Homeಲೇಖನನಿಮ್ಮ ಹತ್ತಿರ ಇರಬಹುದಾದ ಮತ್ತು ನನ್ನಿಂದ ಶಾಶ್ವತವಾಗಿ ದೂರವಾದ ಅಮ್ಮನ ಬಗ್ಗೆ....

ನಿಮ್ಮ ಹತ್ತಿರ ಇರಬಹುದಾದ ಮತ್ತು ನನ್ನಿಂದ ಶಾಶ್ವತವಾಗಿ ದೂರವಾದ ಅಮ್ಮನ ಬಗ್ಗೆ….

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ….

ಹಡೆದ ತಾಯಿಯನು ಕಳಕೊಂಡ ಮ್ಯಾಲೆ ಮರಳಿ ಬರುವಳೆನೋ….? ತಮ್ಮ ಮತ್ತೆ ಸಿಗುವಳೆನೋ…

ಬಾಗಿಲಿಗೆ ಬಂದಿದ್ದ ಅಲೆಮಾರಿ ಜನಾಂಗದ ಯುವಕನೊಬ್ಬ ಲೇಟೆಸ್ಟ ಆಗಿ ಹಳೆಯ ಭಾರವಾದ ಪೇಟೆಯಿಂದ ಹಗುರವಾದ ಪಿಯಾನೋಕೆ ಅಪ್ಡೆಟ್ ಆಗಿ ಅದೆ ತನ್ನ ಹರಿದ ಗಂಟಲಿನಲ್ಲಿ ಹೊಟ್ಟೆಪಾಡಿಗಾಗಿ ಹಾಡುತ್ತಿದ್ದರೆ ಹೀಗೆಯೇ ತನ್ನ ಹೊಟ್ಟೆ ಹೊರೆಯುವದಕ್ಕೆ ಅಂತ ಬಂದಿದ್ದ ತಮ್ಮಣ್ಣನಿಗೆ ಅವನ ಅವ್ವನ ನೆನಪಾಗಿ ಕಣ್ಣುಗಳು ಮಂಜಾಗ ತೊಡಗಿದ್ದವು.

ಆಯಿ ಖರ ಸಾಂಗ್….ಮಲಾ ಖರಚ್ ಜಾತ್ರಾತನಾ ಅಣ್ಲಾಸ್ ಕಾಯ್….? ಅನ್ನುತ್ತ ಗಂಟಲು ಬಿಗಿದ ದನಿಯಲ್ಲಿ ಪಾಂಡ್ಯಾ ತನ್ನ ಅವ್ವನಿಗೆ ಕೇಳುತ್ತಿದ್ದರೆ ಎ ಬಾಳಾ ತಸ ಮನುಣೇ…ರೇ…ತುಲಾ ಉಗುಚಚ್ ಸತವತ್ಯಾತ ಕಾಕಾ ಅನ್ನುತ್ತ ತನ್ನ ಕಿರಿಯ ಮಗ ಪಾಂಡುರಂಗನನ್ನ ತೆಕ್ಕೆ ಬಡಿದಿದ್ದಳು ವಿಠಾಬಾಯಿ…

ಇನ್ನೊಂದು ಕಡೆ ಆಗಲೋ ಈಗಲೋ ಬೀಳುವಂತಾಗಿದ್ದ ಮತ್ತು ಜೋರು ಮಳೆಯಲ್ಲಿ ಜಂತಿಯಿಂದ ಜಿಣುಗುವ ನೀರ ಹನಿಗಳ ಹಿಡಿಯಲು ಮನೆಯ ಪಾತ್ರೆಗಳನ್ನೆಲ್ಲ ಮನೆತುಂಬ ಹರವುವ ಸ್ಥಿತಿಯಲ್ಲಿ ಇದ್ದ ಕಮಲವ್ವ ತನ್ನ ಹಠ ಮಾಡಿ ಅಳುವ ಮಗನನ್ನು ರಮಿಸಲು

ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳಂಗ| ಕಣ್ಣೋಟ
ಶಿವನ ಕೈಯಲಗು ಹೊಳೆದಂಗ|

ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ನನ್ನ ಕಂದ ಸಿದ್ಧನಂತ
ಮಕ್ಕಳಿರಲವ್ವ ಮನೆತುಂಬ||

ಅಂತ ಜೋಗುಳ ಹಾಡಿ ಮಲಗಿಸತೊಡಗಿದ್ದಳು.

