ಬೇಂದ್ರೆ ಅಜ್ಜನ ನೆನಪು
ಜನವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾsನ
ನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾ
ಬಡತನಕ ಹೇಸಿದಾವಲ್ಲ ಮೆಟ್ಟಿ ನಿಂತಾವ
ಬೆಂದು ಬೇಂದ್ರೆಯಾದಾಂವ
ರಾಮಚಂದ್ರ ಅಂಬೂತಾಯಿಯ ಮಗನಾಗಿ
ಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾಂವ
ಮಾತು ಆಡಿದರ ಹಸಿ ಗ್ವಾಡ್ಯಾಗ ಹಳ್ಳ ಒಗದಂಗ ಮಾತಾಡಾಂವ
ಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣ
ತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾಂವ
ತನ್ನ ಹಾಡಿನಾಗ
ಮಲ್ಲಿಗಿ ಹೂವಿನ
ಗಮಗಮ
ಕುರುಡು ಕಾಂಚಾಣದ ಜಣಜಣ
ಕರಡಿ ಕುಣಿತದ
ತಕತಕ
ಮೂಡಲ ಮನೆಯ
ಚುಮು ಚುಮು
ಕಾಣಿಸಿದಾಂವ
ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ ಅಂತ ಹೇಳಿ
ಕನಸಿನೊಳಗೆ ಬಂದು ಕನಸು ಬಿತ್ತಿದಾಂವ
ನಮಗೆಲ್ಲಾ ಹುಸಿನಗುತ ಬಂದೀರಿ
ನಸುನಗುತ ತೆರಳಿ
ಅಂತಾ ನೀತಿ ಪಾಠ ಹೇಳಿದಾಂವ
ಕನ್ನಡದವರು ಮನಸು ಮಾಡಿದ್ರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿ
ನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವ
ಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾಂವ
ಗುಂಗುರು ಕೂದಲಿನ ಮುತ್ಯಾ
ಮಾತಿನ ಮಲ್ಲ ಶಬ್ದ ಗಾರುಡಿಗ
ನಮ್ಮ ನಾಡಿನ ಮಾಣಿಕ್ಯ
ನಮಗ
ಅರಳು ಮರಳು ಆದ್ರೂ
ನಿನ್ನ ನೆನಪು ಎಂದೂ ಸಾಯುವುದಿಲ್ಲ
ನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡ
ನಿನ್ನ ಜನುಮದಿನ ನಮಗೆಲ್ಲಾ ಹಬ್ಬ
ನಮಗೆಲ್ಲಾ ಹಬ್ಬ
ಆಶೀರ್ವಾದ ಮಾಡು ಮುತ್ಯಾ
ಶಿವಕುಮಾರ ಕೋಡಿಹಾಳ ಮೂಡಲಗಿ

