“ಬಾಳೆ ಬೆಳೆಗೆ ಎಲೆ ಚುಕ್ಕೆ ರೋಗದ ಬಾಧೆ”- ಅರಭಾವಿ ವಿಭಾಗದಿಂದ ರೈತರಿಗೆ ಸಲಹೆ

Must Read

ಮೂಡಲಗಿ– ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾಂವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ ವಿಭಾಗದ ವಿಜ್ಞಾನಿಗಳಾದ ಡಾ. ಕಾಂತರಾಜು, ವಿ., ಡಾ.ಸುಹಾಸಿನಿ ಜಾಲವಾದಿ ಮತ್ತು ನಟರಾಜ ಕೆ.ಎಚ್. ಇವರು ಬೆಳಗಾವಿ ಜಿಲ್ಲೆಯಲ್ಲಿ ಕಂಡು ಬಂದಿರುವ ಸಿಗಾಟೋಕ (ಯುಮೋಸಿಯೆ) ಎಲೆ ಚುಕ್ಕೆ ರೋಗಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ರೋಗದ ಲಕ್ಷಣಗಳು: ಈ ರೋಗವು ಬಾಳೆಯ ತಳಿಗಳಾದ ಗ್ಯ್ರಾಂಡ್ ನೈನ್ (ಜಿ-9) ಮತ್ತು ರಾಜಾಪುರಿ(ಜವಾರಿ) ತಳಿಗಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಮೊದಲಿಗೆ ಗಿಡದ ಹಳೆಯ ಎಲೆಗಳ ಮೇಲೆ ಹಳದಿ ಚುಕ್ಕೆಗಳು ಕಾಣಿಸಿಕೊಂಡು ನಂತರ ಕೆಂಪನೆಯ ಉದ್ದನೆಯ ಗೆರೆಗಳಾಗಿ ಪರಿವರ್ತನೆಗೊಂಡು ಕಂದು ಬಣ್ಣಕ್ಕೆ ತಿರುಗುತ್ತವೆ. ನಂತರ ಕಪ್ಪನೆಯ ಚುಕ್ಕೆಗಳಾಗಿ ಮಾರ್ಪಟ್ಟು, ಈ ಚುಕ್ಕೆಗಳು ವಿಶಾಲವಾಗಿ ಉದ್ದನೆಯಾದ ಅಥವಾ ಮೊಟ್ಟೆಯಾಕಾರದ ಚುಕ್ಕೆಗಳಾಗುತ್ತವೆ. ಚುಕ್ಕೆಯ ಒಳಗಿನ ಭಾಗವು ಬೂದು ಬಣ್ಣದಿಂದ ಕೂಡಿರುತ್ತದೆ ಮತ್ತು ಚುಕ್ಕೆಯ ಅಂಚು ಕಂದು ಅಥವಾ ಕಪ್ಪು ಬಣ್ಣದಿಂದ ಕೂಡಿರುತ್ತದೆ.

ನಂತರ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗಲು ಪ್ರಾರಂಭವಾಗುತ್ತವೆ. ಇದರಿಂದ ಗೊನೆಗಳು ಸರಿಯಾಗಿ ಬೆಳೆವಣಿಗೆಯಾಗುವುದಿಲ್ಲ ಮತ್ತು ಗೊನೆಯ ಗಾತ್ರ ಕಡಿಮೆಯಾಗುತ್ತದೆ.

ಎಲ್ಲೆಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಕೂಳೆ ಬೆಳೆಗಳನ್ನು ತೆಗೆದುಕೊಳ್ಳುವುದರಿಂದ, ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ಮಳೆಯಾಗುತ್ತಿರುವುದರಿಂದ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬಂದಿದೆ.

ಈ ರೋಗವು ಸಾಮಾನ್ಯವಾಗಿ ಜುಲೈ ತಿಂಗಳಿಂದ ಫೆಬ್ರವರಿ ತಿಂಗಳುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಳೆ ಮತ್ತು ತಂಪು ವಾತಾವರಣ ಇದ್ದಲ್ಲಿ ಬೇರೆ ತಿಂಗಳುಗಳಲ್ಲೂ ರೋಗ ಕಾಣಿಸಬಹುದು.ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾದಾಗ, ತಂಪು ವಾತಾವರಣ ಮತ್ತು ಸತತವಾಗಿ ತುಂತುರು ಮಳೆ ಬರುವುದು ರೋಗ ಹೆಚ್ಚಾಗುವುದಕ್ಕೆ ಸೂಕ್ತ ವಾತಾವರಣ. ಹೆಚ್ಚು ಸಾಂದ್ರತೆಯಿಂದ ಗಿಡಗಳನ್ನು ನಾಟಿ ಮಾಡುವುದು, ರೋಗ ಪೀಡಿತ ಎಲೆಗಳನ್ನು ಗಿಡದಿಂದ ತೆಗೆಯದಿರುವುದು, ರೋಗ ಪೀಡಿತ ಎಲೆಗಳನ್ನು ತೆಗೆದು ಬಾಳೆ ಸಾಲುಗಳ ಮಧ್ಯೆ ಹಾಕುವುದು, ಕಾಲುವೆ ಮುಖಾಂತರ ಗಿಡಗಳಿಗೆ ಹೆಚ್ಚು ನೀರು ಹಾಯಿಸುವುದು, ಹೆಚ್ಚಾಗಿ ಮಳೆ / ಪ್ರವಾಹ ಉಂಟಾದಾಗ ತೋಟದಿಂದ ನೀರು ಬಸಿದು ಹೋಗದಿರುವದು ಹಾಗೂ ಸರಿಯಾದ ಸಮಯಕ್ಕೆ ಸಿಂಪರಣೆ ಮಾಡದಿರುವುದು.

ನಿರ್ವಹಣಾ ಕ್ರಮಗಳು: ನೀರು ಚೆನ್ನಾಗಿ ಬಸಿದು ಹೋಗುವಂತ ಮಣ್ಣಿನಲ್ಲಿ ಬಾಳೆ ಬೆಳೆಯುವುದು ಸೂಕ್ತ. ಶಿಫಾರಿಸಿದ ಅಂತರದಲ್ಲಿ ನಾಟಿ ಮಾಡಬೇಕು. ರೋಗಪೀಡಿತ ಒಣಗಿದ ಎಲೆಗಳನ್ನು ಕೊಯ್ದು ಬಾಳೆ ಸಾಲುಗಳ ಮಧ್ಯೆ ಯಾವುದೇ ಕಾರಣಕ್ಕೂ ಹಾಕಬಾರದು ಮತ್ತು ಗಿಡಗಳಿಗೆ ಸುತ್ತಬಾರದು. ರೋಗ ಕಂಡು ಬಂದಾಗ, ಪ್ರೋಪಿಕೋನಜೋಲ್ @ 0.5ಮಿ.ಲೀ. ಮತ್ತು ಪೆಟ್ರೋಲಿಯಂ ಆಧಾರಿತ ಮಿನರಲ್ ಎಣ್ಣೆ @ 10 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ 20-25 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪರಣೆ ಮಾಡಬೇಕು (ರೋಗದ ತೀವ್ರತೆಗೆ ಅನುಗುಣವಾಗಿ) ಉಪಯೋಗಿಸಲು ಡಾ ಕಾಂತರಾಜು ವಿ. ತಿಳಿಸಿದ್ದಾರೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group