ಮೂಲ ಜನಪದ ತಂಬೂರಿ ಕಲಾವಿದರು ಮಳವಳ್ಳಿಯ ಗುರುಬಸವಯ್ಯನವರು

Must Read

ಮೈಸೂರು ಪ್ರಾಂತ್ಯದ ಅತ್ಯಂತ ಹಿರಿಯ ಮೂಲಜನಪದ ಕಲಾವಿದರೆಂದರೆ ಮಳವಳ್ಳಿಯ ಗುರುಬಸವಯ್ಯನವರು. ಇವರು ಈಗ ೯೦ ವರ‍್ಷ ವಯಸ್ಸಿನವರಾಗಿದ್ದಾರೆ. ಯಳಂದೂರು ತಾಲ್ಲೂಕು ಅಂಬಳೆಯ ತುಪಾಕಿರಾಚಯ್ಯನ ವಂಶೀಕರಾದ ಇವರು ಮಂಟೇಸ್ವಾಮಿಯ ವರದವರಾಗಿರುತ್ತಾರೆ.

ತುಪಾಕಿರಾಚಯ್ಯನವರು ಆ ಕಾಲಕ್ಕೆ ಅಂಬಳೆಯಲ್ಲಿ ೧೦೦ ಎಕ್ಕರೆ ಜಮೀನುದಾರರಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಮಂಟೇಸ್ವಾಮಿಯವರು ಸಂಚಾರಕ್ಕೆ ಹೋಗಿದ್ದಾಗ ಅಂಬಳೆಯ ಜಗಲಿಯಲ್ಲಿ ಕೂರುತ್ತಾರೆ. ನಮಗೆ ಇಲ್ಲಿ ಉತ್ಸವವಾಗಬೇಕು ಎಂದಾಗ ಊರಿನ ಯಜಮಾನರಾದ ತುಪಾಕಿರಾಚಯ್ಯನಿಗೆ ತಿಳಿಸಲಾಗಿ ಅವರು ಸ್ವಾಮಿಗಳ ಉತ್ಸವ ಮಾಡಿ ಮುಗಿಸಿದ ನಂತರ ಸ್ವಾಮಿಗಳು ತುಪಾಕಿರಾಚಯ್ಯನಿಗೆ ನಿಮ್ಮ ಮಕ್ಕಳೆಲ್ಲಿ ಬರಲಿಲ್ಲ ಎಂದಾಗ ತುಪಾಕಿರಾಚಯ್ಯ ಅಯ್ಯೋ ಸ್ವಾಮಿ ನಮಗೆ ಮಕ್ಕಳಿಲ್ಲ ಎನ್ನುತ್ತಾರೆ. ನಿಮಗೆ ಮಕ್ಕಳು ಕೊಟ್ಟರೆ ನನಗೆ ಒಕ್ಕಲಾಗುತ್ತೀರ ಎಂದು ಕೇಳುತ್ತಾರೆ. ಅದಕ್ಕೆ ಸ್ವಾಮಿ ನನಗೆ ೭೦ ವರ‍್ಷ. ನನ್ನ ಹೆಂಡತಿಗೆ ೬೦ ವರ್ಷ  ಈ ವಯಸ್ಸಿನಲ್ಲಿ ನಮಗೆ ಮಕ್ಕಳಾಗುವುದು ಇದು ಅದದ ಸ್ವಾಮಿ ಎನ್ನುತ್ತಾರೆ.

ಅದಕ್ಕೆ ಸ್ವಾಮಿಗಳು ನಕ್ಕು ನಾಳೆ ಇದೇ ಜಗಲಿ ಬಳಿ ಗಂಡಹೆಂಡಿರಿಬ್ಬರು ಮಡಿಯಾಗಿ ಬನ್ನಿ ಎನ್ನುತ್ತಾರೆ. ಬಂದವರಿಗೆ ಬಾಳೆಹಣ್ಣಿನ ಭಿ(ಪಿ)ನ್ನಪ್ರಸಾದ ಕೊಡುತ್ತಾರೆ. ಅವರಿಗೆ ಒಂಬತ್ತು ತಿಂಗಳಿಗೆ ಒಂದು ಗಂಡುಮಗು ಹುಟ್ಟುತ್ತದೆ. ಜನ ಇದೇನು ಈ ವಯಸ್ಸಿನಲ್ಲಿ ಈ ಕೊಸಕೋಳಿ ಎಂದು ಜರಿಯುತ್ತಾರೆ. ಅದೇ ಮಗುವನ್ನು ಎತ್ತಿಕೊಂಡು ಮತ್ತೆ ಸ್ವಾಮೀಜಿ ಬಳಿ ಬರುತ್ತಾರೆ. ಸ್ವಾಮಿ ಈ ವಯಸ್ಸಿನಲ್ಲಿ ನಮಗೆ ಮಕ್ಕಳಾಗಿರುವುದರಿಂದ ಜನ ಇದೇನು ಕೊಸಕೋಳಿ ಎಂದು ಆಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಬೇಸರ ಹೇಳಿಕೊಳ್ಳುತ್ತಾರೆ. ಆಗ ಮಗುವಿಗೆ ನಾಮಕರಣವೇನಿಟ್ಟಿರಿ ಎಂದು ಸ್ವಾಮಿಜಿ ಕೇಳಲು ಇನ್ನು ಹೆಸರಿಟ್ಟಿಲ್ಲ ತಾವೆ ಒಂದು ಹೆಸರಿಟ್ಟು ಬಿಡಿ ಎಂದಾಗ ಜನ ಇದೇನು ಕೊಸಕೋಳಿ ಎಂದದಕ್ಕಾಗಿ ಈ ಮಗುವಿನ ಹೆಸರು ಕೊಸಕೋಳಿಸಿದ್ದ ಎಂದು ಹೆಸರಿಟ್ಟುಬಿಡಿ ಎನ್ನುತ್ತಾರೆ.