ಹೋಟೆಲೊಂದರಿಂದ ಹೊರಗೆ ಬರುತ್ತಿದ್ದಂತೆಯೆ ಸಾಫ್ಟವೇರ್ ಇಂಜನೀಯರ್ ಆಗಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದ ಸುನೀಲನಿಗೆ ಥಟ್ಟನೆ ಕಣ್ಣಿಗೆ ಬಿದ್ದದ್ದು ಆ ಹೋಟೆಲಿನಿಂದ ಇಳಿಯುವ ಕೊನೆಯ ಕಟ್ಟೆಯ ಪಕ್ಕದಲ್ಲಿ ಉತ್ತರ ಕರ್ನಾಟಕದ ಯಾವುದೋ ಜಿಲ್ಲೆಯ ಹಳ್ಳಿಯೊಂದರಿಂದ ಬಂದು ದಿಕ್ಕಿಲ್ಲದಂತೆ ಆಗಿದ್ದ ಹಣ್ಣು ಹಣ್ಣು ಮುದುಕಿ.

ಜೇಬು ತಡಕಾಡಿ ಇಪ್ಪತ್ತರ ನೋಟೊಂದನ್ನ ಅವಳ ಚಾಚಿದ ಕೈಗೆ ಇಡುವಷ್ಟರಲ್ಲೇ ಅವನ ಹೆಂಡತಿ ಸುಮಾ ಕಾರು ಪಾರ್ಕಿಂಗಿನ ಕಡೆಗೆ ಹೋಗಿ ರೀ ಬೇಗ ಬನ್ನಿ ಅನ್ನುತ್ತಿದ್ದರೆ ಸುನೀಲನಿಗೆ ಹಳ್ಳಿಯಲ್ಲೇ ಉಳಿದು ಹೋದ ಅವ್ವನ ನೆನಪಾಗತೊಡಗಿತ್ತು.

ಒಂದು ಹೆರಿಗೆ ಅಂತ ಆಗುವಾಗ ಮೈಯ್ಯೊಳಗಿನ ಇನ್ನೂರ ಆರು ಮೂಳೆಗಳೂ ಏಕಕಾಲಕ್ಕೆ ಮುರಿದಷ್ಟು ನೋವು ಯಾತನೆಯನ್ನ ಅನುಭವಿಸಿ ಒಂದು ಜೀವಕ್ಕೆ ಜನ್ಮ ಕೊಡುವಾಗ ತಾನೇ ಪುನರ್ಜನ್ಮ ಪಡೆಯುವ ಅದೆಷ್ಟೋ ತಾಯಂದಿರು ಈ ಕಾಲದಲ್ಲಿ ಅಲ್ಲದೆ ಇದ್ದರೂ ಆಗಿನ ಕಾಲದಲ್ಲಿ ಅನುಭವಿಸಿದ ನೋವು,ಯಾತನೆಗಳ ಜೊತೆಗೆ ಈಗಲೂ ಅಷ್ಟೇನೂ ಮುಂದುವರೆಯದ ಕುಗ್ರಾಮಗಳಲ್ಲಿ ಉಳ್ಳವರ ಜಮೀನುಗಳಲ್ಲಿ ಕಳೆ ಕೀಳುವ,ಅವರಿವರ ಮನೆಯ ಕಸ ಮುಸುರೆ ತೊಳೆಯುವ ಅಥವಾ ಸಣ್ಣ ಪುಟ್ಟ ಉದ್ಯೋಗ ಮಾಡುತ್ತ ತಮ್ಮ ಮಕ್ಕಳ ಭದ್ರ ಬದುಕಿಗೆ ಅಂತಲೇ ಒಂದಷ್ಟು ಅಡ್ವಾನ್ಸು ಪಡೆದು ಅಥವಾ ಸಂಘದ ಸಾಲ ತೆಗೆಸಿ ತಾವು ಹೆತ್ತ ಮಕ್ಕಳ ಎದುರು ತಮ್ಮ ಬಡತನ ಮತ್ತು ಬೇಗುದಿಗಳನ್ನ ತೋರಗೊಡದೆ ಅವರನ್ನು ದೂರದ ಊರಿನ ಹಾಸ್ಟೇಲುಗಳಲ್ಲಿ ಇಟ್ಟು ಶಾಲೆ ಕಲಿಸುವ ಹಾಗೂ ತಮ್ಮ ಕೊನೆಗಾಲದಲ್ಲಿ ಅವರು ಆಸರೆ ಆದಾರು ಅನ್ನುವ ಕನಸು ಕಟ್ಟಿಕೊಳ್ಳುವ ಅದೆಷ್ಟೋ ಅಮ್ಮಂದಿರ ಬಗ್ಗೆ ತಿಳಿದವರಿಗೆ ತಮ್ಮ ಅಮ್ಮ ತನಗಾಗಿ ಏನೆಲ್ಲ ಮಾಡಿದ್ದಾಳೆ ಅನ್ನುವದರ ಅರಿವು ಖಂಡಿತ ಆಗದೆ ಇರಲಾರದು.

