ಮುಧೋಳ – ನಿಸರ್ಗವೇ ಜನಪದ .ಅಲ್ಲಿ ನೆಲಮೂಲ ಸಂಸ್ಕೃತಿ ಅಡಗಿದೆ. ಅಗೆದಷ್ಟು ಸಂಸ್ಕೃತಿ ಸಂಪತ್ತು ದೊರಕುತ್ತದೆ ಎಂದು ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಮತ್ತು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಬಸವ ಜನಪದ ಕಲಾ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮ ದೇವತಾರಾಧನೆ ವಾರಾಚರಣೆ ನಿಮಿತ್ತ ಕಳೆದ ಜನವರಿ 30 ರಿಂದ ಫೆಬ್ರುವರಿ 6 ವರೆಗೆ ನಡೆಸಿದ ಶ್ರೀದೇವಿ ಪಾರಾಯಣ, ಪುರಾಣದ ಮಂಗಲೋತ್ಸವ ಹಾಗೂ ಜನಪದ ಸಂಸ್ಕೃತಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಸತ್ವಯುತವಾದ ನಮ್ಮ ಜನಪದವನ್ನು ನಾವೆಲ್ಲ ಪೂಜಿಸಬೇಕು. ಜನಪದವೇ ಒಂದು ಶಕ್ತಿ ಎಂದ ಅವರು ತತ್ವವನೊಳಗೊಂಡ ಜನಪದ ಎಂದೆಂದೂ ಶಾಶ್ವತ ಎಂದರು.
ಗುರುಸೇವಾ ಧುರೀಣರಾದ ಶಿರೋಳದ ವರದಿಗಾರ ಎಂ.ಆರ್.ತೆಳಗೇರಿ, ಕಲಾವಿದರಾದ ಬೆಳಗಲಿಯ ರಾಮಣ್ಣ ಖೋತ,ಯಮನಪ್ಪ ಆಲಗೂರ, ಕುಳಲಿಯ ವಿಠಲ ಬನಾಜಗೋಳ, ಈರಪ್ಪ ತಳಪಟ್ಟಿ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಆಶ್ರಮದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಪಾರಿಜಾತ ಕಲಾವಿದ ನಾವಲಗಿಯ ಶ್ರೀಶೈಲ ಪಟ್ಟಣಶೆಟ್ಟಿ ಮಾತನಾಡಿ ಜನಪದ ಕಲೆಗಳು ನಶಿಸಿ ಹೋಗಬಾರದು. ಜನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶಾಮಲಾ ಅವರು ನೂರಾರು ತಾಯಂದಿಯರಿಗೆ ಉಡಿ ತುಂಬುವ ಕಾರ್ಯವನ್ನು ನೆರವೇರಿಸಿ ಮಾತನಾಡಿ ಕಾಯಕದೊಂದಿಗೆ ಕೈಲಾಸ ಪತಿಯ ಸ್ಮರಣೆ ಮಾಡೋದು ಒಂದು ಭಾಗ್ಯ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಜನಪದ ಕಲಾವಿದೆ ಶ್ರೀಮತಿ ಮುತ್ತವ್ವ ಲಕ್ಷ್ಮೇಶ್ವರ, ಬಸವ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ ಸೋಲೋನಿ, ಕುಳಲಿಯ ಪಿ.ಕೆ.ಪಿ.ಎಸ್. ಸದಸ್ಯ ಮುತ್ತಣ್ಣ ಪೋಳ, ಕಲಾವಿದರಾದ ಶ್ರೀಮತಿ ನಿಂಗವ್ವ ಕನ್ನೊಳ್ಳಿ ಶ್ರೀಮತಿ ಅಣ್ಣವ್ವ ಡಂಗಿ ಉಪಸ್ಥಿತರಿದ್ದರು.
ಬಾಗಲಕೋಟೆ ಜಿಲ್ಲೆಯ ಕರಡಿಗುಡ್ಡ.ಯಂಡಿಗೇರಿ, ಹನಮನೇರಿ, ಬೂದಿಹಾಳ, ರಾಂಪೂರ, ಯಲ್ಲಟ್ಟಿ, ಬನಹಟ್ಟಿ, ಅಂಕಲಗಿ ಸೇರಿದಂತೆ ವಿವಿಧ ಭಾಗಗಳಿಂದ ಬಂದ ತಂಡಗಳು ಕಲಾಪ್ರದರ್ಶನ ನೀಡಿದವು. ಮಾಳಿಂಗರಾಯ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ ಗುರುಪ್ರಸಾದ ಸ್ವಾಮೀಜಿ ಸ್ವಾಗತಿಸಿದರು. ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯಕರ್ತ ಎಲ್ ಶ್ರೀನಿವಾಸ ಪ್ರಸಾದ ವಂದಿಸಿದರು. ಬಂದ ಭಕ್ತಸ್ತೋಮಕ್ಕೆ ಪ್ರಸಾದ ವಿತರಣೆಯಾಯಿತು ನಂತರ ಮಂಗಲದೊಂದಿಗೆ ಪುರಾಣವು ಹಾಗೂ ಸಂಸ್ಕೃತಿ ಸಂಭ್ರಮವು ಸಂಪನ್ನಗೊಂಡಿತು

