ಸರ್ವಾಧ್ಯಕ್ಷ ಡಾ. ಜಕಬಾಳರಿಗೆ ಆಮಂತ್ರಣ
ಯರಗಟ್ಟಿ ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ನವೆಂಬರ್ ೩೦ರಂದು ನಡೆಯಲಿದ್ದು, ಕೆ.ಸ್.ಎಸ್. ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಹಾಗೂ ಜನಪದ ತಜ್ಞ ಡಾ. ಸಿದ್ದಣ್ಣ ಜಕಬಾಳ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯರಗಟ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸತ್ತಿಗೇರಿ ಗ್ರಾಮಸ್ಥರು ಇಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸಿದ್ದಣ್ಣ ಎಫ್. ಜಕಬಾಳ ಅವರ ಸ್ವಗ್ರಾಮ ಬೆನಕಟ್ಟಿಯಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಧಿಕೃತ ಆಮಂತ್ರಣ ನೀಡಿದರು. ಕ.ಸಾ.ಪ. ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಜನಪದ ಕಲೆಗಳ ಸಂವರ್ಧನೆಗೆ ಡಾ. ಜಕಬಾಳ ಅವರ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಜಕಬಾಳ ಅವರು, ಶ್ರೀವಿಜಯ ಹೇಳುವ ತಿರುಳ್ಗನ್ನಡ ಪ್ರದೇಶದ ಸೀಮೆಯಾದ ಯರಗಟ್ಟಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಮನಸ್ಪೂರ್ವಕವಾಗಿ ಸ್ವೀಕರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ವಾಲಿ, ಎಸ್.ಎಸ್. ಕುರುಬಗಟ್ಟಿಮಠ, ಡಾ. ರಾಜಶೇಖರ ಬಿರಾದಾರ, ದೇವೇಂದ್ರ ಕಮ್ಮಾರ, ಶಿವಕುಮಾರ ಜಕಾತಿ ಹಾಗೂ ಸತ್ತಿಗೇರಿ ಗ್ರಾಮದ ಮಹಾಂತೇಶ ಗೋಡಿ, ಗೌಡಪ್ಪ ಸವದತ್ತಿ ಮುಂತಾದವರು ಉಪಸ್ಥಿತರಿದ್ದರು.