ಅಭಿವೃದ್ಧಿ ಕಾರ್ಯಕ್ಕೆ ಹಟ ಹಿಡಿದು ಅನುದಾನ ತರುವ ಬಾಲಚಂದ್ರ ಜಾರಕಿಹೊಳಿ; ಆರ್.ಅಶೋಕ ಶ್ಲಾಘನೆ
ಮೂಡಲಗಿ -ಎಲ್ಲರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ವೃದ್ಧರಿಗೆ ಮನೆ ಬಾಗಿಲಿಗೆ ಪಿಂಚಣಿ, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ, ತಾಂಡಾಗಳಿದ್ದಲ್ಲಿ ಅವರಿಗೆ ಜಮೀನು ಕೊಡುವುದು, ಖರೀದಿಯಾದ ಏಳು ದಿನಗಳಲ್ಲಿಯೇ ನಿಮ್ಮ ಹೆಸರಿಗೆ ದಾಖಲಾಗುವ ಪ್ರಕ್ರಿಯೆ, ದಲಿತರು ಮನೆ ಕಟ್ಟಿಕೊಳ್ಳಲು ಭೂ ಪರಿವರ್ತನೆ ನಿಯಮಗಳ ಸಡಿಲಿಕೆ ಮುಂತಾದ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಮೂಡಲಗಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುದಿನಗಳ ನಿಮ್ಮ ಬೇಡಿಕೆ ಈಡೇರಿದೆ. ಹೊಸ ತಾಲೂಕುಗಳಾದ ನಂತರ ಮೊಟ್ಟ ಮೊದಲ ಉಪನೋಂದಣಿ ಕಚೇರಿ ಮೂಡಲಗಿಗೆ ಸಿಕ್ಕಿದೆ ಬೇರೆ ಯಾವುದೇ ತಾಲೂಕಿಗೂ ಸಿಕ್ಕಿಲ್ಲ ಎಂದರು.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹಿಡಿದ ಕೆಲಸ ಬಿಡದೆ ಮಾಡುತ್ತಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಗಾಗಿ ನಮ್ಮನ್ನು, ಮುಖ್ಯಮಂತ್ರಿಗಳನ್ನು ಕಾಡಿಬೇಡಿ ಅನುದಾನ ತರುತ್ತಾರೆ. ಅಲ್ಲದೆ ಅವರು ಒಂಥರ ಕೊಡುಗೈ ದಾನಿಯಿದ್ದಂತೆ ಇಲ್ಲಿ ಅಲ್ಲದೆ ಬೆಂಗಳೂರಿನಲ್ಲೂ ಕೂಡ ದಾನ ಕಾರ್ಯ ಮಾಡುತ್ತ ಬಂದಿದ್ದಾರೆ ಎಂದು ಅಶೋಕ ಶ್ಲಾಘಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಅರಭಾಂವಿ ಕ್ಷೇತ್ರದಲ್ಲಿ ಇಪ್ಪತ್ತ ನಾಲ್ಕು ಗಂಟೆಗಳ ಕಾಲ ನೀರು ಸರಬರಾಜಿಗೆ ೩೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮೂಡಲಗಿ ತಾಲೂಕಿನ ೪೮ ಹಳ್ಳಿಗಳಿಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಆರಂಭವಾಗಿದೆ. ಹೊಸ ತಾಲೂಕುಗಳಾದ ನಂತರ ಮೂಡಲಗಿಗೇ ಮೊದಲ ಉಪನೋಂದಣಿ ಕಚೇರಿ ಆರಂಭವಾಗಿದೆ ಬೇರೆ ಎಲ್ಲೂ ಇಲ್ಲ. ಇದರ ಉಪಯೋಗವನ್ನು ಎಲ್ಲ ಸಾರ್ವಜನಿಕರು ಪಡೆದುಕೊಳ್ಳಬೇಕು. ಅಲ್ಲದೆ ಮೂಡಲಗಿ ನಗರಕ್ಕೆ ಸದ್ಯದಲ್ಲಿಯೇ ಮಿನಿ ವಿಧಾನ ಸೌಧ ಕೂಡ ಆಗಲಿದೆ. ಫೆಬ್ರವರಿ ತಿಂಗಳಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದರು.
ಈ ಸಲ ದಾಖಲೆ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ರಸ್ತೆಗಳು ತುಂಬಾ ಹದಗೆಡುವಂತಾಯಿತು ಬರುವ ದಿನಗಳಲ್ಲಿ ಅವುಗಳ ಅಭಿವೃದ್ಧಿ ಮಾಡಲಾಗುವುದು ಎಂದರು.
ಮೂಡಲಗಿಗೆ ಉಪನೋಂದಣಿ ಕಚೇರಿ ಆರಂಭವಾಗಲು ಹೆಜ್ಜೆ ಹೆಜ್ಜೆಗೂ ಸಹಾಯ ಸಹಕಾರ ನೀಡಿದ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಧನ್ಯವಾದಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅರ್ಪಿಸಿದರು.
ವೇದಿಕೆಯ ಮೇಲೆ ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಡಿ ಜಿ ಮಹಾತ್ ಉಪಸ್ಥಿತರಿದ್ದರು.
ಸಿದ್ದಸಂಸ್ಥಾನ ಪೀಠದ ಅಮೃತ ಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಸವರಾಜು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.