ಹಳ್ಳೂರ : ‘ರೈತರು ಸಾವಯವ ಪದ್ದತಿಯಲ್ಲಿ ಕಬ್ಬು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸುವದರ ಮೂಲಕ ಪರಿಸರ ಮತ್ತು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆಯೆಂದು’ ಸಮೀರವಾಡಿ ಜಿ ಬಿ ಎಲ್ ಸಕ್ಕರೆ ಕಾರ್ಖಾನೆಯ ಮಾಲೀಕರಾದ (ಸಿಎಂಡಿ) ಸಮೀರ ಸೋಮೈಯಾ ಅವರು ಹೇಳಿದರು.
ಶುಕ್ರವಾರದಂದು ಮೂಡಲಗಿಯ ತಾಲ್ಲೂಕಿನ ಕಲ್ಲೊಳ್ಳಿ ಪುಣ್ಯಕ್ಷೇತ್ರ ಜೈ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಪ್ರಗತಿಪರ ರೈತರಾದ ಬಾಳಪ್ಪ ಬಿ. ಬೆಳಕೂಡ ಅವರ ತೋಟಕ್ಕೆ ಭೇಟಿ ನೀಡಿ ಕಬ್ಬಿನ ಬೆಳೆಯಲ್ಲಿ ಮಾಡಿರುವ ಸಾಧನೆಯನ್ನು ನೋಡಿ ಮಾತನಾಡಿದ ಅವರು ದೇಶಕ್ಕೆ ಅನ್ನ ನೀಡುವ ರೈತರ ಕೊಡುಗೆ ಅಪಾರವಾಗಿದೆ ಕೃಷಿಯು ಪರಿಸರಕ್ಕೆ ಹಾನಿಯಾಗದಂತೆ ರೈತರು ಕಾಳಜಿವಹಿಸುವುದು ಇಂದಿನ ದಿನಮಾನಗಳಲ್ಲಿ ಅವಶ್ಯಕತೆಯಿದೆ. ಕಲ್ಲೋಳಿಯ ರೈತ ಬಾಳಪ್ಪ ಬಿ. ಬೆಳಕೂಡ ಅವರು ಕಬ್ಬು ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಮಾಡತ್ತಿರುವುದು ಶ್ಲಾಘನೀಯವಾಗಿದೆ. ಈ ಹಿಂದೆ ಒಂದು ಎಕರೆಗೆ 125 ಟನ್ ಕಬ್ಬು ಇಳುವರಿ ಪಡೆದು ದಾಖಲೆ ಮಾಡಿದ್ದಾರೆ. ಈ ಬಾರಿ ಎಕರೆಗೆ 140 ಟನ್ ಇಳುವರಿ ತೆಗೆಯುವ ಅವರ ಗುರಿಯಿದೆ ಮತ್ತು ಅವರ ಶ್ರಮವು ನಿಜವಗಿಯೂ ಮೆಚ್ಚುವಂತದ್ದು ಎಂದರು.
ರೈತ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಎರೆಹುಳ ಗೊಬ್ಬರ ತೊಟ್ಟಿಗಳು, ಬಯೋಡೈಜೆಸ್ಟ್ ಘಟಕ, ದೇಸಿ ಆಕಳು, ಎಮ್ಮೆಗಳ ಕೊಟ್ಟಿಗೆ, ಜೀವಾಮೃತ ತಯಾರಿಕೆ ಘಟಕ ಇವುಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಕೂಡ ಅವರು ನೈಸರ್ಗಿಕ ಸಂಗತಿಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುತ್ತಿರುವ ಕೃಷಿ ಪದ್ದತಿಯು ಮಾದರಿಯಾಗಿದೆ. ರೈತರು ಇಂಥ ಪದ್ದತಿಯನ್ನು ಅನುಸರಿಸಿ ಕೃಷಿಯಲ್ಲಿ ಮುಂದೆ ಬರಬೇಕು ಎಂದರು.
ಈ ಸಮಯದಲ್ಲಿ ಮಾಧವ ಸಮೀರ ಸೋಮೈಯಾ, ಡಾ. ಲ್ಯಾರಿ ವಾಕರ್, ಡಾ. ಲೀಸಾ, ಸಮೀರವಾಡಿ ಗೋದಾವರಿ ಬೈಯೋರಿಫೈನರಿ ಸಕ್ಕರೆ ಕಾರ್ಯನಿರ್ವಾಹಕ ನಿರ್ದೇಶಕಿ ಸಂಗೀತಾ ಶ್ರೀವಾತ್ಸವ.ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಆರ್ ಭಕ್ಷಿ,.ಕೆಐಎಎಆರ್ ವಿಭಾಗದ ನಿರ್ದೇಶಕ ಡಾ. ನಂದಕುಮಾರ.ಕಬ್ಬು ವಿಭಾಗದ ಮಹಾಪ್ರಬಂಧಕ ವಿ.ಎಸ್. ಕಣಬೂರ, ವಿಶ್ವನಾಥ ಭುಜನ್ನವರ, ಸಂದೀಪನ, ಅಶೋಕ ಕುಡಚಿ, ರವಿ ಖಾನಗೌಡ್ರ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ, ಶಂಕರ ಬೆಳಕೂಡ, ಬಸವರಾಜ ಬೆಳಕೂಡ, ಪ್ರಭು ಕಡಾಡಿ, ಭೀಮಶಿ ಹೆಬ್ಬಾಳ, ಮಲ್ಲಪ್ಪ ಕುರಬೇಟ, ಉಮೇಶ ಪಾಟೀಲ, ಈರಣ್ಣ ಬೆಳಕೂಡ ಮತ್ತು ರೈತರು ಇದ್ದರು.
ವರದಿ : ಜಿ ಬಿ ಎಲ್ ಸಕ್ಕರೆ ಕಾರ್ಖಾನೆಯ ಸಿಬ್ಬಂದಿ ಮುರಿಗೆಪ್ಪ ಮಾಲಗಾರ