಳಲ್ಲಿಯೆ ಅತ್ಯಂತ ಪ್ರಾಮಾಣಿಕ ಪ್ರಧಾನಿ ಎನಿಸಿಕೊಂಡಿರುವ ಶಾಸ್ತ್ರೀಜಿಯವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕೆಂದು ಎಂದು ಪದ್ಮರಾಜ ಮಹಿಳಾ ಪ. ಪೂ ಮಹಾವಿದ್ಯಾಲಯದ ಪ್ರಾ. ಎಂ . ಎಸ್. ಹಯ್ಯಾಳಕರ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಪಿ.ಇ.ಎಸ್. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ಈರ್ವರು ಶ್ರೇಷ್ಠ ಮಹಾನ್ ವ್ಯಕ್ತಿಗಳು. ದೇಶಕ್ಕೆ ಅವರ ಕೊಡುಗೆ ಅಪಾರ. ಅಂತಹ ಪುಣ್ಯಪುರುಷರು ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮ ಭಾಗ್ಯ. ಅವರ ಚಿಂತನೆಗಳು ಅವರು ಮಾಡಿದ ಕಾರ್ಯಗಳು ಇಂದು ನಮಗೆ ಮಾದರಿಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಕೆ. ಎಚ್. ಸೋಮಾಪೂರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಪಿ.ಇ.ಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ. ಪಿ. ಕರ್ಜಗಿ ಮಾತನಾಡಿದರು. ವಿಶ್ರಾಂತ ಉಪನ್ಯಾಸಕರಾದ ಪಿ. ಎಂ. ಮಡಿವಾಳರ ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್. ಬಿ. ಗೋಡಕರ, ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ. ಎಸ್. ಕಡಣಿ ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

