ಸಿಂದಗಿ: ಸಂವಿಧಾನ ಶಿಲ್ಪಿ, ರಾಷ್ಟ್ರನಾಯಕ ಡಾ,ಬಾಬಾಸಾಹೇಬ ಅಂಬೇಡ್ಕರರವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ರಾಜ್ಯದಿಂದ ಗಡಿ ಪಾರು ಮಾಡುವಂತೆ ಆಗ್ರಹಿಸಿ ದಲಿತ ಸೇನೆಯ ಪದಾಧಿಕಾರಿಗಳು ಗೃಹ ಮಂತ್ರಿಗಳಿಗೆ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಶಿರಸ್ತೆದಾರ ಇಂದ್ರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ ಎ ಸಿಂದಗಿಕರ ಮಾತನಾಡಿ, ಜ. 22 ರಂದು ರಾತ್ರಿ ಸಮಯದಲ್ಲಿ ಕಲಬುರ್ಗಿ ಜಿಲ್ಲೆಯ ಕೋಟ್ನೂರ ಡಿ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಮೂರ್ತಿಯನ್ನು ವಿಕೃತ ಮನಸ್ಸಿನ ಕೆಲವು ಕಿಡಿಗೇಡಿಗಳು ಕೀಳು ಮಟ್ಟದ ರೀತಿಯಲ್ಲಿ ಅವಮಾನ ಮಾಡಿರುತ್ತಾರೆ. ಈ ಕೃತ್ಯ ಇಡಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕಿಡಿಗೇಡಿಗಳನ್ನು ಪೊಲಿಸ್ ಇಲಾಖೆ ಕೇವಲ ಬಂಧನ ಮಾಡಿದರೆ ಸಾಲದು ಈ ಕೃತ್ಯ ಮಾಡಿದ ಆರೋಪಿಗಳನ್ನು ಹಾಗೂ ಇದರ ಹಿಂದೆ ಇರುವ ಕಾಣದ ಕೈಗಳನ್ನು ಕಲಬುರ್ಗಿ ಜಿಲ್ಲಾ ಆಡಳಿತ ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಹಾಗೂ ಅವರ ಆಸ್ತಿಯನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಒಂದು ವೇಳೆ ತಕ್ಷಣ ಬಂಧಿಸದೇ ಪ್ರಕರಣವನ್ನು ವಿಲೇ ಮಾಡಿದರೇ ದಲಿತ ಸೇನೆಯ ವತಿಯಿಂದ ರಾಜ್ಯ ವ್ಯಾಪ್ತಿ ಪ್ರತಿಭಟನೆ ಮಾಡಲು ಅನಿವಾರ್ಯವಾಗುತ್ತದೆ ಎಂದು ಕಲಬುರ್ಗಿ ಜಿಲ್ಲಾ ಆಡಳಿತ ಹಾಗೂ ಸರಕಾರಕ್ಕೆ ದಲಿತ ಸೇನೆಯ ವತಿಯಿಂದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಕೇಶ ಕಾಂಬಳೆ, ದಲಿತ ಸೇನೆ ತಾಲೂಕ ಅದ್ಯಕ್ಷ ಬಾಲಕೃಷ್ಣ ಚಲವಾದಿ, ಶ್ರೀಶೈಲ ಜಾಲವಾದಿ, ದಸ್ತಗೀರ ಆಳಂದ, ರಜತ ತಾಂಬೆ ಸೇರಿದಂತೆ ಅನೇಕರಿದ್ದರು.

