ಸ್ವರ ಸಾಮ್ರಾಟ ಡಾ. ಮಲ್ಲಿಕಾರ್ಜುನ ಮನಸೂರ

Must Read

‘ಡಾ. ಮಲ್ಲಿಕಾರ್ಜುನ ಮನಸೂರ’ ಭಾರತದ ಸರ್ವೋಚ್ಚ ಹಿಂದುಸ್ಥಾನಿ ಗಾಯಕರಲ್ಲಿ ಸರ್ವ ಶ್ರೇಷ್ಠರು ಅವರು ಈ ಶತಮಾನದ ಸ್ವರಯೋಗಿ.ಆರು ದಶಕಗಳಿಗೂ ಮಿಕ್ಕಿ ಸಂಗೀತ ಲೋಕವನ್ನಾಳಿದ ಸ್ವರ ಚಕ್ರವರ್ತಿ ‘ಫಕೀರ ಆಫ್‌ ಖಯ್ಯಲ್‌’, ‘ಗಾಣ್ಯಾತ ರಾಹಣಾರ ಮಾಣೂಶ’ ಎಂಬ ಏಗ್ಗಳಿಕೆಗೆ ಪಾತ್ರರಾದವರು. ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿತಂದ ರಾಷ್ಟ್ರೀಯ ಕನ್ನಡಿಗ. ಸಂಗೀತಾಲಾಪವೇ ಜೀವನದುಸಿರೆಂದು ಬಗೆದ ‘ಸಂಗೀತಗಾರರ ಸಂಗೀತಗಾರ.ಪಂ. ಮಲ್ಲಿಕಾರ್ಜುನರು ಜನಿಸಿದ್ದು ಧಾರವಾಡ ಸಮೀಪದ ‘ಮನಸೂರ’ ಎಂಬ ಗ್ರಾಮದಲ್ಲಿ ೧೯೧೦ ರ ಡಿಸೆಂಬರ್ ೩೧ ರಂದು.ತಂದೆ ಭೀಮರಾಯಪ್ಪ ಊರಿನ ಗೌಡರು. ನಾಟಕ-ಸಂಗೀತದ ಪರಮಭಕ್ತರು. ತಾಯಿ ನೀಲಮ್ಮ ಜನಪದ ಗೀತೆಗಳ ಭಕ್ತೆ

ಗ್ರಾಮದಲ್ಲಿ ನಡೆದ ನಾಟಕ ತಾಲೀಮಿನತ್ತ ಬಾಲಕ ಮಲ್ಲಿಕಾರ್ಜುನನ ಲಕ್ಷ್ಯ ಹರಿಯಿತು. ಅಣ್ಣ ಬಸವರಾಜನೊಡನೆ ಶಾಲೆಗೆ ವಿದಾಯ ಹೇಳಿ ವಾಮನರಾವ್‌ ಮಾಸ್ತರ ನಾಟಕ ಕಂಪೆನಿಯಲ್ಲಿ ಸೇರ್ಪಡೆಯಾದ. ಮಧುರ ಕಂಠದಿಂದ ಗ್ವಾಲಿಯರ್ ಘರಾಣಿಯ ಪಂ. ನೀಲಕಂಠ ಬುವಾರ ಮನಗೆದ್ದ. ಮಿರಜಿಗೆ ಬಂದು ಅವರಲ್ಲಿ ನಾಲ್ಕಾರು ವರ್ಷ ಸಂಗೀತ ಕಲಿತ. ಮುಂದೆ ಮುಂಬೈಗೆ ಹೋದ ಮಲ್ಲಿಕಾರ್ಜುನ ಎಚ್‌.ಎಂ.ವಿ. ಕಂಪನಿಗೆ ಅನೇಕ ರಾಗ ಹಾಡಿದ ಜೈಪುರ ಕಿರಾಣಿಯ ವಿಖ್ಯಾತ ಗಾಯಕ ಉಸ್ತಾದ್‌ ಅಲ್ಲಾದಿಯಾ ಖಾನ್‌ ಮಕ್ಕಳಾದ ಮಂಜಿಖಾನ್‌ ನಂತರ ಬುರ್ಜಿಖಾನರಲ್ಲಿ ಸಂಗೀತದ ಉನ್ನತ ಶಿಕ್ಷಣ ಪಡೆದು ವಿಖ್ಯಾತ ಜೈಪುರು – ಅತ್ರೌಲಿ ಗಾಯಕರೆನಿಸಿದರು.
ಶೈಲಿಯ ಮೌಲಿಕತೆಗಾಗಿ, ವಿಶಿಷ್ಟ ರಾಗಗಳ ಆಯ್ಕೆ ಭಾವಾಭಿವ್ಯಕ್ತತೆಯ ಅಸಾಧಾರಣ ಸಾಮರ್ಥ್ಯ, ಪರಿಶುದ್ಧ ಹಾಗೂ ಸೂಕ್ಷ್ಮತೆಗಳಿಗೆ ಪಂ. ಮಲ್ಲಿಕಾರ್ಜುನ ಮನಸೂರ ಅವರ ಗಾಯನ ಹೆಸರು ಪಡೆದಿದೆ. ಗ್ವಾಲಿಯರ್ ಘರಾಣಿಯ ದೃಢ ಖಚಿತತೆಯೊಂದಿಗೆ ಅತ್ರೋಲಿ ಘರಾಣಿಯ ಸೂಕ್ಷ್ಮಲಯ ಗತಿಗಳ ಸಂಕೀರ್ಣತೆಯ ಸಮಿಲಾಪವಿದೆ. ಅವರು ಹಾಡುವ ರಾಗಗಳು ತಾಲದ ಜೀವಂತ ಅಸ್ತಿವಾರದ ಮೇಲೆ ಅಸಂಖ್ಯ ಶಿಲ್ಪಗಳಿಂದ ಮೆರೆಯುವ ಸ್ವರಸೌಧಗಳು

ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಜೈಪುರ-ಅತ್ರೋಲಿ ಘರಾನಾದ ‘ಖಯಾಲಿ’ ಶೈಲಿಯ ಸಂಗಿತಗಾರರಾಗಿದ್ದರು. ಇವರಿಗೆ ೩ ಪದ್ಮ ಪ್ರಶಸಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ: ೧೯೭೦ರಲ್ಲಿ ಪದ್ಮಶ್ರೀ, ೧೯೭೬ರಲ್ಲಿ ಪದ್ಮ ಭೂಷಣ, ಮತ್ತು ೧೯೯೨ರಲ್ಲಿ ಪದ್ಮವಿಭೂಷಣ.

ಮಲ್ಲಿಕಾರ್ಜುನ ಮನ್ಸೂರ್’ ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ. ಇವರು ಹಾಡಿದ್ದು ಹಿಂದೂಸ್ತಾನಿ ಖಯಾಲ್ ಸಂಗೀತ ಶೈಲಿಯ ಜೈಪುರಿ-ಅತ್ರೊಲಿ ಘರಾಣೆಯಯಲ್ಲಿ. ನೀಲಕಂಠ ಬುವಾ ಮತ್ತು ಪ್ರಖ್ಯಾತ ಸಂಗೀತಕಾರ ಅಲ್ಲಾದಿಯಾ ಖಾನ್ ಅವರ ಪುತ್ರರಾದ ಮಂಜಿ ಖಾನ್ ಹಾಗೂ ಬುರಜಿ ಖಾನ್ ಇವರ ಸಂಗೀತ ಗುರುಗಳಲ್ಲಿ ಪ್ರಮುಖರಾಗಿದ್ದಾರೆ. ಸುಮಾರು ೬೦ ವರುಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಮಹಾನ್ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್. ಬಾಲ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ, ಪ್ರಹ್ಲಾದ, ಧ್ರುವ, ನಾರದ ಮೊದಲಾದ ಪಾತ್ರಗಳ ಅಭಿನಯಕ್ಕಾಗಿ ಅಪಾರ ಜನಪ್ರಿಯತೆ ಗಳಿಸಿದರೂ, ಸಂಗೀತದ ಒಲವು ಅವರನ್ನು ಸಂಗೀತದ ಸಾಧನೆಗೆ ಕರೆದೊಯ್ಯಿತು. ಬಡ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನ್ಸೂರ್, ಸರಳ ಜೀವನ, ವಿನಯತೆ ಮತ್ತು ನೇರನುಡಿಗಾಗಿ ಪ್ರಸಿದ್ಧರು. ಸಂಗೀತವೇ ನನ್ನ ಜೀವನ, ನನ್ನ ಕಾಯಕ ಮತ್ತು ಪೂಜೆ ಎಂದು ಹೇಳಿ, ಬಾಳಿದವರು ಮಲ್ಲಿಕಾರ್ಜುನ ಮನ್ಸೂರ್. ಮಹಾತ್ಮ ಗಾಂಧೀಜಿ ಮತ್ತು ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಮಹಾಸ್ವಾಮಿಗಳವರಿಂದ ಪ್ರಭಾವಿತರಾದ ಇವರು, ವಚನ ಸಂಗೀತಕ್ಕಾಗಿ ನೀಡಿದ ಕೊಡುಗೆ ಅಪಾರ.

ಇವರು ತಮ್ಮ ಜೀವನ ಚಿತ್ರವನ್ನು “ನನ್ನ ರಸಯಾತ್ರೆ” ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದೇಶದ ಪ್ರತಿಷ್ಠತ ಪ್ರಶಸ್ತಿ ಕಾಳಿದಾಸ ಸಮ್ಮಾನ್ ಪಡೆದ ಪ್ರಥಮ ಕನ್ನಡಿಗ ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪ್ರಚಾರ, ರಾಜಕೀಯದಿಂದ ದೂರ ಉಳಿದ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಗಳು,ಸನ್ಮಾನಗಳಿಗಾಗಿ ಹಾತೊರಯಲಿಲ್ಲ. ಇವರ ಸುಪುತ್ರ ರಾಜಶೇಖರ ಮನ್ಸೂರ್ ತಂದೆಯಂತೆ ಪ್ರಸಿದ್ಧ ಸಂಗೀತಕಾರರಾಗಿದ್ದಾರೆ.

*ವೃತ್ತಿಜೀವನ*

ಡಾ ಮಲ್ಲಿಕಾರ್ಜುನ ಮನ್ಸೂರ್ ಅವರು ದೊಡ್ಡ ಪ್ರಮಾಣದ ಅಪರೂಪದ (ಅಪ್ರಚಲಿತ) ರಾಗಗಳಾದ ಶುದ್ಧ ನಾಟ, ಅಸಾ ಜೋಜಿಯ, ಹೇಮ್ ನಾಟ್ , ಲಚಚಾಕ್, ಖಾತ್, ಶಿವಮತ್ ಭೈರವ್, ಬಿಹಾರಿ, ಸಂಪೂರ್ಣ ಮಾಲ್ಕೌಂಸ್, ಲಾಜವಂತಿ, ಅಡಂಬರಿ ಕೇದಾರ್, ಏಕ್ ನಿಶಾದ್ ಬಿಹಾಗ್ಡಾ ಮತ್ತು ಬಹಾದುರಿ ತೋಡಿ ಗಳನ್ನು ಜನಪ್ರಿಯಗೊಳಿಸಿದರು. ಹಾಡಿನ ಭಾವನಾತ್ಮಕ ವಿಷಯವನ್ನು ಅವರು ಕಳೆದುಕೊಳ್ಳದೇ ನಿರಂತರ, ಮಧುರವಾಗಿ ಹಾಡುತ್ತಿದ್ದರು. ಅವರ ಧ್ವನಿ ಮತ್ತು ಶೈಲಿ ಮಂಜಿ ಖಾನ್ ಮತ್ತು ನಾರಾಯಣರಾವ್ ವ್ಯಾಸ್ನಂತೆ ಹೋಲುತ್ತಿತ್ತು, ಆದರೆ ಕ್ರಮೇಣ ಅವರು ತಮ್ಮ ಸ್ವಂತ ಶೈಲಿಯ ಚಿತ್ರಣವನ್ನು ಅಭಿವೃದ್ಧಿಪಡಿಸಿದರು.

ಅವರು ಅವರ ಮಾಸ್ಟರ್ಸ್ ವಾಯ್ಸ್ ಜೊತೆಗೆ ಸಂಗೀತ ನಿರ್ದೇಶಕರಾಗಿದ್ದರು ಮತ್ತು ಆಲ್ ಇಂಡಿಯಾ ಆಕಾಶವಾಣಿ ಕೇಂದ್ರ ಧಾರವಾಡದಲ್ಲಿ ಸಂಗೀತ ಸಲಹೆಗಾರಾಗಿದ್ದರು.

*ಪ್ರಶಸ್ತಿಗಳು*

ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಅನಂತ. ಗದುಗಿನ ಸಂಗೀತಾಸಕ್ತರ ಬಳಗದ ‘ಸಂಗೀತ ರತ್ನ (೧೯೩೦), ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ’ ಪಡೆದ ‘ಮೊದಲ ಹಿಂದುಸ್ಥಾನಿ ಗಾಯಕ’ (೧೯೬೦) ‘ಕರ್ನಾಟಕ ಸಾರ್ವಜನಿಕ ಸೇವಾ ಪ್ರಶಸ್ತಿ’ (೧೯೬೮), ‘ಪದ್ಮಶ್ರೀ’ (೧೯೭೦), ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ’ (೧೯೭೬), ‘ಪದ್ಮಭೂಷಣ’ (೧೯೭೬), ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೭೫), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (೧೯೮೧), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೭೫), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (೧೯೮೧), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಪ್ರಪ್ರಥಮ ‘ದೇಶಿಕೋತ್ತಮ ಪ್ರಶಸ್ತಿ’ (೧೯೮೮), ‘ಉಸ್ತಾದ್‌ ಹಾಫೀಜ್‌ ಅಲಿಖಾನ್‌ ಪ್ರಶಸ್ತಿ’ (೧೯೯೧) ಕರ್ನಾಟಕ ಸರ್ಕಾರದ ‘ವಿಧಾನ ಪರಿಷತ್‌ ಸದಸ್ಯತ್ವದ ಗೌರವ ‘ಪದ್ಮ ವಿಭೂಷಣ ಪ್ರಶಸ್ತಿ- ಮುಂತಾದ ಪ್ರಶಸ್ತಿ ಪುರಸ್ಕಾರ ಅವರಿಗೆ ಸಂದಿವೆ. ಅ.ನ.ಕೃ. ಹಾಗೂ ಪ್ರೊ ಶಿ.ಶಿ. ಬಸವನಾಳರ ಪ್ರೇರಣೆಯಿಂದಾಗಿ ಧಾರವಾಡ ಮುರುಘಾ ಮಠದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳ ಆಶೀರ್ವಾದದ ಬಲದಿಂದ ಬಯಾಲದಷ್ಟೇ ಎತ್ತರವನ್ನು ವಚನಗಾಯನದಲ್ಲೂ ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ‘ಸಂಗೀತ ರತ್ನ’ ಗೌರವ ಗ್ರಂಥ ಅರ್ಪಿಸಿದೆ. ‘ನನ್ನ ರಸ ಯಾತ್ರೆ’ ಅವರ ಆತ್ಮಚರಿತ್ರೆ ಗ್ರಂಥ ಪ್ರಕಟಗೊಂಡಿದೆ . ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಅಧ್ಯಯನ ಪೀಠದ ಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ . ಕರ್ನಾಟಕ ವಿಶ್ವ ವಿದ್ಯಾಲಯದ ಸಂಗೀತ ವಿಭಾಗಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿದರು.
ಅಂದು ಕರಾಳ ದಿನ ಸ್ವರ ಸಾಮ್ರಾಟ ಸ್ವರ ಚಕ್ರವರ್ತಿ ೧೯೯೨ರ ಸೆಪ್ಟೆಂಬರ್ ೧೨ರಂದು ಲಿಂಗೈಕ್ಯರಾದ ಡಾ. ಮಲ್ಲಿಕಾರ್ಜುನ ಮನಸೂರ ಅವರ ಶಿಷ್ಯ ಸಂಪತ್ತು ಅಪಾರ. ಅವರ ಶಿಷ್ಯರಲ್ಲಿ ಪಂ ಸಿದ್ಧರಾಮ ಜಂಬಲದಿನ್ನಿ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ. ಡಾ. ರಾಜಶೇಖರ ಮನಸೂರ (ಮಗ), ಶ್ರೀಮತಿ ನೀಲಮ್ಮ ಕೊಡ್ಲಿ (ಮಗಳು) ಪ್ರೊ. ಅಜ್ಜಣ್ಣ ಪಾಟೀಲ (ಅಳಿಯ), ಬಿ.ಸಿ. ಪಾಟೀಲ, ಪ್ರೊ. ರಾಜೀವ ಪುರಂದರೆ, ಗೀತಾ ಕುಲಕರ್ಣಿ, ಶಂಕರ ಮೊಕಾಶಿ ಪುಣೆಕರ, ಗೋದೂತಾಯಿ ಹಾನಗಲ್ಲ, ವಾಯ್‌, ಎಫ್‌, ಬಂಗ್ಲೇದ,ಡಾ ಮೃತ್ಯುಂಜಯ ಶೆಟ್ಟರ ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. ಕರ್ನಾಟಕ ಸರ್ಕಾರ ಧಾರವಾಡದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿ, ಪ್ರತಿ ವರ್ಷ ರಾಷ್ಟ್ರ ಮಟ್ಟದ ಸಂಗೀತಗಾರರ ಮನಸೂರ ಸಮ್ಮಾನ ಪ್ರಶಸ್ತಿ ನೀಡುತ್ತಿದೆ.
ಮರಾಠಿ ಭಾಷಿಕರಲ್ಲಿ ಇವರ ಸಂಗೀತ ಅಲ್ಲಿನ ಜನರಿಗೆ ಹುಚ್ಚು ಹಿಡಿಸುತ್ತಿತ್ತು. ಮರಾಠಿ ಸಾಹಿತಿ ಪು ಲ ದೇಶಪಾಂಡೆ ಅಂತಹ ಮೇರು ಸಾಹಿತಿ ಡಾ ಮಲ್ಲಿಕಾರ್ಜುನ ಮನ್ಸೂರ ಅವರ ನಿಕಟವರ್ತಿಗಳಾಗಿದ್ದರು ಮತ್ತು ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕಿಂತ ಹೆಚ್ಚಿನ ಸಂತಸದ ಸಂಗತಿ ಎಂದರೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧೀ ಅವರು ಡಾ ಮಲ್ಲಿಕಾರ್ಜುನ ಮನ್ಸೂರ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಒಂದೊಮ್ಮೆ ಕರ್ನಾಟಕ ಭವನ ದೆಹಲಿಯಲ್ಲಿ ಡಾ ಮಲ್ಲಿಕಾರ್ಜುನ ಮನ್ಸೂರ ಅವರು ತಂಗಿದ್ದಾಗ ಅವರಿಗೆ ವಿಷಮ ಜ್ವರ ಮತ್ತು ಆರೋಗ್ಯದ ಸಮಸ್ಯೆ ಎದುರಾಯಿತಂತೆ. ಈ ವಿಷಯವನ್ನು ಶ್ರೀ ಮಹಾದೇವ ಹೊರಟ್ಟಿಯವರು ಶ್ರೀಮತಿ ಇಂದಿರಾ ಗಾಂಧೀ ಅವರಿಗೆ ತಿಳಿಸಿದಾಗ ಸ್ವತಃ ಶ್ರೀಮತಿ ಇಂದಿರಾ ಗಾಂಧಿಯವರು ಡಾ ಮಲ್ಲಿಕಾರ್ಜುನ ಮನ್ಸೂರ ಅವರನ್ನು ಕರೆದುಕೊಂಡು ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚರಿಸಿ ತಮ್ಮ ಮನೆಯ ಅತಿಥಿ ಗೃಹಕ್ಕೆ ಶ್ರೀ ಮಹಾದೇವ ಹೊರಟ್ಟಿಯವರ ಜೊತೆಗೆ ಕರೆದುಕೊಂಡು ಹೋಗಿ ಉಪಚರಿಸಿದರಂತೆ.

ಜಗತ್ತಿಗೆ ಹಿಂದೂಸ್ತಾನಿ ಸಂಗೀತವನ್ನು ಪ್ರಚುರಗೊಳಿಸಿದ ಡಾ ಮಲ್ಲಿಕಾರ್ಜುನ ಮನ್ಸೂರ ಕನ್ನಡ ಮಾತೆ ಹೆತ್ತ ಹೆಮ್ಮೆಯ ಪುತ್ರ ಸ್ವರ ಸಾಮ್ರಾಟ.
___________________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

LEAVE A REPLY

Please enter your comment!
Please enter your name here

Latest News

ಗಾದೆಮಾತು : ನಯವಾಗಲಿ, ಭಯವಾಗಲಿ, ಇಲ್ಲದವ ಧರ್ಮವೇನು ಮಾಡಿಯಾನು?

ಇದೊಂದು ಅದ್ಭುತವಾದ ಗಾದೆ ಮಾತು. ಇದು ಮನುಷ್ಯನ ವ್ಯಕ್ತಿತ್ವದಲ್ಲಿ ಇರಬೇಕಾದ ಅತ್ಯಗತ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ.​   ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದುದು. ಕೇವಲ ಮನುಷ್ಯನಾಗಿ...

More Articles Like This

error: Content is protected !!
Join WhatsApp Group