ನಿರಂತರ ಪ್ರಯತ್ನ, ಪರಿಶ್ರಮದಿಂದ ಕ್ರೀಡಾಪಟುಗಳು ಗುರಿ ತಲುಪಲು ಸಾಧ್ಯ- ಪಿಎಸ್ಐ ಬಾಲದಂಡಿ
ಮೂಡಲಗಿ: ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುವ ಗುರಿ ತಲುಪಲು ಕ್ರೀಡಾಪಟುಗಳಿಗೆ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ ಹಾಲಪ್ಪ ಬಾಲದಂಡಿ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರದಲ್ಲಿ ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ತಾಲೂಕಾ ಮಟ್ಟದ 2023-24ನೇ ಸಾಲಿನ ಕ್ರೀಡಾ ಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಿಗೆ ಆಯ್ಕೆಯ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳಿಗೆ ಇಂದಿನ ದಿನಮಾನಗಳಲ್ಲಿ ಸರಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ, ಸರಕಾರದ ಸೌಲಭ್ಯ ಮತ್ತು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಈ ಭಾಗದ ಕೀರ್ತಿಯನ್ನು ಹೆಚ್ಚಿಸಬೇಕೆಂದರು.
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳುವ ಪ್ರತಿಯೊಬ್ಬ ಕ್ರೀಡಾಪಟುಗಳು ಅನುಭವಿ ತರಬೇತಿದಾರರಿಂದ ತರಬೇತಿ ಪಡೆದುಕೊಂಡು ಕ್ರೀಡಾ ಶಾಲೆಗೆ ಆಯ್ಕೆಗೊಂಡರೆ ಉತ್ತಮ ಕ್ರೀಡಾಪಟು ಆಗುವುದರ ಜೊತೆ ತಮ್ಮ ಜೀವನ ಉಜ್ವಲವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ಕ್ರೀಡಾಪಟುಗಳು ಉನ್ನತಸ್ಥಾನ ಅಲಂಕರಿಸಲು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡುಗೆ ಅಪಾರವಾಗಿದೆ. ಕ್ರೀಡೆ ಹಾಗೂ ಜನಪದ ಕಲೆಯ ಸಂಘಟನೆ ಜಿಲ್ಲೆಯಾದ್ಯಂತ ಮಾಡುತ್ತೇವೆ ಎಂದರು.
ಬೆಳಗಾವಿ ಕ್ರೀಡಾ ಇಲಾಖೆಯ ಜೂಡೊ ತರಬೇತಿದಾರ ಕುತುಜಾ ಮುಲ್ತಾನಿ ಅವರು ಕ್ರೀಡಾ ಶಾಲೆಗೆ ಆಯ್ಕೆಯ ಪ್ರಕ್ರಿಯೆಯನ್ನು ವಿವರಿಸಿದರು.
ಸಮಾರಂಭದ ವೇದಿಕೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ವೆಂಕಟೇಶ ಸೋನವಾಲ್ಕರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ, ಉಪನ್ಯಾಸಕ ಪ್ರೊ.ಸಂಗಮೇಶ ಗುಜಗುಂಡ, ಎಸ್.ಎಸ್.ಆರ್ ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆ.ಎಸ್.ಹೊಸಟ್ಟಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಸಿದ್ದಪ್ಪ ಹೊಸಮನಿ, ಜಗದೀಶ ಡೊಳ್ಳಿ ಮತ್ತಿತರರು ಇದ್ದರು.
ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ ತಾಲೂಕಿನ 230 ಕ್ರೀಡಾಪಟುಗಳಲ್ಲಿ 35 ಕ್ರೀಡಾಪಟುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡರು.