ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ “ತಿಂಗಳ ಬೆಳಕು -29″ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು.
ಪ್ರೊ. ಬಿ. ಬಿ. ಕಡ್ಲಿ ಅವರ ” ವಚನ-ಧರ್ಮ- ಪರಿಸರ” ಎಂಬ ವಿಮರ್ಶೆ ಮತ್ತು ಸಂಶೋಧನ ಸಂಕಲನವನ್ನು ಕುರಿತು ಡಾ. ಎನ್. ಎಚ್. ಮುದುಕಪ್ಪನವರ ಮಾತನಾಡಿದರು.
ಪ್ತೊ. ಬಿ.ಬಿ. ಕಡ್ಲಿಯವರ ಶಿಸ್ತು, ಅಚ್ಚುಕಟ್ಟುತನ, ಸರಳತೆಯಂತೆ ಅವರ ಕೃತಿಯು ವೈವಿಧ್ಯಮಯ ಲೇಖನಗಳೊಂದಿಗೆ ಮೌಲಿಕವಾಗಿದೆ ಎಂದರು. ಹದಿನೈದು ಲೇಖನಗಳ ಸಂಕಲನವಾದ ಈ ಕೃತಿಯು ವಚನಕಾರರ ತತ್ವ-ಆದರ್ಶ, ಅವರ ವಚನಗಳಲ್ಲಿ ಪುನರ್ಜನ್ಮದ ಕಲ್ಪನೆ, ಧರ್ಮದ ಸೂಕ್ಷ್ಮ ವಿಚಾರಗಳು, ಹುನಗುಂದ ಪರಿಸರದ ಸಂಶೋಧನಾತ್ಮಕ ಸ್ಥಳನಾಮಗಳನ್ನು ತಿಳಿಸುವ ಮಹತ್ವದ ಕೃತಿಯಾಗಿದೆ ಎಂದರು.
ಯಾವುದು ಟೊಳ್ಳು- ಯಾವುದು ಗಟ್ಟಿ, ಸನ್ಯಾಸ ಮತ್ತು ವ್ಯಕ್ತಿ ಧರ್ಮ, ಧರ್ಮ: ವಿವೇಚನೆ, ಅರಿವು ಅರಸಿ ಹೋದ ಅರಸ, ಮಹಾಂತ ಜೋಳಿಗೆ, ಬಸವಣ್ಣನವರು ಕಟ್ಟಿದ ಸಮಾಜ, ಮೊದಲಾದ ಲೇಖನಗಳ ಕುರಿತು ಸುಧೀರ್ಘವಾಗಿ ಮಾತನಾಡಿದರು.
ಪ್ರೊ. ಬಿ. ಬಿ. ಕಡ್ಲಿ ಅವರು ಲೇಖಕರ ಮಾತುಗಳನ್ನಾಡುತ್ತ
ತಮ್ಮ ಅನುಭವಗಳನ್ನು ಅಭಿವ್ಯಕ್ತಿಗೊಳಿಸಿದರು. ತಮ್ಮ ಗುರುಗಳಾದ ಎಂ ಎಂ. ಕಲಬುರ್ಗಿಯವರ ಕುರಿತ ಒಡನಾಟವನ್ನು, ಅವರು ನೀಡಿದ ಸಾಹಿತ್ಯ ಕುರಿತಾದ ಸಲಹೆಗಳನ್ನು, ತಮ್ಮ ಬರವಣಿಗೆಗೆ ಮೆಚ್ಚುಗೆ ಸೂಚಿಸಿದ ಸಂದರ್ಭವನ್ನು ಮೆಲುಕು ಹಾಕಿದರು. ತಮ್ಮ ವಚನ- ಧರ್ಮ-ಪರಿಸರ ಕೃತಿಯಲ್ಲಿ ಅಭಿವ್ಯಕ್ತಿಗೊಂಡ ಹಲವಾರು ಪ್ರಶ್ನೆಗಳಿಗೆ ಸಮರ್ಥನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಎಸ್ ಮುಡಪಲದಿನ್ನಿ ಅವರು ವಚನ- ಧರ್ಮ- ಪರಿಸರ ಕೃತಿ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು. ವಚನಕಾರರ ನಿಲುವು, ಅವರ ವೈಚಾರಿಕ ಪ್ರಜ್ಞೆ, ಜಾತಿ, ಧರ್ಮದ ಸೂಕ್ಷ್ಮ ವಿಚಾರಗಳನ್ನು ತಿಳಿಸಿದರು. ಪ್ರೊ.ಬಿ.ಬಿ. ಕಡ್ಲಿ ಅವರನ್ನು ತಮ್ಮ ಪ್ರೀತಿಯ ಗುರುಗಳೆಂದು ಅಭಿಮಾನ ವ್ಯಕ್ತಪಡಿಸಿದರು. ಅವರ ಶಿಸ್ತು, ಪ್ರಾಮಾಣಿಕತೆ, ನೇರ ನುಡಿಯನ್ನು ಸ್ಮರಿಸಿದರು.
ಕುಮಾರಿ ಪೂರ್ಣಿಮಾ ಕಾಂಬ್ಳೆ ಪ್ರಾರ್ಥಿಸಿದರು. ಡಾ. ಎಲ್. ಜಿ. ಗಗ್ಗರಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎಂ. ಡಿ. ಚಿತ್ತರಗಿಯವರು ವಂದಿಸಿದರು. ಕೆ.ಎ.ಬನ್ನಟ್ಟಿ, .ಹೇಮಂತ ಬೂತ್ನಾಳ, ಡಾ.ಎಸ್.ಆರ್.ಗೋಲಗೊಂಡ ಡಾ.ನಾಗರಾಜ ನಾಡಗೌಡ, ಡಾ. ವಸಂತಕುಮಾರ ಕಡ್ಲಿಮಟ್ಟಿ, ಜಗದೀಶ ಹಾದಿಮನಿ, ಶ್ರೀಮತಿ ಗೀತಾ ತಾರಿವಾಳ, ಜಗದೀಶ ಹದ್ಲಿ, ಎ. ಎಂ. ಗೌಡರ ಸೇರಿದಂತೆ ಇನ್ನಿತರ ಲೇಖಕರು, ಸಹೃದಯರು, ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.