ಪೂಜ್ಯ ಗುರು ಪುಟ್ಟರಾಜರ ಅಭಿಮಾನಿ ಭಕ್ತರ ಮಹಾ ಬಳಗವಾದ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾಗಿ, ಹಾವೇರಿ ಜಿಲ್ಲೆಯ ಕದರ ಮಂಡಲಗಿಯ ಯುವ ಸಂಘಟಕ, ಪ್ರದೀಪ ನಂದಿಕೇಶ್ವರಮಠ ಇವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ತಿಳಿಸಿದ್ದಾರೆ.
ನಂದಿಕೇಶ್ವರಮಠ ಪೂಜ್ಯರ ಮೇಲಿನ ಭಕ್ತಿ, ಸಮಾಜ ಸೇವೆ ಆಸಕ್ತಿಯನ್ನು ಗುರುತಿಸಿ, ಸೇವಾ ಸಮಿತಿಯ ಸಂಸ್ಥಾಪಕರಾದ ಚನ್ನವೀರ ಸ್ವಾಮಿಗಳ ಹಿರೇಮಠ (ಕಡಣಿ) ಅವರು ಸರ್ವ ಸದಸ್ಯರ ಸದಭಿಪ್ರಾಯ ಪಡೆದು ಸರ್ವ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ, ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು, ನಂದಿಕೇಶ್ವರ ಅವರ ಅಧಿಕಾರದ ಅವಧಿಯು ೩ ವರ್ಷ ಅಥವಾ ಕೇಂದ್ರ ಸಮಿತಿಯ ಅಧ್ಯಕ್ಷರು ಒಪ್ಪುವವರೆಗೆ ಇರುತ್ತದೆ ಮತ್ತು ಈ ಆದೇಶವು ಇಂದಿನಿಂದ ಜಾರಿಯಲ್ಲಿ ಇರುತ್ತದೆ. ರಾಜ್ಯ ಕಾರ್ಯಕಾರಿಣಿ ಮಂಡಳಿ ರಚಿಸಿಕೊಂಡು ವರದಿಮಾಡಿಕೊಳ್ಳಲು ಮತ್ತು ರಾಜ್ಯದಾದ್ಯಂತ ಇರುವ ಜಿಲ್ಲಾ ಘಟಕಗಳನ್ನು ಪುನರ್ ರಚಿಸಿಕೊಳ್ಳಲು, ಸೇವಾ ಸಮಿತಿಯ ಘಟಕಗಳು ಇಲ್ಲದ ಜಿಲ್ಲೆಗಳಲ್ಲಿ ಘಟಕಗಳನ್ನು ಅಸ್ಥಿತ್ವಕ್ಕೆ ತರುವುದಕ್ಕೆ ಮುಂದಾಗಲು ಸೂಚಿಸಿದ್ದಾರಲ್ಲದೇ ಡಾ. ಪಂ. ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಪ್ರಚಾರ ಮತ್ತು ಪ್ರಸಾರದೊಂದಿಗೆ ಭಕ್ತಿ ಪಂಥದ ಕವಿ, ಗಾಯಕರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಗುರು ಸೇವೆ ಮಾಡುವ ಭಾಗ್ಯ ತಮ್ಮ ಪೂರ್ವ ಜನ್ಮದ ಸುಕೃತವೆಂದು ಭಾವಿಸಿ ಪ್ರಾಂಜಲ ಮನಸ್ಸಿನಿಂದ ಗುರುವಿಗೆ ಸೇವೆ ಸಲ್ಲಿಬೇಕೆಂದು ವಿನಂತಿಸಿಕೊಂಡಿದ್ದಾರೆ.