ಬೆಳಗಾವಿ: ಸೊನ್ನಲಿಗೆ ಸಿದ್ದರಾಮೇಶ್ವರರು ತಮ್ಮ ಜೀವನ ಹಾಗೂ ವಚನಗಳ ಮೂಲಕ ಭಕ್ತಿ, ಜ್ಞಾನ, ಅಧ್ಯಾತ್ಮ, ಕಾಯಕನಿಷ್ಠೆ, ದಾಸೋಹ, ಅಂತರಂಗ ಶುದ್ಧಿ, ನಡೆನುಡಿ ಸಾಮರಸ್ಯ, ಪರೋಪಕಾರ, ಡಾಂಬಿಕತೆ ಮತ್ತು ಮೂಢನಂಬಿಕೆ ವಿರೋಧ, ವೈಚಾರಿಕತೆಯಂತಹ ಸಾರ್ವತ್ರಿಕ ಆದರ್ಶಗಳನ್ನು ಪ್ರತಿಪಾದಿಸಿದರು. ಅವರ ತತ್ವಗಳನ್ನು ಪಾಲಿಸಿದರೆ ನೆಮ್ಮದಿಯುತ ಬದುಕು ನಮ್ಮದಾಗುತ್ತದೆ ಎಂದು ಯರಗಟ್ಟಿಯ ಸಿ.ಎಂ ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ (ಜ.20) ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ಧಾರಮೇಶ್ವರರ ಜೀವನ ಹಾಗೂ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದ ಅವರು, ಯಾವುದೇ ತತ್ವ ಸಿದ್ಧಾಂತಗಳಿಗೆ ಕಟ್ಟು ಬೀಳದೆ ಸಂಕ್ರಾಂತಿಯ ಸೂರ್ಯನಂತೆ ತಮ್ಮ ಪಥ ಬದಲಿಸಿ ಕಾಯಕಯೋಗಿಯಿಂದ ಶಿವಯೋಗಿಯಾಗಿ ಪರಿವರ್ತನೆಗೊಂಡ ಸಿದ್ದರಾಮೇಶ್ವರರು 12ನೇ ಶತಮಾನದ ಬಸವಾದಿ ಶರಣರಲ್ಲಿ ವಿಶಿಷ್ಟ ವ್ಯಕ್ತಿತ್ವದವರಾಗಿದ್ದಾರೆ ಎಂದರು.
ಶಿವಯೋಗಿ ಸಿದ್ದರಾಮೇಶ್ವರರು ಈಗಿನ ಮಹಾರಾಷ್ಟ್ರದ ಸೊಲ್ಲಾಪುರ ಭಾಗದವರು. ಇವರು ಸಾಕಷ್ಟು ವಚನಗಳನ್ನು ರಚಿಸಿದ್ದು, ಎರಡು ಸಾವಿರ ವಚನಗಳು ಲಭ್ಯವಿವೆ. ಆಧ್ಯಾತ್ಮಿಕತೆಯಡೆ ಹೆಚ್ಚಿನ ಒಲವು ನೀಡಿದ ಇವರು ಪ್ರತಿಯೊಂದು ಜೀವಿಯಲ್ಲಿ ದೇವರನ್ನು ಕಾಣಬೇಕು. ಅಹಿಂಸೆ, ಸಮಾನತೆ, ಕಾಯಕನಿಷ್ಠೆ, ನಿಸ್ವಾರ್ಥ ಬದುಕುಗಳನ್ನು ತಮ್ಮ ತತ್ವಗಳನ್ನಾಗಿಸಿದರು.
ಸೊಲ್ಲಾಪೂರ ಭಾಗಗಳಲ್ಲಿ ಜನ ಜಾನುವಾರುಗಳು, ಪಕ್ಷಿಗಳಿಗಾಗಿ ಕೆರೆ, ಬಾವಿ, ಅನ್ನಛತ್ರ, ಅರವಟ್ಟಿಗೆ ಹಾಗೂ ದೇವಾಲಯಗಳನ್ನು ನಿರ್ಮಿಸಿದ ಸಿದ್ಧರಮೇಶ್ವರರು ತಮ್ಮ ಜೀವಮಾನವೀಡಿ ಲೋಕೋಪಯೋಗಿ ಕಾರ್ಯಗಳನ್ನು ಕೈಗೊಂಡಿದ್ದರು. ಉತ್ತಮ ಜೀವನಕ್ಕಾಗಿ ಪ್ರತಿಯೊಬ್ಬರು ಇವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಸಿದ್ಧರಮೇಶ್ವರರಾದಿಯಾಗಿ ಎಲ್ಲ ಶರಣರ ಸಂದೇಶಗಳು ಸಾರ್ವಕಾಲಿಕ ಹಾಗೂ ಸಾರ್ವತ್ರಿಕ ಅನುಸರಣಯೋಗ್ಯವಾದವುಗಳಾಗಿವೆ. ಅಂಥವುಗಳಲ್ಲಿ ಒಂದಂಶವಾದರೂ ಅಳವಡಿಸಿಕೊಂಡರೆ ಮಾತ್ರ ಇಂತಹ ಉತ್ಸವಗಳು ಸಾರ್ಥವಾಗುತ್ತವೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೋನಕೆರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಭೋವಿ ವಡ್ಡರ ಸಮಾಜದ ಗೌವರವಾಧ್ಯಕ್ಷರಾದ ಕೆ.ಎಸ್ ಮಮದಾಪುರ, ಅಧ್ಯಕ್ಷ ಲಕ್ಷ್ಮಣ ಗಾಡಿವಡ್ಡರ ಹಾಗೂ ಸಮಾಜದ ಮುಖಂಡರಾದ ಆರ್.ಚಿ ಬಂಡಿವಡ್ಡರ, ಲಕ್ಷ್ಮಣ, ಬಾಬು ಕಾಗಲಕರ ಉಪಸ್ಥಿತರಿದ್ದರು.

