ಮೂಡಲಗಿ – ನಮ್ಮ ದೇಶದಲ್ಲಿ ನಾಯಕನಾಗುವವನು ಯಾವುದೇ ರಾಜ ಮಹಾರಾಜರ ಮನೆಯಲ್ಲಿ ಜನಿಸುವುದಿಲ್ಲ ಬದಲಾಗಿ ನಮ್ಮ ಯುವಕರು ಹಾಗೂ ಮತದಾರರು ಮತ ನೀಡುವ ಬ್ಯಾಲೆಟ್ ಬಾಕ್ಸ್ ದಿಂದ ಜನಿಸುತ್ತಾರೆ ಎಂದು ಉಪನ್ಯಾಸಕ ಶಾನೂರ್ ಐಹೊಳೆ ಅವರು ನುಡಿದರು.
ಅವರು ಇಲ್ಲಿನ ಸ್ವಾಮಿ ಶ್ರೀಪಾದಬೋಧ ಸರಕಾರಿ ಪದವಿ ಕಾಲೇಜಿನಲ್ಲಿ ಜರುಗಿದ 16 ನೇಯ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಉಪನ್ಯಾಸಕರಾಗಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ 08 ಆರಭಾವಿ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಹಾಗೂ ತಹಶೀಲ್ದಾರರಾದ ಶ್ರೀಶೈಲ ಗುಡಮೆ ಅವರು ಮಾತನಾಡಿ ಮತಗಳ ಮಹತ್ವ, ಮತದಾನದಲ್ಲಿ ಯುವಕರ ಪಾತ್ರದ ಬಗ್ಗೆ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ವಿವರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಹೇಶ ಕಂಬಾರ ವಹಿಸಿ ಮಾತನಾಡಿದರು.
ವೇದಿಕೆಯ ಮೇಲೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಫ್. ಜಿ. ಚಿನ್ನಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಹಿರೇಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ತಾಲೂಕ ದೈಹಿಕ ಪರಿವೀಕ್ಷಕರು ಎಸ್ ಬಿ ಹಳಿಗೌಡ್ರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು. ಹಾಗೂ ವಿಶೇಷ ಪರಿಷ್ಕರಣೆ ಹಾಗೂ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವಲ್ಲಿ ಶ್ರಮವಹಿಸಿದ ಮತಗಟ್ಟೆ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ, ಕಾಲೇಜು ಮಕ್ಕಳು ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಂದ ಮೂಡಲಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮತದಾರರ ದಿನಾಚರಣೆಯ ಕುರಿತು ಘೋಷಣೆಗಳನ್ನು ಕೂಗುತ್ತ ಜಾಥಾ ನಡೆಸಲಾಯಿತು.
ವೇದಿಕೆ ಕಾರ್ಯಕ್ರಮವನ್ನು ಪರಸಪ್ಪ ಕೆ. ನಾಯಕರವರು ಸ್ವಾಗತಿಸಿ, ನಿರೂಪಿಸಿದರು. ಕುಮಾರಿ ಶ್ರೇಯಾ ಮೆಳವಂಕಿ ಪ್ರಾರ್ಥಿಸಿದರು. ಕೊನೆಯಲ್ಲಿ ತಾಲೂಕು ಶಿರಸ್ತೇದಾರ ಶ್ರೀಕಾಂತ ಮಾಯನ್ನವರ ವಂದನೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

