ಮೂಡಲಗಿ: ಮೊದಲ ಬಾರಿಗೆ ಬಿಜೆಪಿ ತನ್ನ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದಾಗ ಬೆಳಗಾವಿ ಮಹಾನಗರದ ಜನತೆ ಅಭೂತಪೂರ್ವವಾದ ಬೆಂಬಲವನ್ನು ನೀಡಿದಕ್ಕಾಗಿ ಮಹಾನಗರದ ಜನತೆಗೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಸ.6 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಕಳೆದ ಕೆಲ ದಶಕಗಳಿಂದ ಬರಿ ಜಾತಿ, ಮತ, ಭಾಷೆಯ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದರಿಂದ ಜನರ ದೈನಿಕ ಜೀವನಕ್ಕೆ ಬಹಳಷ್ಟು ತೊಂದರೆಗಳಾಗಿದ್ದವು ಮತದಾರರು ರೋಸಿ ಹೋಗಿದ್ದರು. ಅಭಿವೃದ್ಧಿ ಪರವಾದಂಥ ಬಿಜೆಪಿಯ ವಿಚಾರಗಳಿಗೆ ಇವತ್ತು ಮತದಾರರು ಬಲ ತುಂಬಿದ್ದಾರೆ.
ಗೆದ್ದಿರುವಂಥ ಮಹಾನಗರ ಪಾಲಿಕೆ ಸದಸ್ಯರು ಬಹಳ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಇಲ್ಲಿ ತನಕ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಕೂಡಾ ಮಹಾನಗರ ಪಾಲಿಕೆ ನಮ್ಮ ಕೈಯಲ್ಲಿ ಇಲ್ಲದ ಕಾರಣದಿಂದ ಎಲ್ಲೋ ಕೆಲವು ಕಡೆ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಎನ್ನುವ ಕೊರಗು ಬಹಳಷ್ಟು ಜನರಿಗೆ ಇದೆ ಅದನ್ನು ನಿವಾರಣೆ ಮಾಡುವ ದೃಷ್ಟಿಯಲ್ಲಿ ಹೆಜ್ಜೆ ಇಡಬೇಕು ಎಂದರು.