ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು’ ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.
ಶನಿವಾರ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಕರ್ನಾಟಕ ಸರ್ಕಾರವು ಸಚಿವ ಸ್ಥಾನಮಾನವನ್ನು ನೀಡಿ ಉನ್ನತಿಕರಣಗೊಳಿಸಿದ್ದರ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಉಪ್ಪಾರ ಸಮಾಜದ ಹಿರಿಯರು ಹಾಗೂ ಮೂಡಲಗಿ ಮಾಧ್ಯಮ ಸಂಘದವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ವಿದೇಶ ವ್ಯಾಸಂಗಕ್ಕಾಗಿ ಅರ್ಹ ಉಪ್ಪಾರ ಸಮಾಜದ ಯುವಕರಿಗೆ ಬಡ್ಡಿ ರಹಿತವಾದ ಸಾಲವಾಗಿದ್ದು, ಸಮಾಜದ ಜನರು ಒಲವು ತೋರಬೇಕು ಎಂದರು.
ಮುಖ್ಯಮಂತ್ರಿಗಳು ಸಮಾಜದ ಬೆಳವಣಿಗೆಗಾಗಿ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ವಿದೇಶ ವ್ಯಾಸಂಗಕ್ಕಾಗಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಿದ್ದರ ಫಲವಾಗಿ ಸದ್ಯ ೨೭ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದಿವೆ ಎಂದರು.
ಉಪ್ಪಾರ ಸಮಾಜದ ಕೆಳಹಂತದ ಜನ ಮತ್ತು ಬಡ ಜನರನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಗಳಾದ ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ ಯೋಜನೆ, ಕಲ್ಯಾಣ ನೀರಾವರಿ ಯೋಜನೆ, ಸಾರಥಿ ಯೋಜನೆಗಳನ್ನು ಸಮಾಜದ ಅರ್ಹ ಜನರಿಗೆ ತಲುಪಿಸುವಂತ ಪ್ರಾಮಾಣಿಕ ಸೇವೆ ಮಾಡುತ್ತಿರುವ ಬಗ್ಗೆ ತಿಳಿಸಿದರು.
ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಭರಮಣ್ಣ ಉಪ್ಪಾರ ಸೌಹಾರ್ದತೆಯಿಂದ ಕಾರ್ಯಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅವರ ನಿಗಮಕ್ಕೆ ಆಯ್ಕೆಯು ಇಡೀ ಬೆಳಗಾವಿ ಜಿಲ್ಲೆಯ ಹೆಮ್ಮೆಯಾಗಿದೆ ಎಂದರು.
ಉಪ್ಪಾರ ಸಮಾಜದ ಈಶ್ವರ ಕಂಕಣವಾಡಿ, ಸುಭಾಷ ಗೊಡ್ಯಾಗೊಳ, ಹಣಮಂತ ಕಂಕಣವಾಡಿ, ಲಕ್ಷ್ಮಣ ಕಂಕಣವಾಡಿ, ಚಂದ್ರಶೇಖರ ಪತ್ತಾರ, ಸುಭಾಷ ಕಂಕಣವಾಡಿ ಇದ್ದರು.