ಆ ಹೆಸರೇ ಅವರ ಮಗುವಿನ ಹೆಸರಾಗುತ್ತದೆ. ಜನರ ನಿಂದನೆ, ಮಗುವಿನ ಪೋಷಣೆ ಇದೆಲ್ಲ ಅರಿತ ದಂಪತಿಗಳು ನಮಗೆ ಆಸ್ತಿಪಾಸ್ತಿ ಏನು ಬೇಡ ಮಗು ಒಂದೇ ಸಾಕು ಎಂದು ಅಂಬಳೆ ಬಿಟ್ಟು ಮಳವಳ್ಳಿಯ ಮಂಟೇಸ್ವಾಮಿ ಮಠಕ್ಕೆ ಬಂದು ಸೇರುತ್ತಾರೆ. ಮೂಲತಃ ದಾಸರಾದ ಇವರು ನೀಲಗಾರರಾಗುತ್ತಾರೆ. ಇದು ಧರೆಗೆ ದೊಡ್ಡವರ ಪವಾಡವೇ ಸರಿ. ಮಠದಲ್ಲಿಯೇ ಪರಿಚಾರಕರಾಗಿದ್ದುಕೊಂಡು  ಮಠದ ಸೇವೆ ಮಾಡುತ್ತಿರುತ್ತಾರೆ. ನಂತರ ಇವರಿಗೆ ಒಂದು ಮನೆ ಮಾಡಬೇಕು ಎಂದು ಮನೆ ಮಾಡಿಕೊಡುತ್ತಾರೆ.

ಕೊಸಕೋಳಿಸಿದ್ದನಿಗೆ ಮದುವೆಯಾಗಿ ವಂಶಬೆಳೆಯುತ್ತದೆ. ಅವರ ಏಳನೇ ತಲೆಮಾರೇ ಗುರುಬಸವಯ್ಯ. ಇವರ ವಂಶೀಕರು ಮಂಟೇಸ್ವಾಮಿ ಕತೆಯಾದ ಧರಗೆ ದೊಡ್ಡವರ ವಚನವನ್ನು ಹಾಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಅದರಂತೆ ಇವರು ನೀಲಗಾರರಾಗಿ ಪರಂಪರೆಯ ಕಾವ್ಯ ಹಾಡಿಕೊಂಡು ಬರುತ್ತಿದ್ದಾರೆ.

ಇವರ ತಂದೆ, ದೊಡ್ಡಪ್ಪ ಇವರುಗಳು ತಂಬೂರಿ ಹಿಡಿದು ನಾಡಿನ ಮೇಲೆ ಹೊರಟರೆ ಇವರ ಪದ್ಯ ಕೇಳಲು ಜನ ಸೇರುತ್ತಿದ್ದರಂತೆ. ನಾನು ಚಿಕ್ಕವಳಿದ್ದಾಗ ಗುರುಬಸವಯ್ಯನವರೇ ಯುಗಾದಿ ಹಬ್ಬದ ಮಾರನೇ ದಿನ ಮನೆಮನೆಗೆ ಬಂದು ಭಿಕ್ಷಸಾರಿ ಹಾಡುತ್ತಿದ್ದರೆ ಅದು ಬೀದಿಯ ತುದಿಯವರೆಗೂ ಕೇಳಿಸುತ್ತಿತ್ತು. ಕೇಳಿದವರ ಮನೆಯ ಮುಂದೆ ಹೊಗಳಿಸುತ್ತಿದ್ದರು. ಅಂದರೆ ಹಿರಿಯರ ಆತ್ಮಗಳನ್ನು ಕೊಂಡಾಡುವರು ಎಂದು ಹಾಡಿ ಹೊಗಳುವರು ಪಿ.ನಾಗರತ್ನಮ್ಮ ಮಳವಳ್ಳಿಯವರು.

