ಮೈಸೂರು – ಕನ್ನಡಿಗರು ಕನ್ನಡ ನೆಲ,ಜಲ,ಭಾಷೆಗಳ ಬಗ್ಗೆ ಜಾಗೃತಿ ವಹಿಸದಿದ್ದರೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅಪಾಯಕ್ಕೆ ಸಿಲುಕಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.
ಮೈಸೂರಿನ ಅಭಿರುಚಿ ಬಳಗವೂ ಏರ್ಪಡಿಸಿದ್ದ ಸಾಹಿತ್ಯ ಸಮಾರಂಭದಲ್ಲಿ ಹಿರಿಯ ಸಾಹಿತಿ ಎನ್. ವಿ.ರಮೇಶ್ ಅವರ ತಾಯಿಶಾರದೆಗೆ ಕವನದಾರತಿ ಹಾಗೂ ಕಲ್ಪನಾ ಲೋಕ ವಾತ್ಸವ ಜೀವನ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಕನ್ನಡಿಗರು ಕನ್ನಡ ಪುಸ್ತಕಗಳನ್ನು ಹಾಗೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು,ತಮ್ಮ ಮಕ್ಕಳಿಗೆ ಕನಿಷ್ಠ ಹತ್ತನೇ ತರಗತಿ ವರೆಗಾದರೂ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಕೊಡಿಸಬೇಕು, ಮನೆಯಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು.ಅನ್ಯ ಭಾಷಾ ನಾಮಫಲಕಗಳು ಇರುವ ವ್ಯಾಪಾರಿ ಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳು ಹಾಗು ಉದ್ಯಮಗಳ ಜೊತೆ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು.ಆಗ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ.ಇಲ್ಲದಿದ್ದರೆ ಬಳಕೆಯಾಗದೇ ನಾಪತ್ತೆ ಆಗುತ್ತಿರುವ ವಿಶ್ವದ ಭಾಷೆಗಳ ಪಟ್ಟಿಗೆ ಕನ್ನಡವೂ ಸೇರುತ್ತದೆ ಎಂದವರು ಕಿವಿಮಾತು ನುಡಿದರು.
ಕನ್ನಡ ಪುಸ್ತಕಗಳನ್ನು ಸಗಟು ಖರೀದಿ ಯೋಜನೆಯಂತೆ ಆಯಾ. ವರ್ಷವೇ ಖರೀಧಿಸಬೇಕಾದ ಸಾರ್ವಜನಿಕ ಗ್ರಂಥಾಲಯ ಇಲಾಖೆ ತೀವ್ರ ಬೇಜವಾಬ್ದಾರಿ ತೋರಿಸುತ್ತಿದೆ. 2020 ರ ಪುಸ್ತಕ ಸರಬರಾಜು ಹಣ ಇನ್ನೂ ಬಂದಿಲ್ಲ..2021 ರಿಂದ 24 ರ ವರೆಗಿನ ಪುಸ್ತಕ ಖರೀದಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.ಇದರಿಂದಾಗಿ ಉತ್ಸಾಹಿ ಲೇಖಕರಿಗೆ ತೀವ್ರ ಬೇಸರ ಉಂಟಾಗಿದೆ .ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕೆಂದು ಡಾ. ಬೇರ್ಯ ರಾಮಕುಮಾರ್ ಒತ್ತಾಯಿಸಿದರು
ಎನ್. ವಿ.ರಮೇಶ್ ಅವರ ಸಮಗ್ರ ಮಕ್ಕಳ ಸಾಹಿತ್ಯ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ಭದ್ರಾವತಿ ರಾಮಾಚಾರಿ ಅವರು ಮಾತನಾಡಿ ಹಿಂದೆ ಪ್ರತಿಭೆಗಳಿಗೆ ಉತ್ತಮ ಪ್ರೋತ್ಸಾಹ ದೊರಕುತ್ತಿತ್ತು. ಹಿರಿಯರು ಏಣಿಗಳಾಗಿ ಅವರನ್ನು ಬೆಳೆಸುತ್ತಿದ್ದರು. ಇದೀಗ ಕಾಲು ಎಳೆಯುವವರೆ ಹೆಚ್ಚಾಗಿದ್ದಾರೆ.ಪುಸ್ತಕ ಕೊಂಡು ಓದುವ ಸಂಸ್ಕೃತಿ ಕಾಣೆಯಾಗಿದೆ. ಸಾಹಿತ್ಯ,ಸಂಸ್ಕೃತಿ,ಕಲೆ ಕುರಿತು ಸಾರ್ವಜನಿಕರಿಗೂ ಆಸಕ್ತಿ ಇಲ್ಲ,ಸರ್ಕಾರಕ್ಕೂ ಆಸಕ್ತಿ ಇಲ್ಲ. ಇದರಿಂದಾಗಿ ಕನ್ನಡ ಭಾಷೆ ನೇಪಥ್ಯಕ್ಕೆ ಸರಿಯುವ ವಾತಾವರಣ ಉಂಟಾಗಿದೆ. ಕನ್ನಡ ನಾಡು- ನುಡಿಯ ಉಳಿವಿಗಾಗಿ ಕನ್ನಡಿಗರು ದ್ವನಿ ಎತ್ತಬೇಕಿದೆ ಎಂದು ಕರೆ ನೀಡಿದರು.