ಯಾವುದೋ ಊರಿನ ಮನೆಯೊಂದರಲ್ಲಿ ಹುಟ್ಟಿ ಬೆಳೆದು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನುವ ಹಾಗೆ ಗಂಡನ ಮನೆಯಲ್ಲಿ ನಸುಕಿನ ಜಾವಕ್ಕೆ ಎದ್ದು ಅಂಗಳ ಗುಡಿಸಿ ನೀರು ಚಿಮುಕಿಸಿ ಸ್ನಾನ ಮಾಡಿ ದೇವರ ಪೂಜೆ ಮುಗಿಸುವಷ್ಟರಲ್ಲೇ ಊರ ಮುಂದನ ಕೋಳಿ ಕೂಗುವ ಅಥವಾ ದೊಡ್ಡ ಊರುಗಳಲ್ಲಿ ಅಲಾರಮ್ಮುಗಳು ಬಡಿದುಕೊಳ್ಳುವಷ್ಟರಲ್ಲೇ ಕೆಲಸಕ್ಕೆ ಹೊರಡುವ ಗಂಡನಿಗೆ ನೀರು ಕಾಯಿಸಿ,ಮಕ್ಕಳ ಶಾಲೆಯ ಯುನಿಫಾರ್ಮಿಗೆ ಐರನ್ ಹಾಕಿ,ಅವರನ್ನು ತಯಾರು ಮಾಡಿ ಶಾಲೆಯ ಬಸ್ಸು ಹತ್ತಿಸುವಷ್ಟರಲ್ಲೇ ಹುಶ್ಯಪ್ಪಾ ಅನ್ನುವ ಇಂದಿನ ದಿನದ ನಾಜೂಕು ನಾರಿಯರಿಗಿಂತ ಹಳ್ಳಿಯ ಹೆಣ್ಣುಮಕ್ಕಳು ನಿಜಕ್ಕೂ ಗಟ್ಟಿಗಿತ್ತಿಯರು ಅಂದರೆ ತಪ್ಪಾಗಲಾರದು

ನಸುಕಿನಲ್ಲಿ ಎದ್ದು ರೊಟ್ಟಿ ತಟ್ಟುವದರಿಂದ ಹಿಡಿದು ರಾತ್ರಿ ಗಂಡ ಮನೆಗೆ ಬರುವ ತನಕ ಮನೆಗೆಲಸದಲ್ಲಿ ತೊಡಗಿಕೊಂಡು,ಟಿ.ವಿ,ಸೀರಿಯಲ್ಲುಗಳ ಮೊರೆ ಹೋಗದೆ ರಾಗಿ,ಭತ್ತ,ಜೋಳ,ಕಾಳುಗಳನ್ನ ಹಸನು ಮಾಡುವದರಲ್ಲಿ, ಬಟ್ಟೆ,ಬರೆ ತೊಳೆದು ಒಣಗಿಸುವದರಲ್ಲಿ,ಖಾಲಿ ಆಗಲು ಬಂದ ಒಲೆಯ ಕಟ್ಟಿಗೆ ಮತ್ತು ಉರುವಲು ಹೊಂದಿಸುವದರಲ್ಲಿ,ಅಥವಾ ಸಗಣಿಯ ಬೆರಣಿ ತಟ್ಟಿ ದನಕರುಗಳಿಗೆ ಮೇವು ಹಾಕಿ ನೀರು ಕುಡಿಸುವದರಲ್ಲಿ ಯಾವ ಸ್ವಾರ್ಥವೂ ಇಲ್ಲದೇ ದುಡಿಯುವ ಜೀವ ಅಂತ ಏನಾದರೂ ಇದ್ದರೆ ಅದು ಒನ್ ಯಾಂಡ್ ಓನ್ಲಿ ಅವ್ವ ಅಷ್ಟೇ…

