ಇದೇ ಡಿಶಂಬರ್ ೫ ರಿಂದ ಬೆಳಗಾವಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಹೇಶ ಕಾಳೆಯವರ ಗಾಯನ ಸಮಾರಂಭ ಬೆಳಗಾವಿಯಲ್ಲಿ ಆಯೋಜಿತವಾಗಿದ್ದು ಕಾರ್ಯಕ್ರಮ ಆಯೋಜಿಸಿರುವ ಏಕದಂತ ಥಿಯೇಟರ್ಸ್ ನವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರದಲ್ಲಿ ಕಾರ್ಯಕ್ರಮ ದ ಸ್ಥಳ ಬರೆಯುವಾಗ ಬೆಳಗಾವ, ಮಹಾರಾಷ್ಟ್ರ ಎಂದು ಬರೆದಿರುವುದು ಅಕ್ಷಮ್ಯ.
ಇಂಥ ಅಪಸವ್ಯಗಳೇ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದವನ್ನು ಜೀವಂತವಾಗಿಡುತ್ತವೆ. ಒಂದೊಮ್ಮೆ ಮಹಾರಾಷ್ಟ್ರ ದವರೇ ನೇಮಕ ಮಾಡಿದ್ದ ಮಹಾಜನ ಆಯೋಗವು ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ವರದಿ ನೀಡಿದ್ದರೂ ಈ ಝಾಲಾಚ ಪಾಹಿಜೆಗಳು ಇನ್ನೂ ಅಂದರೆ ಐವತ್ತು ವರ್ಷಗಳ ನಂತರವೂ ಬೆಳಗಾವಿ ತಮಗೇ ಬೇಕು ಎಂದು ಹೋರಾಟ ಮಾಡುತ್ತಿವೆ.
ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನ ಆಚರಣೆ ಮಾಡುವುದು, ಕನ್ನಡಿಗರನ್ನು ಕೆರಳಿಸುವ ಮಾತುಗಳನ್ನು ಆಡುವುದು ಇವೇ ಮುಂತಾದ ಮೂರ್ಖ ಕಾರ್ಯಗಳಿಂದ ಗಡಿ ವಿವಾದವನ್ನು ಜೀವಂತವಾಗಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಲೇ ಇರುತ್ತವೆ ಅಂಥ ಇನ್ನೊಂದು ಪ್ರಯತ್ನವೇ ಈಗಿನ ಸಂಗೀತ ಕಾರ್ಯಕ್ರಮ ದ ಬಗ್ಗೆ ಏಕದಂತ ಥಿಯೇಟರ್ಸ್ ಟ್ವೀಟ್ ಮಾಡಿದ್ದು.
ಬೆಳಗಾವಿಯ ಕೆಎಲ್ ಈ ಜೀರಗೆ ಸಂಭಾಂಗಣದಲ್ಲಿ ದಿ. ೫.೧೨.೨೦೨೫ ರಂದು ನಡೆಯಲಿರುವ ಮಹೇಶ ಕಾಳೆಯವರ ಸಂಗೀತ ಸಭೆಯ ಆಮಂತ್ರಣದಲ್ಲಿ ಬೆಳಗಾವಿ ಮಹಾರಾಷ್ಟ್ರ ಎಂದು ನಮೂದಿಸಲಾಗಿದೆ. ಇದನ್ನು ತಕ್ಷಣವೇ ಕನ್ನಡ ಹೋರಾಟಗಾರ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ಖಂಡಿಸಿದ್ದಾರೆ. ಆದರೆ ಇನ್ನೂ ಬೆಳಗಾವಿಯ ಕನ್ನಡ ಸಂಘಟನೆಗಳು, ಕನ್ನಡ ಹೋರಾಟಗಾರರು ಎಚ್ಚತ್ತುಗೊಳ್ಳದೇ ಇರುವುದು ವಿಷಾದನೀಯ.
ಏಕದಂತ ಥಿಯೇಟರ್ಸ್ ಸಂಸ್ಥೆಯು ತನ್ನ ಜಾಹೀರಾತಿನ ಬಗ್ಗೆ ಕ್ಷಮೆ ಕೇಳಿ ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದಿದೆಯಾದರೂ ಸುಮಾರು ಐವತ್ತು ವರ್ಷಕ್ಕಿಂತಲೂ ಹೆಚ್ಚಿನ ಒಂದು ಗಡಿ ವಿವಾದದ ಬಗ್ಗೆ ಸಂಸ್ಥೆಗೆ ಅರಿವಿಲ್ಲ ಎಂದರೆ ನಂಬಲಾಗದು ಇದು ಬೇಕಂತಲೇ ಕನ್ನಡಿಗರನ್ನು ಕೆರಳಿಸುವ ಉದ್ದೇಶ ಹಾಗೂ ಪಿತೂರಿ ಎಂತಲೇ ಕಾಣಿಸುತ್ತದೆ. ನ್ಯಾಯಾಲಯದಲ್ಲಿ ಇರುವ ಗಡಿ ವಿವಾದದ ಬಗ್ಗೆ ತಿಳಿದೋ ತಿಳಿಯದೆಯೋ ತಾನೇ ತೀರ್ಪು ಕೊಟ್ಟಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ಈ ಸಂಸ್ಥೆಯನ್ನು ಕನ್ನಡಿಗರು ಕ್ಷಮಿಸಬಾರದು. ಕನ್ನಡ ಸಂಘಟನೆಗಳು ಸಂಸ್ಥೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿ ಅದು ಇನ್ನೊಮ್ಮೆ ಇಂಥ ಅಪರಾಧ ಮಾಡದಂತೆ ಬುದ್ಧಿ ಕಲಿಸಬೇಕಾಗಿದೆ. ಅಷ್ಟಕ್ಕೂ ಕನ್ನಡಪರ ಸಂಘಟನೆಗಳು ಇನ್ನೂ ಯಾಕೆ ಎಚ್ಚತ್ತಿಲ್ಲ ?
ಉಮೇಶ ಮ. ಬೆಳಕೂಡ, ಮೂಡಲಗಿ