ಹಿರಿಯ ಹೈಕೋರ್ಟ್ ವಕೀಲ ಹಾಗೂ ಸಾಹಿತಿಗಳಾದ ಡಾ. ರೇವಣ್ಣ ಬಳ್ಳಾರಿ ಮಾತನಾಡಿ ಏಳು ವರ್ಷದ ಬಾಲ್ಯದಲ್ಲಿಯೇ ಕಲಾ ಕ್ಷೇತ್ರ ಪ್ರವೇಶಿಸಿ 73 ವರ್ಷದಲ್ಲಿಯೂ ಸಾಹಿತ್ಯ,ಕಲೆ ,ಸಂಸ್ಕೃತಿ ಕ್ಷೇತ್ರಗಳ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಎನ್. ವಿ.ರಮೇಶ್ ಅವರು ಸಾಮಾಜಿಕ ವೈದ್ಯರು ಎಂದು ಬಣ್ಣಿಸಿದರು.ಆಕಾಶವಾಣಿ ಕಾರ್ಯಕ್ರಮ ಅಧಿಕಾರಿಗಳಾದ ಎನ್. ವಿ.ರಮೇಶ್ ಅವರು ಜನಸಾಮಾನ್ಯರ ನಿಕಟ ಸಂಪರ್ಕ ಹೊಂದಿದವರು. ಆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ,ಸಮಾಜಕ್ಕೆ 90 ಕ್ಕು ಹೆಚ್ಚು ಉಪಯುಕ್ತ ಕೃತಿಗಳನ್ನು ನೀಡಿದ್ದಾರೆ.ಇವರ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಮೊಬೈಲ್ ಹಾಗೂ ಡಿಜಟೀಲೀಕರಣದಿಂದಾಗಿ ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ.ಕನ್ನಡ ನಾಡು,ನುಡಿ ಉಳಿಸಲು ಹೊಸ ಆಲೋಚನೆಯತ್ತ ಸಾಗುವ ಸಮಯ ಬಂದಿದೆ ಎಂದವರು ಅಭಿಪ್ರಾಯಪಟ್ಟರು.
ಸಾಹಿತಿಗಳಾದ ಶ್ರೀಮತಿ ಲತಾ ಮೋಹನ್, ಸುಜಾತ ರವೀಶ್,ಭಾಗ್ಯಲಕ್ಷ್ಮಿ ನಾರಾಯಣ್,ಶಿಕ್ಷಕ ಡಾ. ಹೇಮಂತ ಕುಮಾರ್,ಕೃತಿಗಳ ಲೇಖಕರಾದ ಎನ್. ವಿ.ರಮೇಶ್ ಮೊದಲಾದವರು ವೇದಿಕೆಯಲ್ಲಿ ಮಾತನಾಡಿದರು
ಶ್ರೀಮತಿ ಕೆ. ಪಿ.ಭಾರತಿ ಕಾರ್ಯಕ್ರಮ ನಿರ್ವಹಿಸಿದರು. ಅಭಿರುಚಿ ಬಳಗದ ಕಾರ್ಯದರ್ಶಿ ಶ್ರೀಮತಿ ಉಮಾ ರಮೇಶ್ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಎನ್. ವಿ.ರಮೇಶ್ ನೇತೃತ್ವದಲ್ಲಿ ನಾನೇನು ಮಾಡಲಿ ಎಂಬ ನಾಟಕವನ್ನು ಅಭಿನಯಿಸಲಾಯ್ತು.
ಹಿರಿಯ ಕಲಾವಿದರಾದ ಅಭಿನವ ಭಾರ್ಗವ ಕೆಂಪರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.