ಶ್ರೇಷ್ಠ ಶರಣ ಮಾದರ ಧೂಳಯ್ಯ
ಮಾದರ ಧೂಳಯ್ಯ ಅವರು ಪಾದರಕ್ಷೆ ತಯಾರಿಸುವ ಕಾಯಕದಲ್ಲಿ ತೊಡಗಿದ್ದವರು. ಅವರ ತಂದೆ ಕಕ್ಕಯ್ಯ ಮತ್ತು ನುಲಿದೇವಿ ಅವರ ತಾಯಿ, ದಾರುಕಿ ಅವನ ಹೆಂಡತಿ. ಧೂಳಯ್ಯ ತನ್ನ ಕೆಲಸದ ಮೂಲಕ ಮಾತ್ರ ಭಗವಂತನನ್ನು ಅರಿತುಕೊಂಡನು. ಅವರ 106 ವಚನಗಳು ಕಾಮಧೂಮ ಧೂಳೇಶ್ವರ ಎಂಬ ಅಂಕಿತನಾಮದೊಂದಿಗೆ ಲಭ್ಯವಿವೆ.
ಬಸವಪುರಾಣ, ರಾಘವಾಂಕ ಚರಿತದಲ್ಲಿ ಇವರ ಕುರಿತಾದ ಉಲ್ಲೇಖಗಳಿವೆ. ಮಾದರ ದೂಳಯ್ಯ ನಮ್ಮ ಶರಣ ಸಂಸ್ಕೃತಿಯಲ್ಲಿ ಸದಾಕಾಲ ಎದ್ದು ಕಾಣುವ ಅಥವಾ ಶರಣ ಧರ್ಮದ ಪ್ರಧಾನ ಗುಣಗಳಾದ ಕಾಯಕ ನಿಷ್ಠೆ ಮತ್ತು ಶ್ರದ್ಧೆಗೆ ಮಹತ್ವ ನೀಡಿದ ಶ್ರೇಷ್ಠ ಶರಣ. ಜಾತಿಯಲ್ಲಿ ಕೀಳೆಂದು ಪರಿಗಣಿಸಿದ ಮತ್ತು ಚಪ್ಪಲಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದರು. ಒಬ್ಬ ಚಮ್ಮಾರನು ವಚನ ರಚಿಸಬಹುದು, ಚರ್ಚೆಗಳಲ್ಲಿ, ಭಾಗಿಯಾಗಬಹುದು, ಅನುಭಾವದಲ್ಲಿ ತೊಡಗಿ ಅನುಭಾವ ಹಂಚಿಕೊಳ್ಳಬಹುದು ಎಂಬುವುದಕ್ಕೆ ಮಾದಾರ ಚೆನ್ನಯ್ಯ, ದೂಳಯ್ಯ, ಕಕ್ಕಯ್ಯ ರಂತಹ ಕೆಳಜಾತಿಯ ವಚನಕಾರರು ಉದಾಹರಣೆಗೆ ಸಿಗುತ್ತಾರೆ. ಹೀಗೆ ವಚನ ಕಾರ್ಯದಲ್ಲಿ ತೊಡಗಲು ಹಾಗೂ ಇಂದಿಗೂ ಅಜರಾಮರವಾಗಿರಲು ಅವರಿಗೆ ಅವಕಾಶ ನೀಡಿದ್ದು ಅನುಭವ ಮಂಟಪ ಹಾಗು ಬಸವಣ್ಣ. ವೇದ ಉಪನಿಷತ್ತು ಗಳು ಕೇವಲ ಮೇಲ್ವರ್ಗದ ಸ್ವತ್ತು ಎಂತಿದ್ದ ಆಗಿನ ಕಾಲದ ಜಾತಿಯ ಕುರಿತು ಮಾದಾರ ದೂಳಯ್ಯಾ ಹೀಗೆ ಹೇಳುತ್ತಾರೆ.
ಬೀಜದಲ್ಲಿರುವ ಎಣ್ಣೆ, ಹಣ್ಣಿನಲ್ಲಿರುವ ರಸ, ಬಂಗಾರದ ಬಣ್ಣ, ಕುರಿಯಲ್ಲಿ ಹಾಲು, ಕಬ್ಬಿನ ಮಾಧುರ್ಯ, ಇವುಗಳ ಒಳಗನ್ನು ಬಯಲಿಗೆಳೆದರೂ ಜಾತಿಯ ಮಾಲಿನ್ಯ ತಪ್ಪುವುದಿಲ್ಲ. ಸಮಾಜದಲ್ಲಿ ಬೇರೂರಿದ ಜಾತಿಯ ಅಳ ಎಷ್ಟು ಪ್ರಬಲ ಎಂಬುವುದನ್ನು ಅವರ ಹೀಗೆ ಹೇಳಿದ್ದಾರೆ. ಅದಕ್ಕಾಗಿ ಬಸವ ತತ್ವಗಳಿಂದ ಸಿಕ್ಕ ಸಮಾನತೆಯ ಕಾರಣ ಬಸವಣ್ಣ ಈತನಿಗೆ ಗುರುವಾದ.
ತನ್ನ ಕಾಯಕದ ಬಿಡುವಿನ ವೇಳೆಯಲ್ಲಿ ಅನುಭವ ಮಂಟಪದಲ್ಲಿ ಇತರ ಶರಣರ ಅನುಭಾವದಲ್ಲಿ ತೊಡಗುತ್ತಿದ್ದು ಚರ್ಚೆ ಸಂವಾದಗಳಲ್ಲಿ ಶಾಂತ ರೀತಿಯಿಂದ ಭಾಗಿಯಾಗಿ ಹಾಗೂ ಕಾಯಕದಲ್ಲಿ ತೊಡಗಿದ್ದಾಗ ತನ್ನ ವಿಚಾರಕ್ಕೆ ಹೊಳೆದ ವಿಚಾರಗಳನ್ನು ವಚನಗಳ ರೂಪದಲ್ಲಿ ಬರೆಯುತ್ತಿದ್ದರು. ಈ ಕೆಳಗಿನ ವಚನ ಕಾಯಕವೇ ಕೈಲಾಸ ಮತ್ತು ಕಾಯಕದಲ್ಲಿ ತೊಡಗಿದಾತನಿಗೆ ಯಾವ ದೇವರ ಆಶೀರ್ವಾದದ ಅಗತ್ಯವಿಲ್ಲ ಎಂಬುವುದನ್ನು ಹೀಗೆ ಹೇಳುತ್ತಾರೆ.
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವನ ಮುಂದೆ ?ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು. ನೀ ಹೊತ್ತ ಬಹುರೂಪ[ದಿ] ತಪ್ಪದೆ ರಜತಬೆಟ್ಟದ ಮೇಲಕ್ಕೆ ಹೋಗು, ನಿನ್ನ ಭಕ್ತರ ಮುಕ್ತಿಯ ಮಾಡು. ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುಕು.
ಒಂದು ಕಲ್ಪನೆ ಮಾಡಿಕೊಂಡು ಒಂದು ವೇಳೆ ಪರಮಾತ್ಮ ನನ್ನ ಬಳಿ ಬಂದರೆ ಹೀಗೆ ಹೇಳಬೇಕೆಂದು, ಚಪ್ಪಲಿ ಹೊಲಿಯುವ ಕಾಯಕದಲ್ಲಿ ತೊಡಗಿದ್ದ ದೂಳಯ್ಯನ ಭಕ್ತಿಗೆ ಮೆಚ್ಚಿ ಬಂದ ಪರಮೇಶ್ವರನ ಕುರಿತು ನೀನೇಕೆ ನನ್ನ ಹತ್ತಿರ ಬಂದೆ? ನಾನೇನು ನಿನ್ನ ಕರೆದೇನಾ? ಕಾಯಕದಲ್ಲಿ ತೊಡಗಿದ ನನಗೆ ನಿನ್ನ ಅವಶ್ಯಕತೆಯಿಲ್ಲ, ನಿನ್ನ ಕರೆಯುವ ಮತ್ತು ಕಾಯಕದಲ್ಲಿ ಕೈಲಾಸ ಕಾಣದ ಭಕ್ತರಿಗೆ ನೀನು ಮುಕ್ತಿ ನೀಡು ನನಗೆ ನಿನ್ನ ಅವಶ್ಯಕತೆ ಇಲ್ಲ ಎಂದೇ ಹೇಳುತ್ತಾನೆ. ಆ ಮೂಲಕ ಸ್ವರ್ಗವನ್ನು ಭೂಮಿಯಲ್ಲಿ ಕಾಣಲು ಹೇಳಿದ್ದಾನೆ.
ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು. ಎನ್ನ ಮನವ ನಿರ್ಮಲ ಮಾಡಿದನಯ್ಯಾ,ಚೆನ್ನಬಸವಣ್ಣನು. ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ,ಪ್ರಭುದೇವರು. ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ, ತಮ್ಮೊಳಿಂಬಿಟ್ಟುಕೊಂಡ ಕಾರಣ, ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿದರ್ನು.
ಬಸವಣ್ಣ, ಚೆನ್ನಬಸವಣ್ಣ ಮತ್ತು ಅಲ್ಲಮ ಪ್ರಭುಗಳು ತನ್ನ ತನು, ಮನು, ಪ್ರಾಣವ ನಿರ್ಮಲ ಮಾಡಿದಾತರು ಅವರ ನುಡಿಗಳಲ್ಲಿ ನನ್ನ ಜೀವನದ ದಾರಿ ಎನ್ನುತ್ತಾ ಶರಣ ತತ್ವಗಳ ಅನುಕರಿಸಿ ನಡೆದಾತ ಅದರಲ್ಲಿ ಸುಖವ ಕಂಡ ಶರಣ ದೂಳಯ್ಯ. ಮತ್ತೊಂದು ಕಡೆ ಹೇಳುತ್ತಾರೆ
ಸತ್ಯಶುದ್ಧಕಾಯಕವ ಮಾಡಿ ತಂದು, ವಂಚನೆಯಿಲ್ಲದೆ ಪ್ರಪಂಚಳಿದು, ನಿಚ್ಚಜಂಗಮಕ್ಕೆ ದಾಸೋಹವ ಮಾಡುವ. ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ, ಕಾಮಧೂಮ ಧೂಳೇಶ್ವರ.
