ಸಿಂದಗಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ, ಇದು ಕೇವಲ ಬೀಳ್ಕೊಡುಗೆ ಸಮಾರಂಭವಲ್ಲ; ನಿಮ್ಮ ಬದುಕಿನ ಹೊಸ ಅಧ್ಯಾಯದ ಆರಂಭ. ಶಿಕ್ಷಣ ಹಣ ಸಂಪಾದನೆಗಾಗಿ ಅಲ್ಲ, ಜ್ಞಾನಾರ್ಜನೆ ಮತ್ತು ಸಂಸ್ಕಾರ ನಿರ್ಮಾಣಕ್ಕಾಗಿ ಇರಬೇಕು ಎಂದು ಬಬಲೇಶ್ವರದ ಶ್ರೀ ಶಾಂತವೀರ ಪಪೂ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಅವಟಿ ಹೇಳಿದರು.
ಅವರು ತಾಲೂಕಿನ ರಾಂಪೂರ ಗ್ರಾಮದ ಜ್ಞಾನ ಸಿಂಚನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿದ ಅವರು, ಈ ವಿದ್ಯಾಸಂಸ್ಥೆಯಲ್ಲಿ ಕಂಡುಬರುವ ಆತಿಥ್ಯ, ಪ್ರೀತಿ–ವಿಶ್ವಾಸ ಹಾಗೂ ಸಂಸ್ಕಾರ ಮನಸಿಗೆ ಸಂತೋಷ ತಂದಿದೆ ಎಂದರು. ಹಣಕ್ಕಾಗಿ ಶಿಕ್ಷಣ ನೀಡುವ ಮನೋಭಾವ ಇಲ್ಲದೆ, ಮೌಲ್ಯಗಳನ್ನು ಬೆಳೆಸುವ ಸಂಸ್ಥೆಯಾಗಿ ಇದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಸಿಸಿದರು.
ಗುರಿಯ ದಾರಿಯಲ್ಲಿ ಅನೇಕ ಅಡೆತಡೆಗಳು ಎದುರಾಗುತ್ತವೆ ಆದರೆ ಅವುಗಳ ಕಡೆ ಗಮನಕೊಡದೆ ಗುರಿಯತ್ತಲೇ ನಿಮ್ಮ ದೃಷ್ಟಿ ಕೇಂದ್ರೀಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಕ ಸಂತೋಷ್ ಬಂಡೆ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಗ್ರಹಿಕಾ ಶಕ್ತಿ, ಆಲೋಚನ ಶಕ್ತಿ ಹಾಗೂ ವಿಷಯಾಸಕ್ತಿ ಎಂಬ ಮೂರು ಶಕ್ತಿಗಳು ಅಗತ್ಯವೆಂದರು. ಕಲಿಕೆಯಲ್ಲಿ ಆಸಕ್ತಿಯೇ ಯಶಸ್ಸಿನ ಮೂಲವಾಗಿದ್ದು, ಮೌಲ್ಯಾಧಾರಿತ ಬದುಕನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ವೇಳೆ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವುದು ದೊಡ್ಡ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಂಸ್ಥೆ, ವಿಜಯಪುರದ ಅಧ್ಯಕ್ಷ ವೈ .ಜೆ. ಬೋಳೆಗಾಂವ , ಡಾ.ಮಹಾಂತೇಶ ಹಿರೇಮಠ ಮಾತನಾಡಿದರು.
ವೇದಿಕೆ ಮೇಲೆ ಹಣಮಂತ ತಡಲಗಿ, ನಿಂಗಣ್ಣ ಮಾರ್ಸನಳ್ಳಿ, ಪ್ರಾಚಾರ್ಯ ಆರ್.ವ್ಹಿ.ಬಿಂಗೆ, ವಿದ್ಯಾರ್ಥಿ ಪ್ರತಿನಿಧಿ ಸುಕನ್ಯಾ ಮದರಿ, ಕಾರ್ಯಾಧ್ಯಕ್ಷ ವ್ಹಿ.ವ್ಹಿ.ಪಾಟೀಲ ಇದ್ದರು. ಪ್ರೀತಿ ಮಾಲಾಗಾರ ಪ್ರಾರ್ಥಿಸಿದರು, ಉಪನ್ಯಾಸಕ ವಸಂತ ಪಾಟೀಲ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪಾಲಕರು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಇದ್ದರು.

