ಮಹಿಳಾ ದಿನಾಚರಣೆ ಮತ್ತು ಕಿತ್ತೂರ ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ
ಮೂಡಲಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯು ಎಲ್ಲ ರಂಗದಲ್ಲಿ ತಮ್ಮ ತಾವು ಗುರುತಿಸಿಕೊಂಡಿದ್ದು, ಪ್ರತಿಯೊಬ್ಬರು ಕನಿಷ್ಠ ಕಾನೂನಿನ ಜ್ಞಾನವನ್ನು ತಿಳಿದುಕೊಂಡು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಮಾಡುವುದು ತಮ್ಮೆಲ್ಲರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮೂಡಲಗಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.
ಅವರು ಗುರುವಾರದಂದು ಪಟ್ಟಣದಲ್ಲಿ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಮೂಡಲಗಿ ತಾಲೂಕಾ ಆಡಳಿತ, ತಾ.ಪಂ ಕಛೇರಿ, ತಾಲೂಕಾ ಕಾನೂನುಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಭಾವಿ ಶಿಶು ಅಭಿವೃದ್ಧಿ ಯೋಜನೆ ಕಛೇರಿ ಮೂಡಲಗಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಆಶ್ರಯದಲ್ಲಿ ಹಮ್ಮಿಕೊಂಡಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಹಾಗೂ ವ್ಯಾವಹಾರಿಕ ಜ್ಞಾನದ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.
ಸಿಡಿಪಿಒ ಯಲ್ಲಪ್ಪ ಗದಾಡಿ ಮಾತನಾಡಿ, ಕ್ಷೇತ್ರ ಮಟ್ಟದಲ್ಲಿ ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕ ಅನುಷ್ಠಾನ ಮಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಮೇಲ್ವಿಚಾರಕ ಪಾತ್ರ ಮಹತ್ವದ್ದಾಗಿದ್ದು ತಮ್ಮ ಕುಟುಂಬಗಳ ಜೊತೆಗೆ ತಮ್ಮ ಕೆಲಸದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಎಲ್ಲಾ ಮಹಿಳಾ ಸಿಬ್ಬಂದಿಯವರಿನ್ನು ಗೌರವಿಸಿದ್ದು, ಮಹಿಳೆಯರು ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಧೈರ್ಯ ಮತ್ತು ಸಾಹಸದಿಂದ ಕೆಲಸ ನಿರ್ವಹಿಸುತ್ತಿರುದರಿಂದ ಇದು ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದರು.
ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ಮಹಿಳೆ ಯಾವುದೇ ಕೆಲಸವನ್ನು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಸಮರ್ಪಣಾ ಮನೋಭಾವನೆದೊಂದಿಗೆ ಕಾರ್ಯ ನಿಭಾಯಿಸುತ್ತಿರುವ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಹಿಳೆಯರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮಾಡುತ್ತಿದೆ ಎಂದರು.
ವಕೀಲರಾದ ಲಕ್ಷ್ಮಣ ಅಡಿಹುಡಿ, ಜ್ಯೋತಿ ಕುಡತೆ ಅವರು ಅತಿಥಿ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ ಶಿವಾನಂದ ಬಬಲಿ ವಹಿಸಿದ್ದರು.
ಸಮಾರಂಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ್, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಅರಭಾವಿ ಶಿಶು ಅಭಿವೃದ್ಧಿ ಯೋಜನೆ ಕಛೇರಿ ವ್ಯಾಪ್ತಿಯಲ್ಲಿನ ಅತ್ಯುತ್ತಮ ಕಾರ್ಯನಿರ್ವಸಿದ ೧೬ ಜನ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಿದರು ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಜಿಲ್ಲೆಯ ಹತ್ತು ಸಾಧಕರಿಗೆ ಕಿತ್ತೂರ ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೇ ಸಮಯದಲ್ಲಿ ಸಿಡಿಪಿಒ ಕಚೇರಿಯ ಸುಮಾರು ೩೦ ಮಹಿಳಾ ಸಿಬ್ಬಂದಿವರ್ಗದವರನ್ನು ಸನ್ಮಾನಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ತಾ.ಪಂ ಇ.ಒ ಎಫ್.ಜಿ.ಚಿನನ್ನವರ, ಬಿಇಒ ಅಜೀತ ಮನ್ನಿಕೇರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಎಸಿಡಿಪಿಒ ಜಯಶ್ರೀ ಮುರಗುಂಡಿ ಯುವ ಸಂಘಗಳ ಒಕ್ಕೂಟದ ತಾಲೂಕಾ ಅಧ್ಯಕ್ಷ ಜಗದೀಶ ಡೊಳ್ಳಿ, ವಿಠ್ಠಲ ಪೂಜೇರಿ, ಮಹಾದೇವ ಮುರಗೋಡ, ಯಲ್ಲಾಲಿಂಗ ವಾಳದ, ಸುಭಾಸ ಗೊಡ್ಯಾಗೋಳ, ಡಾ.ಚುಟುಕುಸಾಬ ಮಂಟೂರ ಇದ್ದರು.
ಸಮಾರಂಭದಲ್ಲಿ ಅರಭಾವಿ ಸಿಡಿಪಿಒ ಕಛೇರಿ ವ್ಯಾಪ್ತಿ ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ವಕೀಲರು ಹಾಗೂ ಯುವ ಸಂಘಗಳ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು
ಸಿಡಿಪಿಒ ಕಚೇರಿಯ ಇಂದ್ರಾ ಭೋವಿ ಸ್ವಾಗತಿಸಿದರು, ಯಮುನಾ ತಳವಾರ ನಿರೂಪಿಸಿದರು, ಕಸ್ತೂರಿ ಪಡೆನ್ನವರ ವಂದಿಸಿದರು.