ಮರಡಿನಾಗಲಾಪೂರ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹೋಬಳಿಯ ಮರಡಿನಾಗಲಾಪೂರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಪ್ರಧಾನ ಗುರುಮಾತೆ ಶ್ರೀಮತಿ ದಮಯಂತಿ ಪ್ರಹ್ಲಾದಗೌಡ ಪಾಟೀಲ(ನೇಸರಗಿ) ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಂಥ ಲೋಕಾರ್ಪಣೆಗೊಳಿಸಿದ ಶಾಲೆಯ ಹಳೆಯ ವಿದ್ಯಾರ್ಥಿ, ಕನ್ನಡ ಕಟ್ಟಾಳು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಉದ್ಯೋಗಿ ಬೀರಪ್ಪ ಬಾಳಪ್ಪ ಕಂಕಣವಾಡಿ ( ಮರಡಿನಾಗಲಾಪೂರ) ಅವರು ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಹಿತಿಗಳು, ಕವಿಗಳು, ಜ್ಞಾನಪೀಠ ವಿಜೇತರು, ಶರಣರ ಕುರಿತು ಮಾತನಾಡಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಮಹಾನ್ ದಾರ್ಶನಿಕ ಬಸವಣ್ಣ* ಗ್ರಂಥ ಬಸವಣ್ಣನವರ ಜನನ, ಕಪ್ಪಡಿ ಸಂಗಮದಲ್ಲಿ ಬಸವಣ್ಣನವರ ವಿದ್ಯಾಭ್ಯಾಸ, ಕಾಯಕ ಜೀವನ, ಕಲ್ಯಾಣದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ, ಪ್ರಸಾದ- ದಾಸೋಹ, ಅನುಭವ ಮಂಟಪದ ಸ್ಥಾಪನೆ, ಬಸವ ಪೂರ್ವದ ಪರಿಸ್ಥಿತಿ ಹಾಗೂ ನಂತರದ ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ, ಶೈಕ್ಷಣಿಕ ಪರಿಸ್ಥಿತಿ ವಿವರದೊಡನೆ ಬಸವಣ್ಣನವರ ಘನ ವ್ಯಕ್ತಿತ್ವ ಹಾಗೂ ಜೀವನದ ಘಟನೆಗಳನ್ನು ಒಳಗೊಂಡು ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಿಕ್ಷಕರಾದ ಮಹಾಂತೇಶ ವೆಂಕನಗೌಡ ಪಾಟೀಲ (ಗದ್ದಿಕರವಿನಕೊಪ್ಪ) ಅವರು ಮಾತನಾಡಿ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಮಹಾನ್ ಮಾನವತಾವಾದಿ, ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ವಿಶ್ವದ ಯುಗಪುರುಷ ಬಸವಣ್ಣನವರು ಮಹಾ ಮಾನವತಾವಾದಿ, ಸ್ವತಂತ್ರ ವಿಚಾರವಾದಿ, ಸಮತಾವಾದಿ, ದಲಿತೋದ್ಧಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸ್ತ್ರೀಕುಲೋದ್ಧಾರಕ, ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವದ ಮಹಾನ್ ದಾರ್ಶನಿಕರಾಗಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಕಲ್ಪನೆ ಬಿತ್ತುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲೆಯ ಮಾಜಿ ಅದ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಗ್ರಂಥವು ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ ತಲುಪುವ ಮೂಲಕ, ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಎಸ್.ಸಿ.ತಳವಾರ (ಬಸಾಪುರ) ಅವರು ಸ್ವಾಗತಿಸಿದರು, ಶಿಕ್ಷಕಿಯರಾದ ವನಿತಾ ಎಸ್.(ಚಿಕ್ಕಬಾಗೇವಾಡಿ)ವಂದಿಸಿದರು
ಶಿಕ್ಷಕರಾದ ಬಿ.ಆಯ್.ಕೆಂಚನಗೌಡರ (ಚಿವಟಗುಂಡಿ), ಎಸ್.ಬಿ.ಪಾರ್ವತಿ (ಅರಳಿಕಟ್ಟಿ), ಎ.ಬಿ.ತುಮ್ಮರಗುದ್ದಿ (ಮುರಕೀಭಾಂವಿ),ಮೋನಿಕಾ ರಾಜಮಾನೆ ಉಪಸ್ಥಿತರಿದ್ದರು.

