ಹಾಸನ: ಗಾಂಧಿ ಮತ್ತು ಗ್ರಾಮ ಗೊರೂರರ ಆತ್ಮ ಮತ್ತು ಹೃದಯ ಗಳಾಗಿದ್ದವು ಎಂದು ಲೇಖಕ ಗೊರೂರು ಶಿವೇಶ್ ತಿಳಿಸಿದರು
ಅವರು ನಗರದ ಎನ್ ಡಿ.ಆರ್ .ಕೆ , ಬಿ .ಎಡ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಆಯೋಜಿಸಿದ್ದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಡಾ. ಎಸ್ ಕೆ ಕರೀಂ ಖಾನ್ ನೆನಪಿನ ಕಾರ್ಯಕ್ರಮದಲ್ಲಿ ಗೊರೂರರನ್ನು ಕುರಿತು ಮಾತನಾಡಿದರು.
ಗಾಂಧೀಜಿಯವರ ಸರಳತೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗೊರೂರರು ಗ್ರಾಮೋದ್ಧಾರದ ಅಂಗವಾಗಿ ಗುಡಿ ಕೈಗಾರಿಕೆ, ಗ್ರಾಮೋದ್ಯೋಗ ಭವನ, ಸೇವಾ ಸಹಕಾರ ಸಂಘ ,ಊರಿನ ಸ್ವಚ್ಛತೆ ,ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ ಪ್ರೇರಣೆ ನೀಡಿ ಗೊರೂರನ್ನು ಮಾದರಿ ಗ್ರಾಮವನ್ನಾಗಿಸಲು ಶ್ರಮಿಸಿದರು. ಇದರ ಜೊತೆಗೆ ತಮ್ಮ ಕಥೆ ಹಾಗೂ ಪ್ರಬಂಧಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಹಿಡಿದಿಟ್ಟರು.ಅವರ ಕಥೆಯನ್ನಾಧರಿಸಿದ ಭೂತಯ್ಯನ ಮಗ ಅಯ್ಯು ಜನಪ್ರಿಯ ಮತ್ತು ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಲು ಅದರಲ್ಲಿ ಬಿಂಬಿತವಾದ ಗ್ರಾಮೀಣ ಸಂಸ್ಕೃತಿಯು ಒಂದು ಕಾರಣ ಎಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.
ಎಸ್ ಕೆ ಕರೀಂ ಖಾನ್ ರವರನ್ನು ಕುರಿತು ಮಾತನಾಡಿದ ಡಾ. ಬರಾಳು ಶಿವರಾಂ ಜನಪದ ಗೀತೆ ಸಂಗ್ರಹಕಾರರಾಗಿ, ಸ್ವತಂತ್ರ ಹೋರಾಟಗಾರರಾಗಿ, ಚಿತ್ರ ಸಾಹಿತಿಯಾಗಿ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದರು. ಇತಿಹಾಸ ಪುರಾಣ ಭಾಗವತ ಭಗವದ್ಗೀತೆ ಗಳನ್ನು ಅಧ್ಯಯನ ಮಾಡಿದ್ದ ಪೌರಾಣಿಕ ಐತಿಹಾಸಿಕ ನಾಟಕಗಳನ್ನು ರಚಿಸುವುದರ ಜೊತೆಗೆ ಕರೀಂಖಾನರು ಸ್ವರ್ಣಗೌರಿ ಚಿತ್ರದ ನಟವರ ಗಂಗಾಧರ ಗೀತೆಯನ್ನು ಸೇರಿ ನೂರಾರು ಚಿತ್ರಗೀತೆಗಳನ್ನು ರಚಿಸಿದ್ದಾರೆ .ಹಳ್ಳಿ ಹಳ್ಳಿಗಳಲ್ಲಿ ಜನಪದ ಗೀತೆಗಳನ್ನು ಹಾಡಿ ಜನಪ್ರಿಯಗೊಳಿಸಿದ ಕಾರಣಕ್ಕೆ ಜಾನಪದ ಜಂಗಮ ಎಂದೇ ಕರೀಂ ಖಾನರು ಹೆಸರಾದವರು ಎಂದರು
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಗೊರೂರು ಅನಂತರಾಜು ಗೊರೂರರು ಮತ್ತು ಎಸ್ ಕೆ. ಕರೀಂ ಖಾನ್ ಸಮಕಾಲೀನರಾಗಿದ್ದು ಸ್ವಾತಂತ್ರ್ಯ ಹೋರಾಟ ಮತ್ತು ಜನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಸಮಾಜಮುಖಿ ಕೆಲಸಗಳನ್ನು ಯುವ ಜನರಿಗೆ ಪರಿಚಯಿಸಲು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಎಸ್ ಕೆ ಕರೀಂ ಖಾನ್ ರವರ ಸಂಬಂಧಿ, ತೌಫಿಕ್ ಅಹಮದ್ ರವರು ಕರೀಂಖಾನರು ತಾವು ಬಡತನದಲ್ಲಿ ಇದ್ದರೂ ಸರ್ಕಾರ ನೀಡಿದ ಮಾಶಾಸನ, ಬೆಂಗಳೂರು ನಗರದಲ್ಲಿ ನೀಡಿದ್ದ ನಿವೇಶನಗಳನ್ನು ನಿರಾಕರಿಸಿದ ಅವರು ಸಮಾಜಕ್ಕೆ ಮೇಲ್ಪಂಕ್ತಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್. ಡಿ. ಆರ್. ಕೆ. ಕಾಲೇಜ್ ನ ಪ್ರಾಂಶುಪಾಲರಾದ ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು. ಆರಂಭದಲ್ಲೇ ಟೀಕಿಸಿ ನಿರುತ್ಸಾಹಗೊಳಿಸಿದರೆ ಪ್ರತಿಭೆಗಳು ಮುರುಟಿ ಹೋಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಲೇಖಕ ಗೊರೂರು ಶಿವೇಶ್ ಮತ್ತು ಬರಾಳು ಶಿವರಾಮರವರನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಗೌರವಿಸಲಾಯಿತು.