ಡಾ.ವಿಷ್ಣುವರ್ಧನ್‍ರವರ ಆದರ್ಶಗಳನ್ನು ಪಾಲಿಸಲು ಅಭಿಮಾನಿಗಳಿಗೆ ಕಲಾವಿದ ಅನಿರುದ್ಧ ಜಟ್ಕರ್ ಕರೆ

0
312

ಮೈಸೂರು: ನಗರದ ಡಾ.ವಿಷ್ಣುವರ್ಧನ್ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಖ್ಯಾತ ಕಲಾವಿದ ಅನಿರುದ್ಧ ಜಟ್ಕರ್ ಉದ್ಘಾಟಿಸಿದರು.

ನಂತರ ಅವರು ಮಾತನಾಡುತ್ತಾ, ವಿಷ್ಣುವರ್ಧನ್ ಅವರು ಕಲಾವಿದರಾಗಿ ಸಮಾಜ ಸೇವೆ ಮಾಡುತ್ತಿದ್ದರು. ಅವರು ಮಾಡಿದ ಉಪಕಾರಗಳನ್ನು ಯಾರಿಗೂ ಹೇಳುತ್ತಿರಲಿಲ್ಲ. ಬಡವರಿಗೆ, ಸಂಘ ಸಂಸ್ಥೆಗಳಿಗೆ ನೆರವಾಗಿದ್ದರು. ಅವರ ಆದರ್ಶಗಳನ್ನು ಅಭಿಮಾನಿಗಳು ಮತ್ತು ಸಾರ್ವಜನಿಕರು ಮಾದರಿಯಾಗಿಟ್ಟುಕೊಂಡು ಎಲ್ಲರಿಗೂ ನೆರವಾಗಬೇಕೆಂದು ಮನವಿ ಮಾಡಿದರು. 

ರೋಟರಿ ಸಂಸ್ಥೆಯವರು ಮಾಡುತ್ತಿರುವ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಜನ ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಉಚಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಸಂಗ್ರಹವಾದ ರಕ್ತವನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಈ ಕಾರ್ಯ ಮಾಡುತ್ತಿರುವ ರೋಟರಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಪಾಲಕರಾದ ರೊ.ವಿ.ಶ್ರೀನಿವಾಸ ಮೂರ್ತಿ, ಜಿಲ್ಲಾ ಪಾಲಕರಾದ ರೊ.ಹೆಚ್.ಆರ್.ಕೇಶವ್, ಮಾಜಿ ಜಿಲ್ಲಾ ಪಾಲಕರಾದ ರೊ.ಬಿ.ಎಲ್.ನಾಗೇಂದ್ರಪ್ರಸಾದ್, ರೋಟರಿ ಪದಾಧಿಕಾರಿಗಳಾದ ರೊ.ಮುರುಳಿ ಮತ್ತು ರೊ.ಸೆಲ್ವಕುಮಾರ್ ಉಪಸ್ಥಿತರಿದ್ದರು.      

ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಹಕರಿಸುತ್ತಿರುವ ಮೈಸೂರಿನ ಸುಯೋಗ್ ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ, ರೆಡ್‍ಕ್ರಾಸ್ ಸಂಸ್ಥೆ, ನಾರಾಯಣ ಹೃದಯಾಲಯದ ಮುಖ್ಯಸ್ಥರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಡಾ.ವಿಷ್ಣುವರ್ಧನ್ ಸ್ಮಾರಕ ಭವನದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಅಭಿಮಾನಿಗಳು ಭೋಜನ ಏರ್ಪಡಿಸಿದ್ದರು.