ಗೋಕಾಕ: ಬುಧವಾರ ಸಂಜೆ ಕುಂಭಹೊತ್ತ ಮತ್ತು ಆರತಿಗಳನ್ನು ಹಿಡಿದ ಸುಮಂಗಲಿಯರ ಸಾಲು, ವಿವಿಧ ವಾದ್ಯ ವೃಂದಗಳ ನಿನಾದ, ಭಕ್ತಿಯ ಜಯಘೋಷಗಳೊಂದಿಗೆ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಗೆ ಹೆಸರಾಗಿರುವ ಸಾವಳಗಿಯ ಶಿವಲಿಂಗೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರ ಪಲ್ಲಕ್ಕಿ ಮೆರವಣಿಗೆಯೊಂದಿಗೆ ದಸರಾ ಉತ್ಸವದ ಸೀಮೋಲ್ಲಂಘನ ಕಾರ್ಯಕ್ರಮವು ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಸಂಜೆ ಶ್ರೀ ಪೀಠದಿಂದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಿಂದೂ, ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಹಸಿರು ರಾಜಪೋಷಾಕುಗಳೊಂದಿಗೆ ಸಕಲ ರಾಜಮರ್ಯಾದೆ, ಬಿರುದಾವಳಿಗಳಿಂದ ಅಶ್ವಾರೂಢರಾಗಿ ಬನ್ನಿಮಂಟಪಕ್ಕೆ ಆಗಮಿಸಿದರು. ಸಂಪ್ರದಾಯದಂತೆ ಬನ್ನಿಮಂಟಪಕ್ಕೆ ಪೂಜೆಗಳನ್ನು ನೆರವೇರಿಸಿ ಆಯಧಗಳಿಂದ ಬನ್ನಿಯನ್ನು ಕತ್ತರಿಸಿರುವ ಮೂಲಕ ಸೀಮೊಲ್ಲಂಘನವನ್ನು ನೆರವೇರಿಸಿದರು.
ಕಬ್ಬಿನ ಪೈರನ್ನು ಹಿಡಿದ ರೈತರ ಸಮೂಹವು ಮೆರವಣಿಗೆಯಲ್ಲಿ ವಿಶೇಷ ಗಮನಸೆಳೆಯಿತು.
ಖಾನಾಪುರ, ನಂದಗಾಂವ ಮತ್ತು ಮುತ್ನಾಳ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀಪೀಠಕ್ಕೆ ಆಗಮಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯ: ‘ಜಗತ್ತಿಗೆ ಬೇಕಾಗಿರುವುದು ಸಾಮರಸ್ಯ, ಶಾಂತಿಯ ಮಂತ್ರ’
ಗೋಕಾಕ: ‘ಜಾತಿ, ಧರ್ಮ, ಮತಗಳ ಕಲಹದಲ್ಲಿ ಜಗತ್ತು ವಿನಾಶದತ್ತ ಸಾಗುತ್ತಲಿದೆ, ಇಂದು ಜಗತ್ತಿಗೆ ಬೇಕಾಗಿರುವುದು ಸಾಮರಸ್ಯ, ಶಾಂತಿಯ ಮಂತ್ರ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಸಾವಳಗಿಯ ಶ್ರೀ ಶಿವಲಿಂಗೇಶ್ವರ ಪೀಠದಲ್ಲಿ ಬುಧವಾರ ದಸರಾ-2022 ಉತ್ಸವದ ಸೀಮೋಲ್ಲಂಘನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ನಿರಪೇಕ್ಷ ಸಮಾಜ ಕಟ್ಟಬೇಕಾಗಿದೆ ಎಂದರು.
ಸಾವಳಗಿಯ ಶಿವಲಿಂಗೇಶ್ವರರು 17ನೇ ಶತಮಾನದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾಧಿಸುವ ಮೂಲಕ ಜಗತ್ತಿಗೆ ಭಾವೈಕ್ಯತೆಯ ಸಂದೇಶ ನೀಡಿರುವರು. ಅಂಥ ಸಾಮರಸ್ಯವು ಇಂದಿಗೂ ಪೀಠದಲ್ಲಿ ನಡೆದುಕೊಂಡು ಬಂದಿರುವುದು ಪೀಠದ ವಿಶೇಷವಾಗಿದೆ ಎಂದರು.
ತಂತ್ರಜ್ಞಾನ ಬೆಳವಣಿಗೆಯಲ್ಲಿ ಸಾಹಿತ್ಯವು ಕಲಬೆರಕೆಯಾಗುತ್ತಲಿದೆ. ಶಾಶ್ವತವಾಗಿ ಉಳಿಯುವ ಗುಣಧರ್ಮವನ್ನು ಹೊಂದಿರುವ ಸಾಹಿತ್ಯವನ್ನು ಇತರೆ ಮಾಧ್ಯಮಗಳೊಂದಿಗೆ ಕಲಬೆರಕೆ ಮಾಡಬಾರದು. ಸಾಹಿತ್ಯದ ಪಾವಿತ್ರ್ಯವನ್ನು ಉಳಿಸಿಕೊಂಡು ಹೋಗುವುದು ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಮಾತನಾಡಿ ‘ಜಾತಿ, ಮತ, ಪಂಥ ಎನ್ನದೆ ಸದ್ಭಾವನೆಯಲ್ಲಿ ಶಾಂತಿ, ನೆಮ್ಮದಿ ಇದ್ದು, ಅಲ್ಲಿ ಪರಮಾತ್ಮನ ಸಾಕ್ಷಾತಾರದ ಕೃಪೆಯಾಗುವುದು’ ಎಂದರು.
ಸತ್ಯ, ಶುದ್ಧತೆ, ಪ್ರಾಮಾಣಿಕತೆ ಮತ್ತು ನಿಜ ಭಕ್ತಿಯು ಇಂದಿನ ಅವಶ್ಯಕತೆ ಇದ್ದು, ಸನ್ಮಾರ್ಗದಲ್ಲಿ ನಡೆಯುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸರಜೂ ಕಾಟಕರ ಅತಿಥಿಯಾಗಿ ಭಾಗವಹಿಸಿದ್ದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಧಕರು, ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.