ಮೂಡಲಗಿ: ಕೇಂದ್ರ ಸರ್ಕಾರವು ಅಟಲ್ ಭುಜಲ್ ಯೋಜನೆಯನ್ನು ಕರ್ನಾಟಕ ಗುಜರಾತ್, ಹರಿಯಾಣ, , ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಹಯೋಗದೊಂದಿಗೆ ಸುಮಾರು 6,000 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ಬಿಶ್ವೇಶ್ವರ ತುಡು ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭೆಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಕ್ಷೀಣಿಸುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಟಲ್ ಭುಜಲ್ ಯೋಜನೆಯಡಿ ಕರ್ನಾಟಕದ 14 ಜಿಲ್ಲೆಗಳ 41 ತಾಲೂಕುಗಳನ್ನು ಒಳಗೊಂಡ 1199 ನೀರಿನ ಒತ್ತಡ ಗ್ರಾಮ ಪಂಚಾಯಿತಿಗಳಲ್ಲಿ 39.703 ಚದರ ಕಿಮೀ ವಿಸ್ತಿರ್ಣಕ್ಕೆ ಸುಮಾರು 1200 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದರು.
ಜಲಜೀವನ ಮಿಷನ ಅಭಿಯಾನ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಪ್ರಧಾನ ಮಂತ್ರಿಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ, ಸಣ್ಣ ನೀರಾವರಿ ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ಸಾಮಾನ್ಯವಾಗಿ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ರಚನೆಗಳ ನಿರ್ಮಾಣವನ್ನು ಬೆಂಬಲಿಸುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.