ಈಗಿನ ದಿನಗಳಲ್ಲಿ ಸಹಜ ಹೆರಿಗೆಯ ನೋವಿಗೆ ಹೆದರಿ ಸೀಜರ್ ಮಾಡಿಸಿಕೊಳ್ಳುವ ಮತ್ತು ನೋವು ಸಹಿಸಲು ಅಸಾಧ್ಯ ಅಂತಲೋ,ತಮ್ಮ ಬಾಹ್ಯ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ ಅಂತಲೋ ಬಾಡಿಗೆ ತಾಯಂದಿರ ಮೊರೆ ಹೋಗುವ ಮತ್ತು ಪ್ರಣಾಳ ಶಿಶುವಿನ ಮೂಲಕ ತಾಯ್ತನ ಅನುಭವಿಸಲು ಹೊರಟ ಆಧುನಿಕ ನಾರಿಯರಿಗೆ ವಾಸಿಂಗ್ ಮಷೀನ್,ಪ್ರಿಡ್ಜ್,ರೆಫ್ರಿಜರೇಟರ್,ಮಿಕ್ಸಿ,ಮತ್ತು ಓವನ್ ಅಂತಹ ಹತ್ತಾರು ಸೌಲಭ್ಯಗಳಿದ್ದರೂ ಮನೆ ಕೆಲಸದಾಕೆಯನ್ನು ಇಟ್ಟುಕೊಳ್ಳುವ ಹಾಗೂ ಆಗುತ್ತಿರುವ ಆರ್ಥಿಕ ಹೊರೆಯಿಂದ ಹೊರಬರಲಾಗದೆ ಕೂಡು ಕುಟುಂಬದಿಂದ ನ್ಯೂಕ್ಲಿಯರ್ ಫ್ಯಾಮಿಲಿ ಆಗಿ ವಿಭಜನೆಗೊಂಡು ಅನಿವಾರ್ಯವಾಗಿ ದುಡಿಯಲು ಹೊರಗೆ ಹೋಗುವ ಸ್ಥಿತಿಯಲ್ಲಿ ಇರುವ ಅನೇಕ ತಾಯಂದಿರು ನಮಗೆ ಈಗ ಕಾಣಲು ಸಿಗುತ್ತಾರೆ.

ಹಾಗೆಂದ ಮಾತ್ರಕ್ಕೆ ಅವರ ಮೌಲ್ಯಗಳು ಕಡಿಮೆ ಆಯಿತು ಅಂದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ ನೋಡಿ ಆಕೆಯಷ್ಟು ಕರುಣಾಮಯಿ,ಮಮತಾಮಯಿ ಮತ್ತು ತ್ಯಾಗ ಜೀವಿ ಈ ಜಗತ್ತಿನಲ್ಲಿ ನಮಗೆ ಮತ್ಯಾರೂ ಸಿಗಲು ಸಾಧ್ಯವೇ ಇಲ್ಲ.

ಕುಡುಕ ಗಂಡನ ಜೊತೆಗೆ ಬಡಿದಾಡುತ್ತಲೇ ಬದುಕಿನ ಜೊತೆಗೆ ಸೆಣಸಾಡುವ,ಗಂಡನ ಮನೆಯೊಳಗಿನ ಕಿರುಕುಳವನ್ನ ತವರು ಮನೆಗೆ ಹೇಳಿಕೊಳ್ಳಲು ಆಗದೆ ಮಕ್ಕಳ ಮುಖ ನೋಡಿ ಬದುಕು ಸವೆಸುವ,ಕೊನೆಗೆ ತನ್ನ ಮಕ್ಕಳ ಬದುಕು ತನ್ನಂತೆ ಆಗದಿರಲಿ ಅನ್ನುವ ಕಾರಣಕ್ಕೆ ಮಕ್ಕಳೊಂದಿಗೆ ಕೆರೆ ಬಾವಿ ಹಾರಿ ಜೀವಬಿಟ್ಟರೂ ಕೆಟ್ಟ ತಾಯಿ ಅನ್ನಿಸಿಕೊಳ್ಳುವ ಮತ್ತು ಮಕ್ಕಳಿಗೆ ಸಂಸ್ಕಾರ ಕಲಿಸುವದಕ್ಕಾಗಿಯೇ ಬರೆ ಎಳೆಯುವ ಭಯ ಒಡ್ಡುವ ಹಾಗೂ ಹೆಚ್ಚೆಂದರೆ ಒಂದೆರಡು ತಪರಾಕಿ ಹಾಕಿ ತಾನೂ ಕಣ್ಣೀರಾಗುವ ಅಸಂಖ್ಯ ತಾಯಂದಿರನ್ನ ಒಮ್ಮೆ ಹತ್ತಿರದಿಂದ ನೋಡಿ ಬಿಡಿ.

