ಮೂಡಲಗಿ: ಸಹಕಾರ ಕ್ಷೇತ್ರದಲ್ಲಿ ಸಾಧಕ ರತ್ನರಿಗೆ ನೀಡುತ್ತಿರುವ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಕೊಡಮಾಡುವ ‘ಕರ್ನಾಟಕ ಸಹಕಾರ ಶಿರೋಮಣಿ 2025’ ಪ್ರಶಸ್ತಿಯನ್ನು ಕಲ್ಲೋಳಿ ಪಟ್ಟಣದ ಪ್ರತಿಷ್ಠಿತ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ., ಇದರ ನಿರ್ದೇಶಕರು ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸತೀಶ ಕಡಾಡಿ ಅವರು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ದಿ ಕ್ಯಾಪಿಟಲ್ ಹೊಟೇಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಕೃಷಿ ಸಚಿವ ಚಲುವನಾರಾಯಣ ಸ್ವಾಮಿ, ಪ್ರಧಾನ ಸಂಪಾದಕರು ರವಿ ಹೆಗಡೆ ಸೇರಿದಂತೆ ಅನೇಕರು ಇದ್ದರು.
ಪರಿಚಯ
ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಜ್ಯೇಷ್ಠ ಸುಪುತ್ರ ಸತೀಶ ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ನ ನಿಕಟಪೂರ್ವ ನಿರ್ದೇಶಕರಾಗಿಯೂ ಸತೀಶ ಸೇವೆ ಸಲ್ಲಿಸಿ, ರೈತರಿಗೆ ಕ್ಷೇತ್ರದಲ್ಲಿರುವ ಹಲವಾರು ಪ್ರಾಥಮಿಕ ಸಂಘಗಳಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ.
ಗೋಕಾಕ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿದ್ದ ಸಂಕಷ್ಟಗಳನ್ನು ಅರಿತ ಸತೀಶ ಕಡಾಡಿ ಅವರು, ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧಿಕಾರಿಗಳು ಮುಕ್ತವಾಗಿ ಕಾರ್ಯನಿರ್ವಹಿಸುವ ವಾತಾವರಣದಿಂದ ಹೊರತಂದು, ನಿರಂತರ ಪ್ರೋತ್ಸಾಹ ನೀಡಿದರು. ಅದರ ಪರಿಣಾಮವಾಗಿ 2020 ಮಾರ್ಚ್ 8ಕ್ಕೆ ₹175 ಕೋಟಿ ಕೃಷಿ ಪತ್ತು 2025 ಮಾರ್ಚ್ ಅಂತ್ಯಕ್ಕೆ ಸುಮಾರು ₹447 ಕೋಟಿಗಳಿಗೆ ಏರಿಸಿದರು. ಇವರು ಬಿಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ಅವಧಿಯಲ್ಲಿ ₹236 ಕೋಟಿ ಸಾಲವನ್ನು ಹೆಚ್ಚಿಸಿ 6ನೇ ಸ್ಥಾನದಲ್ಲಿದ್ದ ಗೋಕಾಕ ತಾಲೂಕು ಕ್ಷಿಪ್ರ ಪ್ರಗತಿಯನ್ನು ಸಾಧಿಸಿ, 3ನೇ ಸ್ಥಾನಕ್ಕೆ ಬರಲು ನಿರಂತರವಾಗಿ ಶ್ರಮಿಸಿದರು.
ಬಿಡಿಸಿಸಿ ಬ್ಯಾಂಕ್ನ ಮೌಲ್ಯಮಾಪನದ ಆಧಾರದ ಮೇಲೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ, ಗೋಕಾಕ ತಾಲೂಕಿಗೆ ಹಲವಾರು ವರ್ಷಗಳಿಂದ ಪಿಕೆಪಿಎಸ್ಗಳಿಗೆ ಪ್ರೋತ್ಸಾಹಧನ ಸಿಗದಿರುವಾಗ, ಅದನ್ನು ಮರು ಪ್ರಾರಂಭಿಸಿ ಪಿಕೆಪಿಎಸ್ಗಳಿಗೆ ₹1 ಲಕ್ಷದವರೆಗೆ ಪ್ರೋತ್ಸಾಹಧನ ಮಂಜೂರು ಮಾಡಿಸಿದರು. ಹೀಗೆ ಅವರು ನಿರ್ದೇಶಕರಾದಾಗ ರೈತ ಪರವಾದ, ಆರ್ಥಿಕವಾಗಿ ಹಿಂದುಳಿದವರ ಮತ್ತು ಸಹಕಾರ ಸಂಘಗಳ ಅಭಿವೃದ್ಧಿಗೆ ಬಹಳ ಕಾಳಜಿವಹಿಸಿದರು. ತಂದೆಯಂತೆಯೇ ಮಗ ಎನ್ನುವಂತೆ ಅವರ ತಂದೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರಂತೆಯೇ ರೈತರ, ಹಿಂದುಳಿದವರ ಪರವಾಗಿ ಸದಾ ಕೆಲಸಗಳನ್ನು ಮುಂದುವರಿಸಿ, ಅವರಿಗೂ ಮುಂದೊಂದು ದಿನ ಉನ್ನತ ಹುದ್ದೆ ದೊರೆಯಲೆಂದು ಆಶಿಸೋಣ.

