- Advertisement -
ಗೋಕಾಕ – ಯಶಸ್ವಿ ಮೂರನೇ ಬಾರಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇಶದ ಸಮಗ್ರತೆ, ಸುರಕ್ಷತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ದೇಶದ ಜನರು ಬಿಜೆಪಿ ಪರವಾಗಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಮೋದಿಯವರ ಸಮರ್ಥ ಆಡಳಿತಕ್ಕೆ ಇಡೀ ರಾಷ್ಟ್ರವೇ ಫೀದಾ ಆಗಿದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಭರ್ಜರಿಯಾಗಿ ಜಯಗಳಿಸಿದ್ದು, ನಮ್ಮ ಜಿಲ್ಲೆಯ ಎಲ್ಲ ಮುಖಂಡರು ಒಂದಾಗಿ- ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಗದೀಶ್ ಶೆಟ್ಟರ್ ಜಯಗಳಿಸಿದ್ದಾರೆ. ಮತ ನೀಡಿ ಆಶೀರ್ವದಿಸಿದ ಸಮಸ್ತ ಮತದಾರರು, ಗೆಲುವಿಗೆ ದುಡಿದಿರುವ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುವೆ ಎಂದು ಅವರು ತಿಳಿಸಿದ್ದಾರೆ.