ಸತ್ಯ ಶುದ್ಧ ಕಾಯಕದಿಂದ, ಯಾರಿಗೂ ಮೋಸ ಮಾಡದೆ, ಪ್ರತಿದಿನ ದಾಸೋಹ ಮಾಡುವ ನಿಜವಾದ ಭಕ್ತನಲ್ಲಿ ದೇವರು ಅಚ್ಚೊತ್ತಿದಂತೆ ಸದಾಜೊತೆಯಿರುವನು. ಎಂಬ ಈ ಮಾತು ನಿಷ್ಟೆಯಿಂದಾದದ ಕಾಯಕವು ಪ್ರತಿ ದಿನ ನಾವು ಕೈಲಾಸವನ್ನು ನಮ್ಮೊಂದಿಗಿರಿಸಲು ಸಾಧ್ಯವಾಗಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಹೀಗೆ ಕಾಯಕದಲ್ಲಿ ಕೈಲಾಸ, ಪ್ರಾಮಾಣಿಕತೆ, ಅಂತರಂಗದ ಅರಿವುಗಳನ್ನು ಹೆಚ್ಚಾಗಿ ತನ್ನ ವಚನಗಳಲ್ಲಿ ಬಳಸಿ ಇಂದಿಗೂ ಜನಮನದಲ್ಲಿ ಜೀವಂತವಾಗಿರವಾತ ಮಾದಾರ ಧೂಳಯ್ಯ.
ವೇದಕ್ಕೆ ಉತ್ತರದವನಲ್ಲ, ಶಾಸ್ತ್ರಕ್ಕೆ ಸಂತೆಯವನಲ್ಲ. ಪುಣ್ಯಕ್ಕೆ ಪುಣ್ಯವಂತನಲ್ಲ, ವಚನದ ರಚನೆಗೆ ನಿಲ್ಲ. ವಾಙ್ಮಯನ ಅಗೋಚರಕ್ಕೆ ಸಲ್ಲ, ಪ್ರಮಾಣು ಅಪ್ರಮಾಣುವೆಂಬುದಕ್ಕೆ ನಿಲ್ಲ. ಇಂತೀ ಭೇದ ಅಭೇದ್ಯಂಗಳಲ್ಲಿ ವೇದ್ಯವಿಲ್ಲ, ಕಾಮಧೂಮ ಧೂಳೇಶ್ವರನು.
ಈ ಮೇಲಿನ ವಚನದ ತಾತ್ಪರ್ಯ ಇಷ್ಟೇ ಅಂತರಂಗದ ಅರಿವಿನ ಇರುವಿನಲ್ಲಿ ಭಗವಂತನು ಇದ್ದಾನೆ, ಎನ್ನುವುದರ ಮೂಲಕ ದೇವರು ಮನುಷ್ಯನಲ್ಲಿ ಇದ್ದಾನೆ ಅಂದರೆ ಮನುಷ್ಯನಿಂದ ಭಗವಂತನನ್ನು ದೂರ ಮಾಡದೆ ನಮ್ಮ ಅಂತರಂಗದಲ್ಲಿ ಶಿವನನ್ನು ಕಾಣಬೇಕು. ವೇದ, ಶಾಸ್ತ್ರ, ವಚನಗಳ ರಚನೆಯಲ್ಲಿ ಭಗವಂತನ ಕಾಣಲಾಗದು ಎಂದು ಹೇಳಿದ್ದಾನೆ ಮಾದಾರ ದೂಳಯ್ಯ. ವ್ಯಕ್ತಿಯ ಉನ್ನತಿಗೆ ಜಾತಿ ಮುಖ್ಯವಲ್ಲ ಎಂಬ ನಿಲುವು ಈತನದಾಗಿದೆ.
ಒಟ್ಟಿನಲ್ಲಿ ಮಾದರ ದೂಳಯ್ಯನವರಿಗೆ ಕಾಯಕವೇ ಕೈಲಾಸ, ಮರಣವೇ ಮಹಾನವಮಿ, ಶರಣರ ಮನೆಯಂಗಳವೆ ಕಾಶಿ, ಮೃತ್ಯುಲೋಕವೇ ಕರ್ತಾರನ ಕಮ್ಮಟವಾಗಿತ್ತು. ಕಾಯಕನಿಷ್ಠೆ ಅವರ ಜೀವಾಳವಾಗಿತ್ತು, ಉಸಿರಾಗಿತ್ತು ಎಂಬುವುದನ್ನು ಅವರ ವಚನಗಳಲ್ಲಿ ಕಾಣಬಹುದು.
ಪ್ರೊ ನಾಗರಾಜ ಮ ಕೋಟಗಾರ, ಸಹಾಯಕ ಪ್ರಾಧ್ಯಾಪಕರು ಸಮಾಜಶಾಸ್ತ್ರ ವಿಭಾಗ ಕೆ ಎಲ್ ಇ. ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ.