ಸಿಂದಗಿ; ಜಲಜೀವನ ಮಿಶನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಕಷ್ಠು ಹಣ ವ್ಯಯ ಮಾಡಿದೆ ಆದರೆ ಸರಿಯಾದ ನಿರ್ವಹಣೆ ಕೊರತೆಯಿಂದ ಯಾವ ನಲ್ಲಿಯಲ್ಲಿ ಬರುತ್ತಿಲ್ಲ ಕಾರಣ ಅಧಿಕಾರಿಗಳು ಪ್ರತಿ ಗ್ರಾಮ ಪಂಚಯತಿಯ ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಯೋಜನೆಯ ಸಫಲ ಮಾಡಿ ಎಂದು ಶಾಸಕ ಅಶೋಕ ಮನಗೂಳಿ ಖಡಕ್ಕಾಗಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಕಾಮಗಾರಿಗಳನ್ನು ಸರಿಯಾಗಿ ನೋಡುವಲ್ಲಿ ಅಧಿಕಾರಿಗಳ ವೈಫಲ್ಯ ಕಂಡು ಬರುತ್ತಿದೆ ಅದಕ್ಕಾಗಿ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಎಂದು ತಿಳಿಸಿದ ಅವರು, ತಾಲೂಕಿನಲ್ಲಿ ೪೮೬ ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ ೨೪೮ ಸ್ವಂತ ಕಟ್ಟಡ, ೧೫೫ ವಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಆಲಮೇಲ, ಕಡಣೀ, ತೋಂಟಾಪುರ, ಬಮ್ಮನಹಳ್ಳಿ, ಬಳಗಾನೂರ, ದೇವರನಾವದಗಿ, ಕುಮಸಗಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟಾರಗಸ್ತಿ ಮಾತನಾಡಿ, ಬೋರಗಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕೈಕೊಂಡು ಹಲವಾರು ವರ್ಷಗಳೆ ಕಳೆದಿವೆ ಆದರೆ ನಲ್ಲಿಯಲ್ಲಿ ನೀರು ಕಂಡಿಲ್ಲ. ಸರಕಾರದ ಯೋಜನೆಗೆ ಏಟು ಬಿದ್ದಂತಾಗಿದೆ. ಅಧಿಕಾರಿಗಳು ನಿರ್ವಹಣೆಯಲ್ಲಿ ಎಡವಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸದಸ್ಯ ಗಂಗಾಧರ ಚಿಂಚೋಳಿ ಮಾತನಾಡಿ, ತಾಲೂಕಿನಲ್ಲಿ ದಿಕ್ಕು ದಿಸೆಯಿಲ್ಲ ಜೆಜೆಎಂ ಕಾಮಗಾರಿ ಆಗಿವೆ ಅದರಲ್ಲಿ ನೀರು ಸಹ ಕಂಡಿಲ್ಲ. ಅಧಿಕಾರಿಗಳು ಕೇಳಬೇಕು ಎಂದರೆ ಕರೆ ಸ್ವೀಕರಿಸುವುದಿಲ್ಲ. ಅಲ್ಲದೆ ನಾವು ಕೆಡಿಪಿ ಸದಸ್ಯರೆನ್ನುವುದೇ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ನಾಮಕೆವಾಸ್ತೆ ನೇಮಕವಾದಂತಾಗಿದೆ ಎಂದು ಅಸಮಾದಾನ ಹೊರ ಹಾಕಿದರು.
ಕೆಡಿಪಿ ಸದಸ್ಯ ಅನೀಲ ಉಡಚ್ಯಾಣ ಮಾತನಾಡಿ, ಕುಮಸಗಿಯಲ್ಲಿ ಗ್ರಾಮದಲ್ಲಿ ೫ ಸಾವಿರ ಲೀಟರನ ಓವರ್ ಹೆಡ್ ಟ್ಯಾಂಕ ಕಳಪೆಯಾಗಿ ಕಟ್ಟಿದ್ದಾರೆ ಇದರಿಂದ ಹೊಸದರಲ್ಲೆ ಸೋರುತ್ತಿದೆ ಅಧಿಕಾರಿಗೆ ತಿಳಿಸಿದರೆ ರಿಪೇರಿ ಮಾಡಿಸೋಣ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಕೂಡಲೇ ಗುತ್ತಿಗೆದಾರರಿಂದ ದುರಸ್ಥಿ ಕಾರ್ಯ ಕೈಕೊಳ್ಳುವುದರ ಜೊತೆಗೆ ಜೆಜೆಎಂ ಸರಿಯಾಗಿ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ ಮಾತನಾಡಿ, ಬಳಗಾನೂರ ಗ್ರಾಮದಿಂದ ಕೆಲವು ಗ್ರಾಮಗಳಿಗೆ ಚಾಂದಕವಟೆ ಮಾರ್ಗವಾಗಿ ನೀರು ಸರಬರಾಜುಗೊಳ್ಳುತ್ತಿದೆೆ ಆದರೆ ಈ ಗ್ರಾಮದಲ್ಲಿ ನೀರಿನ ಅಭಾವಿವೆ ಕಾರಣ ಮೂಂಬರುವ ಬೆಸಿಗೆ ಬರುವುದೊಳಗೆ ನೀರಿನ ಸಮಸ್ಯೆ ಉಲ್ಬಣಿಸದಂತೆ ಕ್ರಮ ವಹಿಸಿ ಎಂದರು.
ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ ವಡಗೇರಿ, ನೀರು ನೈರ್ಮಲ್ಯ ಇಲಾಖೆಯ ಎಇಇ ತಾರಾನಾಥ ರಾಠೋಡ, ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ, ಪಿಎಂಜಿಎಸ್ವೈ ಜಿ.ವೈ.ಮುರಾಳ, ಸಿಡಿಪಿಓ ಹಳ್ಳಿ, ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರವಿಂದ ಡೋಣೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವಿವರಣೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋದ್ದಾರ, ಯೋಜನಾಧಿಕಾರಿ ಸಿ.ಬಿ.ಕುಂಬಾರ, ಆಲಮೇಲ ಎಇಇ ಪರೀದಾ ಪಠಾಣ, ತಹಶೀಲ್ದಾರ ಕರೆಪ್ಪ ಬೆಳ್ಳಿ, ಆಲಮೇಲ ತಹಶೀಲ್ದಾರ ಸುರೇಶ ಅರಕೇರಿ, ತಾಪಂ ಎಇಇ ರಾಮು ಅಗ್ನಿ ವೇದಿಕೆ ಮೇಲಿದ್ದರು.

