ಸಿಂದಗಿ: ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ, ಅಪ್ಪ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ ಎಂದು ಕ್ರಿಯೇಟಿವ್ ಕಿಡ್ಸ್ ಹೋಮ್ದ ಮುಖ್ಯಸ್ಥೆ ಡಾ.ಜ್ಯೋತಿ ಪೂಜಾರ ಹೇಳಿದರು.
ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ವಿಶ್ವ ಅಪ್ಪಂದಿರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳಿಗೆ ಗಾಯವಾದರೆ ಅದಕ್ಕೆ ಬ್ಯಾಂಡೇಜ್ ಹಾಕುವುದು ತಾಯಿಯೇ ಆದರೂ, ಆ ಗಾಯಕ್ಕೆ ಬ್ಯಾಂಡೇಜ್ ಕೊಡಿಸಿ ಮಕ್ಕಳ ಬಗ್ಗೆ ಕಾಳಜಿ ತೋರಿಸುವವನು ತಂದೆ.
ತನ್ನ ಜವಾಬ್ದಾರಿಯನ್ನು ಪೂರೈಸುತ್ತಲೇ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುವ ಶ್ರಮಜೀವಿ ಎಂದರೆ ಅಪ್ಪ ಮಾತ್ರ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ.
ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ ಎಂದು ಹೇಳಿದರು.
ಅಪ್ಪನ ಪ್ರೀತಿ, ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 18ರಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ಫಾದರ್ಸ್ ಡೇ ಅನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ, ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಳಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ಶಾಂತಾ ಮೋಸಲಗಿ, ಅಂಬಿಕಾ ಹೂಗಾರ, ಸಿಬ್ಬಂಧಿಗಳಾದ ಸಿಬ್ಬಂಧಿಗಳಾದ ಅಂಬಿಕಾ ಕರಿಶೆಟ್ಟಿ, ಶಶಿಕಲಾ ಪೂಜಾರಿ, ಚಂದ್ರಶೇಖರ ಚೌಧರಿ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.