ಗೋಕಾಕ- ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ ಒಕ್ಕೂಟದ ಬೆಳವಣಿಗೆಗೆ ಹೈನುಗಾರ ರೈತರು ಕೈ ಜೋಡಿಸುವಂತೆ ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರೈತರಲ್ಲಿ ಕೋರಿದರು.
ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಗುರುವಾರ, ರೈತ ಕುಟುಂಬಗಳಿಗೆ 5.70 ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಗ್ರಾಹಕರಿಂದ ನಂದಿನಿ ಹಾಲು ಮತ್ತು ಇತರೆ ಸಿಹಿ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಲಿವೆ ಎಂದರು.
ಪ್ರತಿ ನಿತ್ಯ ಒಕ್ಕೂಟಕ್ಕೆ 2.15 ಲಕ್ಷ ಲೀಟರ್ ಆಕಳು ಹಾಲು ಮತ್ತು 50 ಸಾವಿರ ಎಮ್ಮೆ ಹಾಲು ಸಂಗ್ರಹವಾಗುತ್ತಿದೆ. ಪ್ರ.ಲೀ. ಆಕಳು ಹಾಲಿಗೆ ರೂಪಾಯಿ 33 ಮತ್ತು ಎಮ್ಮೆ ಹಾಲಿಗೆ ರೂಪಾಯಿ 42 ದರವನ್ನು ರೈತರಿಗೆ ನೀಡುತ್ತಿದ್ದೇವೆ. ಇದರಲ್ಲಿ ಎಮ್ಮೆ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಪ್ರಸ್ತಾಪ ಮಾಡಿವೆ. ಪ್ರತಿ ಲೀ. ಹಾಲಿಗೆ 5 ರೂ. ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ನಾಳೆ ಶುಕ್ರವಾರ ನಡಯುವ ಜಿಲ್ಲಾ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಕೊಳ್ಳುವುದಾಗಿ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ
ಹೇಳಿದರು.
ಚೆಕ್ ವಿತರಣೆ- ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಇಬ್ಬರು ಫಲಾನುಭವಿಗಳಿಗೆ ತಲಾ 50 ಸಾವಿರದಂತೆ ಒಂದು ಲಕ್ಷ ರೂ., ರೈತ ಕಲ್ಯಾಣ ಸಂಘದಿಂದ ಐವತ್ತು ಸಾವಿರ ರೂ.ಸೇವಾ ನಿವೃತ್ತರಾದ ಮೂಡಲಗಿ ತಾಲ್ಲೂಕಿನ ಮುನ್ಯಾಳ ಸಂಘದ ಕಾರ್ಯದರ್ಶಿಯವರಿಗೆ ಮತ್ತು 21 ಫಲಾನುಭವಿಗಳಿಗೆ ತಲಾ 20 ಸಾವಿರ ರೂಪಾಯಿಗಳಂತೆ 4.20 ರೂ.ಗಳನ್ನು ಮರಣ ಹೊಂದಿರುವ ರೈತ ಕುಟುಂಬಗಳ ವಾರಸುದಾರರಿಗೆ ರೈತ ಕಲ್ಯಾಣ ಸಂಘದಿಂದ ವಿತರಿಸಲಾಯಿತು. ಹೀಗೆ ಒಟ್ಟು 5.70 ಲಕ್ಷ ರೂಪಾಯಿ ಚೆಕ್ಗಳನ್ನು ಬಾಲಚಂದ್ರ ಜಾರಕಿಹೊಳಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಬೆಮುಲ್ ನಿರ್ದೇಶಕ ಮಲ್ಲಪ್ಪ ಪಾಟೀಲ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಡಾ. ವೀರಣ್ಣ ಕೌಜಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