ಗುರುಬಸವಯ್ಯನವರು ಬಿಳಿ ಅಂಗಿ ಬಿಳಿ ಪಂಚೆ ಕೆಂಪು ಚುಕ್ಕಿ ರುಮಾಲು  ಹಾಕಿಕೊಂಡು ಎಡದ ಕೈಲಿ ಗಗ್ಗರ, ಎದೆ ಮೇಲೆ ತಂಬೂರಿ  ಬೆರಳಲ್ಲಿ ಲಕ್ ಧರಿಸುತ್ತಾರೆ. ತಂಬೂರಿಯನನ್ನು ನುಡಿಸುವ ನಾದಕ್ಕೆ ತಕ್ಕಂತೆ ಗಗ್ಗರ ಡಕ್ಕಿ ನುಡಿಸಿದರೆ ಆ ಆನಂದವೇ ಬೇರೆ. ತಂಬೂರಿ ಶೃತಿ ಮಾಡುವುದರಲ್ಲಿ ನಿಸೀಮರು. ಗುರುಬಸವಯ್ಯನವರು ಧರೆಗೆ  ದೊಡ್ಡವರ ಕತೆ, ಚನ್ನಿಗರಾಮನ ಕತೆ, ಗಣಪತರಾಜನ ಕತೆ ಬಾಲನಾಗಮ್ಮನ ಕತೆ, ಬಸವಣ್ಣನವರ ವಚನ (ದೊಡ್ಡಬಸವಣ್ಣನ ಕತೆ), ಮೈದಾಳರಾಮನ ಕತೆ, ಕತ್ತಲರಾಜನ ಕತೆ, ಅರ‍್ಜುನಜೋಗಿ ಕತೆ ಹಾಡುತ್ತಾರೆ. ಇವರು ಹೆಚ್ಚಾಗಿ ಧರಗೆದೊಡ್ಡವರ ವಚನ ಹಾಡುವುದು. ಇವರೇ ಹಾಡಿರುವ ಗಣಪತರಾಜ (ಘನಕೋಟರಾಜ)ನ ಕತೆ, ಧರೆಗೆ ದೊಡ್ಡವರ ವಚನ, ಚನ್ನಿಗರಾಮನ ಕತೆಯನ್ನು ಪಿ.ನಾಗರತ್ನಮ್ಮ ಬರೆದಿದ್ದಾರೆ. ಪುಸ್ತಕ ಮುದ್ರಣದ ಹಂತದಲ್ಲಿದೆ.

ಗುರುಬಸವಯ್ಯನವರು ಬಳಿ ಇರುವ ತಂಬೂರಿ ತಲತಲಾಂತರದ ತಂಬೂರಿ. ಈ ತಂಬೂರಿ ಯಲ್ಲಿ ನುಡಿಸುವಂತೆ ಬೇರೆ ಯಾರಿಂದಲು ನಾನು ಆ ನಾದವನ್ನು ಕೇಳಿಲ್ಲ. ಹೆಚ್ಚಿನದಾಗಿ ಗುರುಬಸವಯ್ಯನವರಂತೆ ಯಾರು ತಂಬೂರಿ ನುಡಿಸಿದ್ದನ್ನು ನಾನು ಈವರೆವಿಗು ಕೇಳಿಲ್ಲ. ಅಷ್ಟು ಇಂಪಾಗಿ ಮತ್ತು ಭಿನ್ನವಾಗಿರುತ್ತದೆ ಎಂಬ ಅಭಿಪ್ರಾಯ ಮೇಡಂ ಅವರದು. ಇವರ ಜನಪದ ಸೇವೆಗೆ ಮೆಚ್ಚಿ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇತ್ತೀಚೆಗೆ ೨೦೨೪ನೇ ಸಾಲಿನ ಅಕಾಡಮಿ ಪ್ರಶಸ್ತಿ ಲಭಿಸಿದೆ. ಪತ್ನಿ ಪುತ್ರರು ಪುತ್ರಿಯರನ್ನು ಹೊಂದಿರುವ ಇವರು ಸಣ್ಣ ಮನೆಯಲ್ಲಿ ವಾಸವಾಗಿದ್ದರು ಜನಪದದ ಅರಮನೆಯನ್ನೆ ತಮ್ಮ ಹೃದಯದಲ್ಲಿ ಇರಿಸಿಕೊಂಡಿದ್ದಾರೆ.


ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group