ಒಂದು ಕಾಲದ ಸಂಸ್ಕೃತಿಯೊಂದಿಗೆ ಸಂಬಂಧ ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮ. ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.
ಹಾಸನದ ಒಡನಾಡಿ ಚಿತ್ರಕಲಾ ಬಳಗ ಹಾಸನಾಂಬ ಕಲಾಕ್ಷೇತ್ರದ ಹೊರಂಗಣದಲ್ಲಿ ಭಾನುವಾರ ಸೋಮವಾರ ಏರ್ಪಡಿಸಿದ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ, ವಸಂತಕುಮಾರ ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸನಲ್ಲಿ ರಚಿಸಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಶ್ರೀಮತಿ ಭಾನು ಮುಷ್ತಾಕ್, ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು, ಅಂತರಾಷ್ಟ್ರೀಯ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್, ಇಸ್ರೋ ಮಾಜಿ ಅಧ್ಯಕ್ಷರು ಕಿರಣ್ಕುಮಾರ ಇವರೆಲ್ಲರೂ ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಮಹನೀಯರು. ಕಲಾವಿದರು ಪ್ರಕೃತಿಯ ನಡುವೆ ಕುಳಿತು ಬರೆದ ಪ್ರಕೃತಿ ಚಿತ್ರಗಳು ಕಲಾತ್ಮಕವಾಗಿವೆ ಎಂದರು.
ವಿಶ್ವ ಪರಿಸರ ದಿನ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಖ್ಯಾತ ಕಲಾವಿದರು ಕೆ.ಟಿ.ಶಿವಪ್ರಸಾದ ಮಾತನಾಡಿ, ಮನುಷ್ಯ ಚಿತ್ರ ಬಿಡಿಸಬೇಕಾದರೆ ಎಷ್ಟು ಕಷ್ಟಪಟ್ಟಿದ್ದಾರೆ? ಚಿತ್ರ ಹೇಗೆ ಶುರುವಾಯ್ತು? ಚಿತ್ರ ಹೇಗೆ ಮಾಡಿದ್ರಿ? ಬಣ್ಣ ಹೇಗೆ ಹಾಕಿದ್ರಿ? ಎಂಬುದನ್ನೆಲ್ಲಾ ಚಿತ್ರಕಾರರನ್ನು ಮಕ್ಕಳು ಕೇಳಿ ತಿಳಿದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಆಲೂರು ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರು ಶ್ರೀಮತಿ ಭಾಗ್ಯ ಕಲೆ ದೇವರು ಕೊಟ್ಟ ವರ. ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು. ಕಾದಂಬರಿಗಾರ್ತಿ ಶ್ರೀಮತಿ ಸುವರ್ಣ ಕೆ.ಟಿ.ಶಿವಪ್ರಸಾದ್ ಮಕ್ಕಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ ಎಂದರು.
ಗೋಡೆ ಬರಹಗಾರ ಕಲಾವಿದ ಯಾಕೂಬ್, ಕಲಾವಿದ ಚಂದ್ರಕಾಂತ ನಾಯರ್ ಇದ್ದರು. ಗಾಯಕಿ ಶ್ರೀಮತಿ ಸುನಂದ ಕೃಷ್ಣ ಭಾವಗೀತೆ ಜನಪದ ಗೀತೆಗಳಿಂದ ರಂಜಿಸಿದರು. ಕಲಾವಿದ ವಸಂತಕುಮಾರ ಕಾರ್ಯಕ್ರಮ ನಿರೂಪಿಸಿದರು.