ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ದೇಶಕ ಕರಣಕುಮಾರ್
ಬಾಗಲಕೋಟೆ – ಬಾಗಲಕೋಟೆ ಜಿಲ್ಲೆಯ ಎಲ್ಲ ಕಲಾವಿದರ ಪ್ರಾಥಮಿಕ ಕುಂದು ಕೊರತೆಗಳನ್ನು ತೀವ್ರಗತಿಯಲ್ಲಿ ಸರಿಪಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮಾಜಿ ಶಾಸಕ ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್ .ಜಿ .ನಂಜಯ್ಯನಮಠ ಸೂಚಿಸಿದರು.
ಅವರು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ನಿಯೋಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಭವನದ ಎದುರು ಜಮಾಯಿಸಿಕೊಂಡು ಹಲವು ಪ್ರಾಥಮಿಕ ಸಮಸ್ಯೆಗಳನ್ನು ಹೇಳಿದರು .
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಪವಿತ್ರ ಜಕ್ಕಪ್ಪನವರ್ ಮಾತನಾಡಿ, ಮಾಜಿ ಶಾಸಕ ನಂಜಯ್ಯನ ಮಠ ಹಾಗೂ ಸಹಾಯಕ ನಿರ್ದೇಶಕ ಕರಣಕುಮಾರ ಜೈನಾಪುರ ಅವರ ಗಮನಕ್ಕೆ ತರಲು ಪ್ರಯತ್ನಿಸಿದರು.
ಹಲವು ವರ್ಷಗಳಿಂದ ಇಲ್ಲಿಯವರೆಗೆ ನಡೆದ ಹಲವು ನ್ಯೂನತೆಗಳನ್ನು ಸಾದರಪಡಿಸಿದ ಅವರು ಸೇವೆ ಸಲ್ಲಿಸಿದ ಕಲಾವಿದರ ಸಮಸ್ಯೆಗಳನ್ನು ಪರಿಶೀಲಿಸಿ ತೀವ್ರಗತಿಯಲ್ಲಿ ನ್ಯಾಯವನ್ನು ಒದಗಿಸಿಕೊಡಬೇಕೆಂದು ಕೇಳಿಕೊಂಡರು. ಮುಂದುವರೆದು ಮಾತನಾಡಿದ ನಂಜಯ್ಯನಮಠ ಅವರು ಮಾಸಾಶನ ಮಂಜೂರಾತಿಯಲ್ಲಿ ವಿಳಂಬವಾಗಿರುವ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ಅರ್ಹಕಲಾವಿದರಿಗೆ ಶೀಘ್ರ ಮಾಸಾಶನ ಒದಗಿಸಿಕೊಡಲು ಜಾನಪದ ಅಕಾಡೆಮಿಗೆ ಶಿಫಾರಸ್ ಪತ್ರ ನೀಡಲು ಸಹಾಯಕ ನಿರ್ದೇಶಕ ಕರಣಕುಮಾರ ಅವರಿಗೆ ಹೇಳಿ ಮಾಸಾಶನ ಫಾರ್ಮಗಳು ಬಂದ ನಂತರ ಕಲಾವಿದರಿಗೆ ಮಾಹಿತಿ ನೀಡಿ ಫಾರ್ಮಗಳನ್ನು ಒದಗಿಸಲು ತಿಳಿಸಿದರು.
ಮುಖಂಡರಾದ ಯಲ್ಲಪ್ಪ ಪೂಜಾರ್, ಶಂಕರಪ್ಪ ತಂಬಾಕದ, ರಾಮಪ್ಪ ಗಲಗಲಿ,ನಾರಾಯಣ ಪತ್ತಾರ್, ಹೊಳೆ ಬಸಪ್ಪ ಬಾದಾಮಿ, ಮಲ್ಲಮ್ಮ ಶಿರೋಳ, ಬಸಮ್ಮ ಭಗವತಿ, ಪರಯ್ಯ ಮಠಪತಿ,ವಿಠ್ಠಲ್ ತಳವಾರ್ ಸೇರಿದಂತೆ ನೂರಾರು ಕಲಾವಿದರು ಪಾಲ್ಗೊಂಡಿದ್ದರು. ಕಲಾವಿದರ ಸಮಸ್ಯೆಗಳನ್ನು ಆಲಿಸಿದ ಕರಣ್ ಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.