ನಮ್ಮ ಭಾವನೆಗಳು ಶುದ್ಧವಾಗದ ಹೊರತು ಬಾಂಧವ್ಯಗಳು ಶುದ್ಧವಾಗಲಾರವು ಅನ್ನುವ ಮಾತೊಂದನ್ನ ನೆನಪಿನಲ್ಲಿ ಇಟ್ಟುಕೊಳ್ಳುತ್ತಲೇ ಜೀವನ ಶೈಲಿ ಮತ್ತು ಆಹಾರ ಶೈಲಿಗಳು ಬದಲಾಗಿರುವ ಇಂದಿನ ದಿನಗಳಲ್ಲಿ ಒತ್ತಡ ರಹಿತ ಜೀವನವೇ ಕನಸಿನ ಮಾತಾಗಿರುವ ದಿನಗಳಲ್ಲಿ ಮನಸ್ಸು ಕಲಕುವ ಘಟನೆಯೊಂದು ಮೊನ್ನೆಯಷ್ಟೇ ವಾಟ್ಸಪ್ಪಿಗೆ ಬಂದು ಬಿದ್ದು ನನ್ನ ಕಣ್ಣುಗಳು ತೇವಗೊಂಡದ್ದು ನೆನಪಾಗಿ ಇದನ್ನೆಲ್ಲ ಬರೆಯಬೇಕಾಯಿತು.

ತನ್ನ ತಾಯಿಯನ್ನ ಅನಾಥ ಆಶ್ರಮಕ್ಕೆ ಸೇರಿಸಿದ್ದ ಮಗನನ್ನ ಅವನ ಮಕ್ಕಳೂ ತಮ್ಮ ತಂದೆಯನ್ನ ಅಲ್ಲಿಯೇ ಸೇರಿಸಿದಾಗ ಎದುರಾದ ಅವನ ಅಮ್ಮ ತನ್ನ ಮಗನಿಗೆ ಬಂದ ಪರಿಸ್ಥಿತಿ ನೆನೆದು ಕಣ್ಣೀರು ಹಾಕುತ್ತಿದ್ದರೆ ಮಗ ತನ್ನ ಪಾಪದ ಪ್ರಾಯಶ್ಚಿತ್ತಕ್ಕೆ ಕಣ್ಣೀರು ಹಾಕುತ್ತಿದ್ದ ದೃಷ್ಯವದು.

