ಹುನಗುಂದ :ನಿಗದಿಪಡಿಸಿದಕ್ಕಿಂತ ಕಡಿಮೆ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ನಿರೀಕ್ಷಕರಿಗೆ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ನೂರಂದಗೌಡ ಕಲಗೋಡಿ ಸೂಚಿಸಿದರು.
ಪಟ್ಟಣದ ಬಸವ ಮಂಟಪದಲ್ಲಿ ಬುಧವಾರ ತಾಲ್ಲೂಕು ಪಂಚಾಯತ್, ಪುರಸಭೆ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯಿಂದ ನಡೆದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ನಿರೀಕ್ಷಕ ರಾಜಶೇಖರ ತುಂಬಗಿ ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ನೀಡುತ್ತಿರುವಾಗ ವಿವಿಧ ವಾರ್ಡಗಳಿಂದ ಆಗಮಿಸಿದ್ದ ಮಹಿಳೆಯರು ಮಧ್ಯ ಪ್ರವೇಶಿಸಿ ನ್ಯಾಯಬೆಲೆ ಅಂಗಡಿಯಲ್ಲಿ ಒಂದು ಕೆ ಜಿ ಪಡಿತರ ಕಡಿತಗೊಳಿಸುವ ಬಗ್ಗೆ ಅಧ್ಯಕ್ಷರ ಗಮನ ಸೆಳೆದರು.
ಮುಖಂಡ ಮಹಾಂತೇಶ ಅವಾರಿ ಹಾಗೂ ವಿಜಯ ಗದ್ದನಕೇರಿ ಮಾತನಾಡಿ, ಕೇಂದ್ರ ಸರ್ಕಾರದ ಅಸಹಕಾರದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಬಡವರ, ದಿನದಲಿತರ ಹಾಗೂ ಮಹಿಳೆಯರ ಪ್ರಗತಿಗಾಗಿ ಮತ್ತು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಅವುಗಳು ಬಿಟ್ಟಿಭಾಗ್ಯಗಳು ಎಂದು ಅಪಮಾನ ಮಾಡುತ್ತಿದ್ದವರಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ನೀಡಿದೆ ಎಂದರು.
ಶಕ್ತಿಯೋಜನೆಯಡಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಕೆಲವು ನಿರ್ವಾಹಕರು ಅಗೌರವವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ನೀಡುತ್ತಿದ್ದ ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ ಅವರ ಎದುರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯತ್ ಇಒ ಮುರುಳಿಧರ ದೇಶಪಾಂಡೆ, ಸಿಡಿಪಿಒ ಮುತ್ತಣ್ಣ ಅರಳಿ, ಮುಖಂಡರಾದ ಶಿವಾನಂದ ಕಂಠಿ, ಶೇಖರಪ್ಪ ಬಾದವಾಡಗಿ, ಸುರೇಶ ಹಳಪೇಟಿ, ಶರಣು ಬೆಲ್ಲದ, ಮಲ್ಲಿಕಾರ್ಜುನ ಹೂಗಾರ ಉಪಸ್ಥಿತರಿದ್ದರು.

