ಸಿಂದಗಿ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷವಾಗಿ ಅಮೃತ ಮಹೋತ್ಸವ ಆಚರಣೆ ಮಾಡಿಕೋಳ್ಳುತ್ತಿದ್ದರೂ, ದಲಿತರ ಮೇಲೆ ಶೋಷಣೆ, ದೌರ್ಜನ್ಯ ಇನ್ನೂ ನಿಲ್ಲುತ್ತಿಲ್ಲ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಾಯ್ ಸಿ ಮಯೂರ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ದಲಿತ ಯುವಕನ ಮೇಲಾದ ಹಲ್ಲೆಯನ್ನು ಖಂಡಿಸಿ ಪ್ರತಿಭಟಸಿ ಪಿಎಎಸ್ಐ ಸೋಮೇಶ ಗೆಜ್ಜಿ ಹಾಗೂ ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಜಯಪೂರ ಜಿಲ್ಲೆಯ ಡೋಮನಾಳ ಗ್ರಾಮದಲ್ಲಿ ಜರುಗಿದ ಜಾತ್ರೆಯ ದಿನದಂದು ದಲಿತ ಯುವಕ ಸಾಗರ ಎಂಬ ಯುವಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಗಳು ದಲಿತರ ಮೇಲೆ ಪದೇ ಪದೇ ಮೇಲೆ ನಡೆಯುತ್ತಿದೆ. ಕಾರಣ ಇಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ ಮತ್ತು ಗ್ರಾಮದ ದಲಿತರಿಗೆ ಸರಕಾರ ಸೂಕ್ತ ಸಂರಕ್ಷಣೆ ನೀಡಬೇಕು. ತಕ್ಷಣ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೋಳ್ಳಬೇಕು. ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ ನೀಡಿ ರಾಜ್ಯದಲ್ಲಿರುವ ದಲಿತರ ರಕ್ಷಣೆಗೆ ಸೂಕ್ತ ಕಾನೂನನ್ನು ಜಾರಿಗೆ ತರಬೇಕು. ಕೂಡಲೇ ಜಿಲ್ಲಾಡಳಿತವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ದಸ್ತಗಿರ ಮುಲ್ಲಾ, ದ.ಸಂ.ಸ ತಾಲೂಕಾಧ್ಯಕ್ಷ ಶರಣು ಛಲವಾದಿ, ದ.ಸಂ.ಸ ತಾಲೂಕು ಸಂಚಾಲಕ ಶಿವಪುತ್ರ ಮೇಲಿನಮನಿ, ಪರಶುರಾಮ ಬ್ಯಾಕೊಡ, ರಾಜು ಖಾನಾಪುರ, ಜೈಭೀಮ ತಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.