ಉಪ್ಪಿನ ಋಣ ತೀರಿಸಬಹುದು ಆದರೆ ಜನ್ಮ ಕೊಟ್ಟ ತಾಯಿಯ ಋಣವನ್ನು ಅದು
ಎಷ್ಟು ಜನ್ಮಗಳು ಹುಟ್ಟಿ ಬಂದರೂ ತೀರಿಸಲಾಗದು ಅನ್ನುವ ಮಾತಿನೊಂದಿಗೆ ಕೆನ್ನೆಗೆ ಒಂದು ಏಟು ಬಿದ್ದಾಗ,ಆಟವಾಡುತ್ತ ಓಡುವಾಗ ಮಗುವೊಂದು ಎಡವಿ ಬಿದ್ದಾಗ,ತರಕಾರಿ ಹೆಚ್ಚುವಾಗ ಕೈಗೆ ಇಳಿಗೆ ಮಣಿಯ ಮೊನಚು ಅಥವಾ ಅಂಗಿಯ ಗುಂಡಿ ಹೆಣೆಯುವಾಗ ಕೈಗೆ ಸೂಜಿಯೊಂದು ತಾಗಿದಾಗ,ತಣ್ಣೀರು ಬೆರೆಸದೆ ಸ್ವಲ್ಪ ಹೆಚ್ಚು ಬಿಸಿಯಾದ ನೀರನ್ನು ಮೈ ಮೇಲೆ ಸುರಿದುಕೊಂಡಾಗ,ಯವ್ವಾ ಅಥವಾ ಅವ್ವಾ ಅನ್ನುವ ಪದ ಈಗಿನ ಮಕ್ಕಳಲ್ಲಿ ಮಮ್ಮಿ ಅನ್ನುವ ಶಬ್ದವಾಗಿ ಹೊರಹೊಮ್ಮುತ್ತ ಇರುವಾಗ ನಮ್ಮ ಹೆತ್ತ ಜೀವಗಳು ನಮಗೆ ಹೊರೆ ಎಂದು ಭಾವಿಸದೆ ವಯಸ್ಸು ಮಾಗುತ್ತ ಹೋದಂತೆಲ್ಲ ಮಕ್ಕಳಾಗುವ ಹಂತ ತಲುಪಿದಾಗ ಅವರನ್ನು ಪೋಷಿಸುವ ತಾಯಿಯ ಗುಣ ಇಂದಿನ ಮಕ್ಕಳಲ್ಲಿ ಬರಲಿ ಅನ್ನುವ ಆಶಯದೊಂದಿಗೆ…..

ಈಗಲೂ ಈ ಕ್ಷಣಕ್ಕೂ ಬಂಜೆ ತೊಟ್ಟಿಲ ತೂಗ ಬಯಸುವ ಕನಸು ಹೊತ್ತ ಹೆಣ್ಣುಮಕ್ಕಳಿಂದ ಹಿಡಿದು ಅಮ್ಮ ತೀರಿದ ಬಳಿಕ ಬೆನ್ನ ಹಿಂದೆ ಹುಟ್ಟಿದ ತಮ್ಮ ಅಥವಾ ತಂಗಿಯರನ್ನ ಅಷ್ಟೇ ಅಕ್ಕರೆಯಿಂದ ಸಾಕಿ ಬೆಳೆಸಿದ ಅಕ್ಕಂದಿರ ತನಕ ಮತ್ತು ಈಗಷ್ಟೇ ಹೆರಿಗೆಯಾಗಿ ಹಸಿ ಬಾಣಂತಿಯಾಗಿ ಮಗುವಿನ ಮುಖ ನೋಡಿ ನೋವು ಮರೆಯುತ್ತಿರುವ ಹೆರಿಗೆ ವಾರ್ಡಿನಲ್ಲಿ ಮಲಗಿದ ಹೆಣ್ಣುಮಕ್ಕಳಿಂದ ಹಿಡಿದು ಯಾವುದೋ ವೃದ್ದಾಶ್ರಮದಲ್ಲಿ ಮಕ್ಕಳಿದ್ದರೂ ಅನಾಥರಂತೆ ಉಳಿದು ತಮ್ಮ ಓರಗೆಯವರ ಜೊತೆ ಬೆರೆತು ನಗುವ ಪ್ರಯತ್ನ ಮಾಡುತ್ತ ತಾವು ಹೆತ್ತ ಮಕ್ಕಳಿಗೆ ಕಿಂಚಿತ್ತೂ ನೋವಾಗದಂತೆ ದೇವರಲ್ಲಿ ಪ್ರಾರ್ಥಿಸುವ ಹಾಗೂ ತಮ್ಮ ಆಯುಷ್ಯವೇ ತೀರಿ ಹೋಗಿ ಉಸಿರು ಚೆಲ್ಲಿ ದೇವರಾದ ಅಮ್ಮಂದಿರ ತನಕ,ಕೆಲವರ ಜೊತೆಗೆ ಇರುವ ಅಥವಾ ಇಲ್ಲವಾದ ದೇವರ ಮತ್ತೊಂದು ಪ್ರತಿರೂಪವಾದ ಎಲ್ಲರಿಗೂ ವಿಶ್ವ ತಾಯಂದಿರ ದಿನದ ಶುಭಾಷಯಗಳು.

ದೀಪಕ ಶಿಂಧೇ
9482766018

RELATED ARTICLES

Most Popular

error: Content is protected !!
Join WhatsApp Group