ಬೀದರ: ತಮ್ಮ ಮಗನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಡು ದೇವಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಬೀದರ್ ಜಿಲ್ಲೆ ಚಿಟ್ಟಗುಪ್ಪ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತು ಪ್ರಾರ್ಥನೆ ಮಾಡುತ್ತ ಪುತ್ರ ಫಯಾಜ್ ಇಬ್ರಾಹಿಂ ಅವರಿಗೆ ಹುಮನಾಬಾದ್ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಸಿಗುವುದು ಪಕ್ಕಾ ಆಗಿದೆ. ಬೀದರ್ ಜಿಲ್ಲೆ ಹುಮನಬಾದ ಕ್ಷೇತ್ರ ಮುಸ್ಲಿಂ ಬಾಹುಳ್ಯ ಇರುವ ಮತ ಕ್ಷೇತ್ರವಾಗಿದ್ದು, ಮಗನನ್ನು ಗೆಲಿಅಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಈ ನಡುವೆ, ಬೀದರ್ನ ಚಿಟಗುಪ್ಪ ತಾಲೂಕಿನ ಹಜ್ರತ್ ಸಯ್ಯದ್ ಮಖ್ಬೂಬ್ ಹುಸೇನಿ ದರ್ಗಾಕ್ಕೆ ಪುತ್ರನೊಂದಿಗೆ ಭೇಟಿ ನೀಡಿದ ಸಿ ಎಂ ಇಬ್ರಾಹಿಂ ಅಲ್ಲಿನ ಗೋರಿಯ ಮುಂದೆ ನಿಂತು ಬಿಕ್ಕಿಬಿಕ್ಕಿ ಅಳುತ್ತಾ ಕಣ್ಣೀರು ಹಾಕಿದ್ದಾರೆ.
ಏಳು ನೂರು ಕಿ.ಮೀ ದೂರದಿಂದ ಮಗ ಬಂದಿದ್ದಾನೆ ನನ್ನ ಮಗನನ್ನು ನೀನೇ ರಕ್ಷಿಸಬೇಕು. ಅವನಿಗೆ ಜಯವನ್ನು ಕರುಣಿಸಬೇಕು. ಅವನನ್ನು ಕಾಪಾಡಬೇಕು. ನಿನ್ನ ಮುಂದೆ ನಾನು ಪ್ರಾರ್ಥನೆ ಮಾಡುತ್ತಿದ್ದೇನೆʼ ಎಂದು ದೇವನ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾರೆ ಸಿ ಎಂ ಇಬ್ರಾಹಿಂ.
ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಾವುಕರಾಗಿ ಕಣ್ಣೀರು ಬರುವುದು ನಿಜ. ಆದರೆ, ಸಿ.ಎಂ. ಇಬ್ರಾಹಿಂ ಅವರು ಆ ಭಾಗದ ಮುಸ್ಲಿಮರನ್ನು ಓಲೈಸುವುದಕ್ಕಾಗಿ ದರ್ಗಾದಲ್ಲಿ ಕಣ್ಣೀರು ಹಾಕಿದರೇ ಎಂಬ ಪ್ರಶ್ನೆಯೂ ಎದ್ದುಬಂದಿದೆ.
ಜೆಡಿಎಸ್ ನಾಯಕರಾಗಿರುವ ಕುಮಾರಸ್ವಾಮಿ ಅವರಂತೂ ಸಾರ್ವಜನಿಕವಾಗಿ ಭಾವುಕರಾಗುವುದಕ್ಕೆ ಪ್ರಸಿದ್ಧಿಯನ್ನೇ ಪಡೆದಿದ್ದಾರೆ. ಅದು ಕೆಲವು ಕಡೆ ಉತ್ತಮ ಫಲಿತಾಂಶವನ್ನೇ ನೀಡಿದೆ.ಈಗ ಸಿ.ಎಂ. ಇಬ್ರಾಹಿಂ ಅವರು ಕೂಡಾ ಇದೇ ದಾರಿಯನ್ನು ಹಿಡಿದಿದ್ದಾರೆ ಎಂಬ ಸಂಶಯವೂ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ಹುಮನಾಬಾದ ಕ್ಷೇತ್ರದ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