ಹುತಾತ್ಮರ ದಿನಾಚರಣೆ ಹಾಗೂ ರಾಷ್ಟ್ರೀಯ ಸರ್ವೋದಯ ದಿನದ ಅಂಗವಾಗಿ ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಡಾ. ಯ. ಚಿ. ದೊಡ್ಡಯ್ಯ ಅವರನ್ನು ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಡಾ. ಬಿ. ಎ.ಪಾಟೀಲ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಶಾಂತಿ ಕಾರ್ಯಕರ್ತ ಇ.ಪಿ. ಮೆನನ್ ಅವರಿಗೆ ರಾಷ್ಟ್ರೀಯ ಸರ್ವೋದಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಖಿಲ ಭಾರತ ಸರ್ವ ಸೇವಾ ಸಂಘದ ಅಧ್ಯಕ್ಷ ಚಂದನ್ ಪಾಲ್, ಹಿರಿಯ ಸಮಾಜ ಸೇವಕ ಅವಿನಾಶ್ ಕಾಕಡೆ, ಶೇಖ್ ಹುಸೇನ್, ಆಂಧ್ರ ಪ್ರದೇಶ ಸರ್ವೋದಯ ಮಂಡಲದ ಅಧ್ಯಕ್ಷ ರಾಮ್ ಬಾಬು ನಾಯ್ಡು, ಮಂಡಲದ ಪೂರ್ವಾಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅನೇಕ ಸರ್ವೋದಯ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಜೊತೆಗೆ ಮಾಜಿ ಸೈನಿಕರು, ಖಾದಿ ಕಾರ್ಯಕರ್ತರು ಹಾಗೂ ಶ್ರಮಜೀವಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮಾವೇಶವು ಗಾಂಧೀ ತತ್ತ್ವಾಧಾರಿತ ಸಮಾಜ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಡೆದಿದ್ದು, ಸರ್ವೋದಯ ಚಳವಳಿಗೆ ಹೊಸ ಚೈತನ್ಯ ತುಂಬುವಂತಾಯಿತು.

