Homeಸುದ್ದಿಗಳುಬೀದರ ಡಿಸಿಸಿ ಬ್ಯಾಂಕ್‌ ಚುನಾವಣೆ; ಸಹಕಾರ ವರ್ಸಸ್ ಸಾಹುಕಾರ ಚುನಾವಣೆ

ಬೀದರ ಡಿಸಿಸಿ ಬ್ಯಾಂಕ್‌ ಚುನಾವಣೆ; ಸಹಕಾರ ವರ್ಸಸ್ ಸಾಹುಕಾರ ಚುನಾವಣೆ

ಬೀದರ: ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯು ಸಹಕಾರ ವರ್ಸಸ್ ಸಾಹುಕಾರ ಚುನಾವಣೆಯಾಗಿ ಬದಲಾಗಿದ್ದು ಖಂಡ್ರೆಯಂಥ ಸಾಹುಕಾರರ ಕೈಗೆ ಬ್ಯಾಂಕು ಸಿಕ್ಕರೆ ನಾವೆಲ್ಲ ತೊಂದರೆಗೆ ಸಿಲುಕಿಹಾಕಿಕೊಳ್ಳುವ ಪ್ರಸಂಗ ಬರುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿರುದ್ದ ಕಿಡಿ ಕಾರುತ್ತ, ಕಳೆದ ೩೯ ವರ್ಷಗಳಿಂದ ಬ್ಯಾಂಕಿಗೆ ಚುನಾವಣೆಯನ್ನೇ ನಡೆಸದೆ ಅವಿರೋಧವಾಗಿ ಸೌಹಾರ್ದಯುತವಾಗಿ ಆಡಳಿತ ಮಂಡಳಿಯ ಆಯ್ಕೆ ಮಾಡುತ್ತ ಬರಲಾಗಿದೆ. ಈಗ ಸಾಹುಕಾರ ಮನಃಸ್ಥಿತಿಯಂಥವರ ಕೈಗೆ ಡಿಸಿಸಿ ಬ್ಯಾಂಕ್ ಹೋದರೆ, ಸಹಕಾರ ಕ್ಷೇತ್ರ ಬಂಡವಾಳಶಾಹಿಯಾಗಿ ಬದಲಾಗುತ್ತದೆ ಎಂದರು.

ಡೆಲಿಗೇಟ್ ಸದಸ್ಯರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ. ಈಗಾಗಲೇ ಅನೇಕ ಮತದಾರರು ತೀರ್ಥಯಾತ್ರೆಗೆ ಹೋಗಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ. ಡೆಲಿಗೇಟ್ ಮತದಾರರು ಹಣದ ಆಮಿಷಕ್ಕೆ ಒಳಗಾಗದೇ ರೈತರ ಹಿತ ಕಾಪಾಡಬೇಕು ಎಂದರು.

ಡಿಸಿಸಿ ಬ್ಯಾಂಕಿನಲ್ಲಿ 1984ರಲ್ಲಿ ₹1.61 ಕೋಟಿ ಠೇವಣಿ ಇತ್ತು. ಆರು ಕೋಟಿ ರೈತರಿಗೆ ಸಾಲ ನೀಡಲಾಗಿತ್ತು. 2018ರ ವರೆಗೆ ₹86 ಕೋಟಿ ಠೇವಣಿ ಹೆಚ್ಚಿಸಿ, ₹1,660 ಕೋಟಿ ಸಾಲವನ್ನು ನೀಡಿ, ₹2,929 ಕೋಟಿ ವಹಿವಾಟ ಮಾಡಲಾಗಿತ್ತು. ಉಮಾಕಾಂತ ನಾಗಮಾರಪಳ್ಳಿ  ಅಧ್ಯಕ್ಷರಾದ ಬಳಿಕ ₹1,600 ಕೋಟಿಯಿಂದ ₹3,268 ಕೋಟಿ ಸಾಲವನ್ನು ರೈತರಿಗೆ ನೀಡಿದ್ದಾರೆ.  ₹86 ಕೋಟಿಯಿಂದ ₹159 ಕೋಟಿ ಷೇರು ಹೆಚ್ಚಿಸಿದ್ದಾರೆ‌. ‘₹2,500 ಕೋಟಿ ಠೇವಣಿ ಇದೆ. ₹5 ಸಾವಿರ ಕೋಟಿ ಬ್ಯಾಂಕ್ ವಹಿವಾಟು ನಡೆಸಿದೆ. ಬ್ಯಾಂಕ್‌ನಿಂದ ರೈತರಿಗೆ ₹1,800 ಕೋಟಿ ಲಾಭ ಆಗಿದೆ ಎಂದು ಉಮಾಕಾಂತ ನಾಗಮಾರಪಳ್ಳಿ ಕಾರ್ಯಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ ಹೊಗಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group