ಕಾವ್ಯದ ಮರಣ ಶಾಸನ
ಬರೆಯಲಾರೆ ಮತ್ತೆಂದಿಗೂ ಕವಿತೆ ಮನುಷ್ಯನೊಳಗಿನ ಮನಸ್ಸಿನ ಕಲೆ;
ನಾಜೂಕಿನಲಿ ಮಲಗಿಬಿಟ್ಟಿವೆ ಇಲ್ಲಿ
ಓದುಗರಿಲ್ಲದೆ ಬರೆದ ಸಾಲುಗಳು,
ಬಾಯ್ದೆರೆದ ಎರೆಬೀಡಿನಂತೆ.
ಅಕ್ಷರಗಳು ಹೂ ಮುಡಿದರೂ
ಕಳೆಗುಂದಿದ ಸಂಜೆಯಂತಿವೆ
ಮೋಬೈಲಿನ ಭಾವಕೋಶದಲಿ
ಬೆರಳುಗಳ ತೇವಕ್ಕೆ ಮರುಳಾಗಿ,
ಭಾವದ ಮೈಥುನದಲಿ ಬಿಸಿಯಾಗಿವೆ.
ಬೀಸುವ ಗಾಳಿ ಮೈಯ ಸವರುವಂತೆ,
ಪಾಳು ಹೊಲದಲಿ ಕವಣೆ ಬೀಸಿದಂತೆ;
ಕಳೆದುಕೊಂಡ ಸಮಯ, ತೊಳೆದುಕೊಂಡ ಭಾವ
ಅಷ್ಟಿಷ್ಟಲ್ಲ ನನ್ನ ಪಾಲಿಗೆ…
ನಾನು ಮುಪ್ಪಿಗೆ ಸರಿಯುವ ಹೊತ್ತಿಗೆ
ಯಾರನ್ನೂ ಕಾಡದೆ ಮೌನವಾಗುವೆ
ಬರೆಯಲಾರೆ ಮತ್ತೆಂದಿಗೂ ಕವಿತೆ.
ಆದರೂ…
ಬತ್ತದ ಸೆಲೆಯಂತೆ ಎದೆಯಾಳದಿ ಮತ್ತೆ ಚಿಗುರೊಡೆಯುವುದು ಮೌನದ ಅಕ್ಷರ;
ಬರೆಯಲಾರೆ ಅಂದರೂ ಸುಮ್ಮನಿರದು ಜೀವ
ಇದು ಅಂತರಾತ್ಮದ ಅವಿರತ ಸಾಕ್ಷಾತ್ಕಾರ.
ಯಾರೂ ಓದದಿದ್ದರೇನು?
ನನ್ನೊಳಗಿನ ಬೆಂಕಿಗೆ ನಾನೇ ಗಾಳಿಯಾಗುವೆ;
ಕತ್ತಲ ಹಾದಿಯಲಿ ನಂದದ ದೀಪವಾಗಿ
ಅಳಿವಿಲ್ಲದ ಪ್ರೀತಿಯ ಸಾಲುಗಳನು
ಮತ್ತೆ ಮತ್ತೆ ಬರೆಯುತ್ತಲೇ ಇರುವೆ.
ಬರಿ ಹಾಳೆಯ ಮೇಲೆ ಹರಿಸಿದ ರಕ್ತದಲಿ
ಜಿನುಗುತ್ತಿದೆ ನನ್ನ ಅಸ್ತಿತ್ವದ ನೋವು;
ಹಂಗಿನಲಿ ಬಂದ ಹರಟೆಯ ನಡುವೆ
ಬಲಿಯಾಗುತ್ತಿದೆ ಅಕ್ಷರಗಳ ಸಾವು.
ದೀಪವಿಲ್ಲದ ಮನೆಯಲಿ ಕಣ್ಣು ತೆರೆದಂತೆ
ಬೆಳಕಿಲ್ಲದ ಊರಿನಲಿ ಸದ್ದು ಮಾಡಿದಂತೆ;
ನನ್ನ ಕಾವ್ಯದ ಗರ್ಭಪಾತಕ್ಕೆ ಸಾಕ್ಷಿಯಾಗಿ
ಮತ್ತೆಂದೂ ಹುಟ್ಟದಂತೆ ಮಣ್ಣಾಗಲಿ ಭಾವನೆ
•••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

